ರಾಯ್ಪುರ : ವಿರಾಟ್ ಕೊಹ್ಲಿಯವರ ಅಜೇಯ ಶತಕದ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 6 ವಿಕೆಟ್ಗಳ ಜಯ ಸಾಧಿಸಿತು. ಇದರಿಂದ ಪಾಯಿಂಟ್ಸ್ ಟೇಬಲ್ನಲ್ಲಿ 16 ಅಂಕಗಳನ್ನು ಹೊಂದುವ ಮೂಲಕ ಅಗ್ರ ಸ್ಥಾನಕ್ಕೇರಿತು. ಈ ಮಧ್ಯೆ, ಆರ್ಸಿಬಿಯ ದ್ವಿತೀಯ ಇನಿಂಗ್ಸ್ ವೇಳೆ ಆರಂಭಿಕ ಆಟಗಾರ ಜಾಕೋಬ್ ಬೆಥೆಲ್ ತಮ್ಮ ಚಿನ್ನದ ಸರ ಕಳೆದುಕೊಂಡಿರುವ ಘಟನೆ ನಡೆದಿದೆ.
ಕಾರ್ತಿಕ್ ತ್ಯಾಗಿ ಎಸೆದ ಬೌನ್ಸರ್ ಎಸೆತವನ್ನು ಬಲವಾಗಿ ಬೀಸುವ ಪ್ರಯತ್ನದಲ್ಲಿ ಬಾಲ್ ಬೆಥೆಲ್ ಅವರ ಹೆಲ್ಮೆಟ್ಗೆ ಬಡಿದು ಆರ್ಸಿಬಿಯ ಮೊದಲ ವಿಕೆಟ್ ಪತನವಾಗಲು ಕಾರಣವಾಯಿತು. ಈ ವೇಳೆ ಬೆಥೆಲ್ ಅವರ ಚಿನ್ನದ ಸರ ನೆಲಕ್ಕೆ ಬಿದ್ದಿತ್ತು. 15 ರನ್ಗಳಿಗೆ ವಿಕೆಟ್ ಒಪ್ಪಿಸಿದ ಬೆಥೆಲ್ ಚಿನ್ನದ ಸರವನ್ನು ಮರೆತು ಮೈದಾನದಲ್ಲೇ ಬಿಟ್ಟು ಪೆವಿಲಿಯನ್ ಕಡೆ ತೆರಳಿದರು. ಬಳಿಕ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ದೇವದತ್ ಪಡಿಕಲ್ ಸರವನ್ನು ತೆಗೆದುಕೊಂಡು ಜಾಕೋಬ್ ಬೆಥೆಲ್ ಅವರಿಗೆ ಹಿಂದಿರುಗಿಸಿದರು.
ಟಾಸ್ ಸೊತು ಮೊದಲು ಬ್ಯಾಟ್ ಮಾಡಿದ್ದ ಕೆಕೆಆರ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 192 ರನ್ ಕಲೆಹಾಕಿತು. ಬಳಿಕ ಗುರಿ ಬೆನ್ನತ್ತಿದ ಆರ್ಸಿಬಿ ತಂಡ ಆರಂಭದಲ್ಲೇ ಜಾಕೋಬ್ ಬೆಥೆಲ್ ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕಲ್ 59 ಎಸೆತಗಳಲ್ಲಿ 92 ರನ್ಗಳ ಉತ್ತಮ ಜೊತೆಯಾಟವಾಡಿದರು. ಬಳಿಕ ದೇವದತ್ ಪಡಿಕಲ್ ಕಾರ್ತಿಕ್ ತ್ಯಾಗಿ ಅವರ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ನಂತರ ರಜತ್ ಪಟಿದಾರ್ 11 ರನ್ ಗಳಿಸಿ ಔಟಾದರೆ, ಟಿಮ್ ಡೇವಿಡ್ 2 ರನ್ಗೆ ವಿಕೆಟ್ ಕಳೆದುಕೊಂಡು ಈ ಪಂದ್ಯದಲ್ಲೂ ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ಡೇವಿಡ್ ಬಳಿಕ ಕ್ರೀಸ್ಗೆ ಬಂದ ಜಿತೇಶ್ ಶರ್ಮಾ ಅಜೇಯ 8 ರನ್ ಕಲೆಹಾಕಿದರು. ಇತ್ತ ಇನ್ನೊಂದು ಬದಿಯಲ್ಲಿ ವಿರಾಟ್ ಕೊಹ್ಲಿಯವರು ಗಟ್ಟಿಯಾಗಿ ನಿಂತು 60 ಎಸೆತಗಳಲ್ಲಿ 11 ಫೋರ್ ಹಾಗೂ 3 ಸಿಕ್ಸರ್ಗಳೊಂದಿಗೆ ಅಜೇಯ 105 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕೋಲ್ಕತ್ತಾ ಪರ ಕಾರ್ತಿಕ್ ತ್ಯಾಗಿ 3 ವಿಕೆಟ್ ಕಬಳಿಸಿದರೆ, ಸುನೀಲ್ ನರೈನ್ ನಾಯಕ ರಜತ್ ಪಟಿದಾರ್ ವಿಕೆಟ್ ಪಡೆದರು.
