ಚೆನ್ನೈ : ದಳಪತಿ ಚುನಾವಣೆಯಲ್ಲಿ ಗೆಲ್ಲುವುದಾಗಿ ಭವಿಷ್ಯ ನುಡಿದಿದ್ದ ಜ್ಯೋತಿಷಿಯವರನ್ನೇ ಇದೀಗ ವಿಶೇಷ ಕರ್ತವ್ಯಾಧಿಕಾರಿಯಾಗಿ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ನೇಮಿಸಿದ್ದಾರೆ. ಜ್ಯೋತಿಷಿ ರಾಧನ್ ಪಂಡಿತ್ ವೆಟ್ರಿವೇಲ್ ಅವರು ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ಟಿವಿಕೆ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದರು. ಅವರು ನುಡಿದಂತೆ ಟಿವಿಕೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಗೆಲುವು ಸಾಧಿಸಿದೆ. ಜೊತೆಗೆ ವಿಜಯ್ ಸಿಎಂ ಗದ್ದುಗೆ ಏರಿದ್ದಾರೆ. ಪ್ರಾರಂಭದಿಂದಲೂ ಜ್ಯೋತಿಷಿಯವರು ವಿಜಯ್ಗೆ ಸಲಹೆಗಳನ್ನು ನೀಡುತ್ತಾ ಬಂದಿದ್ದರು. ಇದೀಗ ವಿಜಯ್ ಸಿಎಂ ಆದ ನಂತರ ಜ್ಯೋತಿಷಿಯವರ ಅದೃಷ್ಟವೇ ಬದಲಾಗಿದ್ದು, ಸಿಎಂ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ತಮಿಳುನಾಡು ರಾಜ್ಯಪಾಲರು ಆರಂಭದಲ್ಲಿ ಸರ್ಕಾರ ರಚನೆಗೆ ಒಪ್ಪದ ನಂತರವೂ ಕೊನೆಗೆ ಬೆಂಬಲ ಸೂಚಿಸಿದ ಶಾಸಕರ ಸಹಿಯೊಂದಿಗೆ ಭೇಟಿ ನೀಡಿ, ಮೇ 10ರಂದು ತಮಿಳುನಾಡು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಆ ದಿನವೂ ಕೂಡ ಮೊದಲು ಮಧ್ಯಾಹ್ನ 3:45ಕ್ಕೆ ಪ್ರಮಾಣವಚನ ಸ್ವೀಕರಿಸುವುದಾಗಿ ಸಮಯ ನಿಗದಿಪಡಿಸಲಾಗಿತ್ತು. ಆದರೆ ಜ್ಯೋತಿಷಿಯವರ ಸಲಹೆ ಮೇರೆಗೆ ಬಳಿಕ ಬೆಳಿಗ್ಗೆ 10 ಗಂಟೆಗೆ ಸಮಯ ಬದಲಾವಣೆ ಮಾಡಲಾಯಿತು.
ವಿಜಯ್ ಮಾತ್ರವಲ್ಲದೇ, ಜಯಲಲಿತಾ ಸೇರಿದಂತೆ ಹಲವಾರು ಪ್ರಮುಖ ರಾಜಕಾರಣಿಗಳು ಇದೇ ಜ್ಯೋತಿಷಿ ರಾಧನ್ ಪಂಡಿತ್ ವೆಟ್ರಿವೇಲ್ ಅವರ ಬಳಿ ಭವಿಷ್ಯ ಕೇಳಿದ್ದರು ಎನ್ನಲಾಗಿದೆ. ಆ ಪೈಕಿ ವಿಜಯ್ ಗೆದ್ದಾಗ ವೆಟ್ರಿವೇಲ್ ಅವರು ಮನೆಗೆ ಹೋಗಿ ಅಭಿನಂದನೆ ಸಲ್ಲಿಸಿದ್ದರು. ನಾಲ್ಕು ದಶಕಗಳಿಂದ ಜ್ಯೋತಿಷ್ಯ ಕ್ಷೇತ್ರದಲ್ಲಿರುವ ವೆಟ್ರಿವೇಲ್ ಅವರು ಹಲವಾರು ರಾಜಕೀಯ ದಿಗ್ಗಜರ ಭವಿಷ್ಯ ನುಡಿದಿದ್ದಾರೆ. ಆದರೆ ಸ್ವತಃ ತಾವು ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಎನ್ನುವ ಬಗ್ಗೆ ಭವಿಷ್ಯ ನುಡಿದಿದ್ರಾ ಎನ್ನುವ ಕುರಿತು ಅಧಿಕೃತವಾಗಿ ತಿಳಿದುಬಂದಿಲ್ಲ. ಅಲ್ಲದೇ ಮಾಜಿ ಸಿಎಂ ಜಯಲಲಿತಾ ಅವರು ಕೂಡ ವೆಟ್ರಿವೇಲ್ ಅವರನ್ನು ಸಂಪರ್ಕಿಸಿದ ನಂತರವೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.















