ಮೈಸೂರು : ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಗೊಂದಲ ಮುಂದುವರಿಯುತ್ತಿರುವ ಬೆನ್ನಲ್ಲೇ, ಮಾಜಿ ಸಚಿವ ಕೆಎನ್ ರಾಜಣ್ಣ ನೀಡಿರುವ ಹೇಳಿಕೆ ಕುತೂಹಲ ಮೂಡಿಸಿದೆ. ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, ‘ನಮ್ಮ ಪಕ್ಷದಲ್ಲಿ ಸಿಎಂ ಆಗುವ ಅರ್ಹತೆಯುಳ್ಳ ಒಂದು ಡಜನ್ ನಾಯಕರಿದ್ದಾರೆ’ ಎಂದು ಹೇಳಿದ್ದಾರೆ.
‘ಸಿಎಂ ಬದಲಾಗುತ್ತಾರೆ ಎಂದು ನಾನು ಹೇಳಲ್ಲ, ಇರುತ್ತಾರೆ ಅಂತಾನೂ ಹೇಳಲ್ಲ. ಆದರೆ ಹೈಕಮಾಂಡ್ ಅತಿ ಬೇಗ ಈ ಬಗ್ಗೆ ಜಾಗರೂಕ ನಿರ್ಧಾರ ಕೈಗೊಳ್ಳಲಿ. ಈ ಗೊಂದಲ ಮುಂದುವರಿದಷ್ಟು ಪಕ್ಷ ಮತ್ತು ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆ. ಸಿದ್ದರಾಮಯ್ಯ ಅವರಿಗೆ ಪರಿಪೂರ್ಣ ಅಧಿಕಾರ ಮುಂದುವರಿಸಿ ಅಂತಾದರೂ ಹೇಳಲಿ ಅಥವಾ ಬದಲಾವಣೆ ಮಾಡುವುದಿದ್ದರೆ ಅದನ್ನಾದರೂ ವರಿಷ್ಠರು ಸ್ಪಷ್ಟಪಡಿಸಲಿ’ ಎಂದು ರಾಜಣ್ಣ ಆಗ್ರಹಿಸಿದರು.
ಇದೇ ವೇಳೆ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಶೀಘ್ರವೇ ಶುಭಸುದ್ದಿ ಸಿಗಲಿದೆ ಎಂಬ ಅವರ ಬೆಂಬಲಿಗರ ಮಾತಿಗೆ ಪ್ರತಿಕ್ರಿಯಿಸಿದ ರಾಜಣ್ಣ, ‘ಜೀವನದಲ್ಲಿ ಆಶಾಭಾವನೆ ಇಟ್ಟುಕೊಳ್ಳುವುದು ಸಹಜ. ಡಿಕೆ ಶಿವಕುಮಾರ್ ಅವರು ನಮ್ಮ ಪಕ್ಷದ ಅಧ್ಯಕ್ಷರು, ಅವರಿಗೆ ಸಿಎಂ ಕುರ್ಚಿ ಮೇಲೆ ಆಸೆ ಇರುವುದು ಸಹಜ ಮತ್ತು ಜಾಸ್ತಿಯೇ ಇದೆ. ಆದರೆ ನಮ್ಮಲ್ಲಿ ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್ ಸೇರಿದಂತೆ ಬಹಳ ಜನ ಸಮರ್ಥ ನಾಯಕರಿದ್ದಾರೆ’ ಎಂದು ಹೇಳಿದರು.
