ಕೆಕೆಆರ್ ಪರ ಇನಿಂಗ್ಸ್ ಆರಂಭಿಸಿದ ಅಜಿಂಕ್ಯ ರಹಾನೆ ಹಾಗೂ ಫಿನ್ ಅಲೆನ್ ಬಹುಬೇಗನೆ ವಿಕೆಟ್ ಒಪ್ಪಿಸಿದರು. ರಹಾನೆ 13 ಎಸೆತಗಳಲ್ಲಿ 19 ರನ್ ಗಳಿಸಿ ಜೋಶ್ ಹೇಝಲ್ವುಡ್ ಅವರ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಫಿನ್ ಅಲೆನ್ ಇನಿಂಗ್ಸ್ ಆರಂಭದಲ್ಲಿ 8 ಎಸೆತಗಳಲ್ಲಿ 18 ರನ್ ಬಾರಿಸಿ ಎಲ್ಲರ ಗಮನ ಸೆಳೆದರೂ ಕೂಡ ಭುವನೇಶ್ವರ್ ಕುಮಾರ್ ಬೌಲಿಂಗ್ನಲ್ಲಿ ಜಿತೇಶ್ ಶರ್ಮಾ ಅವರಿಗೆ ಕ್ಯಾಚ್ ಕೊಟ್ಟು ಕ್ರೀಸ್ನಿಂದ ಹೊರ ನಡೆದರು.
ಬಳಿಕ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದ ಅಂಗ್ಕ್ರಿಶ್ ರಘುವಂಶಿ ಮತ್ತು ಕ್ಯಾಮರಾನ್ ಗ್ರೀನ್ ಮೂರನೇ ವಿಕೆಟ್ಗೆ 68 ರನ್ಗಳ ಉತ್ತಮ ಜೊತೆಯಾಟವಾಡಿದರು. ಗ್ರೀನ್ ಔಟಾದ ಬಳಿಕ ಫೀಲ್ಡ್ಗಿಳಿದ ರಿಂಕು ಸಿಂಗ್ ಅಜೇಯ 49 ರನ್ ಬಾರಿಸಿ ಆರ್ಸಿಬಿಗೆ 192 ರನ್ಗಳ ಸವಾಲಿನ ಗುರಿ ನೀಡಲು ಪ್ರಮುಖ ಪಾತ್ರ ವಹಿಸಿದರು. ಇತ್ತ ಭುವನೇಶ್ವರ್ ಕುಮಾರ್, ಜೋಶ್ ಹೇಝಲ್ವುಡ್ ಮತ್ತು ರಾಸಿಖ್ ಸಲಾಂ ಧಾರ್ ತಲಾ ಒಂದು ವಿಕೆಟ್ ಕಿತ್ತು ಕೆಕೆಆರ್ ತಂಡವನ್ನು ಕಟ್ಟಿ ಹಾಕಿದರು. ಶತಕ ಬಾರಿಸಿ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
















