ಬೆಂಗಳೂರು : ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಬಾಲಕನೋರ್ವ ದಾರುಣವಾಗಿ ಮೃತಪಟ್ಟಿರುವ ದುರ್ಘಟನೆ ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆಯಲ್ಲಿ ನಡೆದಿದೆ. 9ನೇ ತರಗತಿ ಪಾಸ್ ಆಗಿದ್ದ ವರುಣ್(15) ಮೃತ ದುರ್ದೈವಿ. ನೀರು ತರಲು ಹೋಗಿದ್ದ ಈತ ಮನೆಗೆ ವಾಪಸ್ ಬರುವಾಗ ಬಸ್ ಡಿಕ್ಕಿಯಾಗಿದ್ದು, ಘಟನಾ ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಘಟನೆ ಸಂಬಂಧ ಖಾಸಗಿ ಬಸ್ನ ಹೆಣ್ಣೂರು ಸಂಚಾರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮನೆಮಗನ ದಾರುಣ ಸಾವಿಗೆ ಆಕ್ರೋಶ ವ್ಯಕ್ತಪಡಿಸಿರುವ ಮೃತ ಬಾಲಕನ ಕುಟುಂಬಸ್ಥರು ಘಟನೆ ಖಂಡಿಸಿ ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದ ಪ್ರಸಂಗವೂ ನಡೆದಿದೆ. ರಸ್ತೆ ತಡೆ ಹಿನ್ನೆಲೆ ಬಾಗಲೂರು ರಸ್ತೆಯಲ್ಲಿ ಕಿಲೋಮೀಟರ್ವರೆಗೆ ಟ್ರಾಫಿಕ್ಜಾಮ್ ಉಂಟಾಗಿ ವಾಹನ ಸವಾರರು ಪರದಾಟ ನಡೆಸಬೇಕಾಯಿತು. ಆ ಬೆನ್ನಲ್ಲೇ ಸ್ಥಳೀಯರು ಮತ್ತೆ ರೋಡ್ ಬಂದ್ ಮಾಡಿ ಪ್ರತಿಭಟನೆ ನಡೆಸುವ ಸಾಧ್ಯತೆ ಇರುವ ಮಾಹಿತಿ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೋಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಬಾಲಕ ವರುಣ್ ಸಾವಿಗೆ ವೈಟ್ ಟಾಪಿಂಗ್ ಕಾಮಗಾರಿಯೇ ಕಾರಣ ಎಂಬ ಆರೋಪ ಕೇಳಿಬಂದಿದೆ. ವೈಟ್ ಟಾಪಿಂಗ್ ಕಾಮಗಾರಿ ಬೇಕು ಅಂತ ಯಾರು ಕೇಳಿದ್ದು, ನಮಗೆ ಬೇಕಾಗಿರಲಿಲ್ಲ. ಚರಂಡಿ , ರೋಡ್ ಮಾಡಲು ಒಂದು ವರ್ಷ ಬೇಕು. ಅಲ್ಲದೆ ಕುಡಿಯುವ ನೀರಿನ ವ್ಯವಸ್ಥೆ ಊರಿನ ಒಳಗೆ ಇರಬೇಕು. ಅದನ್ನು ಬಿಟ್ಟು ಊರಿನ ಹೊರಗೆ ಮಾಡಲಾಗಿದೆ. ಇದರಿಂದ ಮಕ್ಕಳು ರೋಡ್ ಕ್ರಾಸ್ ಮಾಡಿಕೊಂಡು ನೀರು ತರಲು ಹೋಗ್ತಾರೆ.
ಕಾಮಗಾರಿ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿರುವ ಕಾರಣ ವೇಗವಾಗಿ ತೆರಳಲು ವಾಹನಗಳ ಚಾಲರು ಯತ್ನಿಸುತ್ತಿರೋದೇ ಅಪಘಾತಗಳಿಗೆ ಕಾರಣವಾಗುತ್ತಿದೆ. ತಂದೆಗೆ ಆರೋಗ್ಯ ಸರಿಯಿಲ್ಲದ ಕಾರಣ ಮನೆಗೆ ನೀರು ತರಲು ಆರ್ಓ ಪ್ಲಾಂಟ್ಗೆ ವರುಣ್ ತೆರಳಿದ್ದ ವರುಣ್ ಕೂಡ ಈಗ ಮೃತಪಟ್ಟಿದ್ದಾನೆ ಎಂದು ಪೋಷಕರು ಮತ್ತು ಸ್ಥಳೀಯರು ಆರೋಪಿಸಿದ್ದಾರೆ.















