ಧಾರವಾಡ : ಸ್ವಾಧೀನಪಡಿಸಿಕೊಂಡ ಜಮೀನಿಗೆ ಸಂಬಂಧಿಸಿದಂತೆ ರೈತನಿಗೆ ಬಾಕಿ ಹಣವನ್ನು ಕೊಡದ ಹಿನ್ನೆಲೆ ನ್ಯಾಯಾಲಯದ ಆದೇಶದಂತೆ ಧಾರವಾಡ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿನ ಸಾಮಾನುಗಳನ್ನು ಜಪ್ತಿ ಮಾಡಲಾಯಿತು.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕೊಂಡಿಕೊಪ್ಪ ಗ್ರಾಮದ ರೈತ ನಾಗನಗೌಡ ಪಾಟೀಲ ಎಂಬುವವರಿಗೆ ಸೇರಿದ ಎರಡು ಎಕರೆ ಜಮೀನನ್ನು ರುದ್ರಭೂಮಿಗಾಗಿ 2010ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆಗ ಪ್ರತಿ ಗುಂಟೆ ಜಮೀನಿಗೆ 10,500 ರೂ. ಲೆಕ್ಕ ಹಾಕಿ 2 ಎಕರೆ ಜಮೀನಿಗೆ 35 ಲಕ್ಷ ಪರಿಹಾರ ನೀಡುವ ಭರವಸೆಯನ್ನು ಜಿಲ್ಲಾಡಳಿತ ನೀಡಿತ್ತು. ಆ ಪ್ರಕಾರ ರೈತನಿಗೆ 20 ಲಕ್ಷ ಹಣ ನೀಡಿ 15 ಲಕ್ಷ ಹಣವನ್ನು ಬಾಕಿ ಇರಿಸಿಕೊಳ್ಳಲಾಗಿತ್ತು.
ಹಲವು ಬಾರಿ ರೈತ ಬಾಕಿ ಹಣ ನೀಡುವಂತೆ ಮನವಿ ಮಾಡಿದ್ದರೂ ಉಪವಿಭಾಗಾಧಿಕಾರಿಗಳು ತಲೆ ಕೆಡಿಸಿಕೊಂಡಿರಲಿಲ್ಲ. ಹೀಗಾಗಿ ರೈತ ನಾಗನಗೌಡ ಕೋರ್ಟ್ ಮೊರೆ ಹೋಗಿದ್ದರು. ಇಂದು (ಏ.27) ಧಾರವಾಡದ 2ನೇ ಅಧಿಕ ದಿವಾಣಿ ನ್ಯಾಯಾಲಯ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಜಪ್ತಿ ಮಾಡುವಂತೆ ಆದೇಶ ಮಾಡಿತ್ತು. ಆ ಹಿನ್ನೆಲೆ ಕೋರ್ಟ್ ಸಿಬ್ಬಂದಿ ಪೀಠೋಪಕರಣಗಳನ್ನು ಜಪ್ತಿ ಮಾಡಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.















