ಮನೆ ರಾಷ್ಟ್ರೀಯ ನಟ ವಿಕ್ರಮ್‌ ಗೆ ಹೃದಯಾಘಾತವಾಗಿಲ್ಲ: ಕಾವೇರಿ ಆಸ್ಪತ್ರೆ ಸ್ಪಷ್ಟನೆ

ನಟ ವಿಕ್ರಮ್‌ ಗೆ ಹೃದಯಾಘಾತವಾಗಿಲ್ಲ: ಕಾವೇರಿ ಆಸ್ಪತ್ರೆ ಸ್ಪಷ್ಟನೆ

0
Vikram

ಚೆನ್ನೈ (Chennai): ತಮಿಳು ನಟ ಚಿಯಾನ್ ವಿಕ್ರಮ್ ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿಲ್ಲ ಎಂದು ಚೆನ್ನೈನ ಕಾವೇರಿ ಆಸ್ಪತ್ರೆ ಸ್ಪಷ್ಟನೆ ನೀಡಿದೆ.

ಚಿಯಾನ್ ವಿಕ್ರಮ್ ಅವರ ಆರೋಗ್ಯದ ಬಗ್ಗೆ ಕಾವೇರಿ ಆಸ್ಪತ್ರೆ ಮೆಡಿಕಲ್ ಬುಲೆಟಿನ್ ಬಿಡುಗಡೆ ಮಾಡಿದೆ. ಮೆಡಿಕಲ್ ಬುಲೆಟಿನ್‌ನಲ್ಲಿ ಚಿಯಾನ್ ವಿಕ್ರಮ್ ಅವರಿಗೆ ಸಣ್ಣದಾಗಿ ಎದೆನೋವು ಕಾಣಿಸಿಕೊಂಡಿತ್ತು ಎಂದು ಕಾವೇರಿ ಆಸ್ಪತ್ರೆ ಸ್ಪಷ್ಟ ಪಡಿಸಿದೆ.

ಎದೆನೋವು ಕಾಣಿಸಿಕೊಂಡ ಕಾರಣ ತಮಿಳು ನಟ ವಿಕ್ರಮ್ ಅವರನ್ನು ಕಾವೇರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಯಿತು. ತಜ್ಞ ವೈದ್ಯರು ವಿಕ್ರಮ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ವಿಕ್ರಮ್ ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿಲ್ಲ. ಸದ್ಯ ವಿಕ್ರಮ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದಷ್ಟು ಬೇಗ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ಮೆಡಿಕಲ್ ಬುಲೆಟಿನ್‌ನಲ್ಲಿ ಕಾವೇರಿ ಆಸ್ಪತ್ರೆ ತಿಳಿಸಿದೆ.

ವಿಕ್ರಮ್ ಪುತ್ರ ಧ್ರುವ್ ಇನ್ಸ್ಟಾಗ್ರಾಮ್‌ನಲ್ಲಿ, ನನ್ನ ತಂದೆಗೆ ಸಣ್ಣದಾಗಿ ಎದೆನೋವು ಕಾಣಿಸಿಕೊಂಡ ಪರಿಣಾಮ ಚಿಕಿತ್ಸೆ ನೀಡಲಾಗುತ್ತಿದೆ. ಅಪ್ಪನಿಗೆ ಹೃದಯಾಘಾತವಾಗಿಲ್ಲ. ವದಂತಿಗಳನ್ನ ಕೇಳಿ ನಮಗೆ ತುಂಬಾ ನೋವಾಗಿದೆ. ಅಪ್ಪ ಈಗ ಹುಷಾರಾಗಿದ್ದಾರೆ. ಸದ್ಯದಲ್ಲೇ ಅವರು ಡಿಸ್ಚಾರ್ಜ್ ಆಗಲಿದ್ದಾರೆ. ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಬರೆದುಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ವಿಕ್ರಮ್‌ ಅವರ ಮ್ಯಾನೇಜರ್ ಎಂ.ಸೂರ್ಯನಾರಾಯಣನ್, ಆತ್ಮೀಯ ಅಭಿಮಾನಿಗಳು ಹಾಗೂ ಹಿತೈಷಿಗಳೇ.. ಚಿಯಾನ್ ವಿಕ್ರಮ್ ಅವರಿಗೆ ಸಣ್ಣದಾಗಿ ಎದೆನೋವು ಕಾಣಿಸಿಕೊಂಡಿದೆ. ಅದಕ್ಕಾಗಿ ಅವರೀಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಯಾನ್ ವಿಕ್ರಮ್ ಅವರಿಗೆ ಹೃದಯಾಘಾತವಾಗಿದೆ ಎಂಬ ವರದಿ ಸುಳ್ಳು. ಈ ವದಂತಿಗಳನ್ನು ಕೇಳಿ ನಮಗೆ ತುಂಬಾ ನೋವುಂಟಾಗಿದೆ.

ಈ ಸಮಯದಲ್ಲಿ ಚಿಯಾನ್ ವಿಕ್ರಮ್ ಹಾಗೂ ಕುಟುಂಬಕ್ಕೆ ಗೌಪ್ಯತೆ ಅಗತ್ಯವಿದೆ. ನಮ್ಮ ಪ್ರೀತಿಯ ಚಿಯಾನ್ ವಿಕ್ರಮ್ ಇದೀಗ ಆರಾಮಾಗಿದ್ದಾರೆ. ಒಂದು ದಿನದಲ್ಲಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ಈ ಹೇಳಿಕೆಯಿಂದ ನಿಮಗೆಲ್ಲಾ ಸ್ಪಷ್ಟನೆ ಸಿಕ್ಕಿದೆ ಎಂದು ನಾವು ಭಾವಿಸುತ್ತೇವೆ. ಸುಳ್ಳು ಸುದ್ದಿಗಳಿಗೆ ಪೂರ್ಣವಿರಾಮ ಬೀಳುತ್ತದೆ ಎಂದು ನಾವು ನಂಬುತ್ತೇವೆ ಎಂದಿದ್ದಾರೆ.

ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್ -1’ ಚಿತ್ರದ ಟೀಸರ್ ಇಂದು ಲಾಂಚ್ ಆಗಿದೆ. ಚೆನ್ನೈನಲ್ಲಿ ‘ಪೊನ್ನಿಯಿನ್ ಸೆಲ್ವನ್ -1’ ಟೀಸರ್ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ಜರುಗುತ್ತಿದೆ. ಈ ಚಿತ್ರದಲ್ಲಿ ಆದಿತ್ಯ ಕರಿಕಾಳನ್ ಆಗಿ ಚಿಯಾನ್ ವಿಕ್ರಮ್ ಅಭಿನಯಿಸಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಇರುವ ಕಾರಣ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ವಿಕ್ರಮ್ ಹಾಜರಾಗಿಲ್ಲ.