ಚಿಕ್ಕಮಗಳೂರು : ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಕಾರ್ಯ ಇಂದು ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಐಡಿಎಸ್ಜಿ ಕಾಲೇಜಿನಲ್ಲಿ ಎಣಿಕೆ ಕಾರ್ಯ ಆರಂಭವಾಗಲಿದೆ. ಹೈಕೋರ್ಟ್ ಆದೇಶದ ಮೇರೆಗೆ ಮರು ಎಣಿಕೆ ಪ್ರಕ್ರಿಯೆ ನಡೆಯಲಿದೆ.
ಚುನಾವಣಾಧಿಕಾರಿ ಗೌರವ್ ಶೆಟ್ಟಿ ನೇತೃತ್ವದಲ್ಲಿ ಒಂದೇ ಟೇಬಲ್ನಲ್ಲಿ ಅಂಚೆ ಮತಗಳ ಮರು ಎಣಿಕೆ ನಡೆಯಲಿದ್ದು, ಆರು ಜನ ಸಹಾಯಕ ಚುನಾವಣಾಧಿಕಾರಿಗಳು ಸಾಥ್ ನೀಡಲಿದ್ದಾರೆ. ಎಣಿಕೆ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಸ್ಡ್ರಾಂಗ್ ರೂಂಗೆ ಶಾಸಕ ರಾಜೇಗೌಡ, ಮಾಜಿ ಶಾಸಕ ಜೀವರಾಜ್, ಸುಧಾಕರ್ ಶೆಟ್ಟಿ ಆಗಮಿಸಿದ್ದಾರೆ.
ಜಿಲ್ಲಾಧಿಕಾರಿ ನಾಗರಾಜ್, ಕೊಪ್ಪ-ಶೃಂಗೇರಿ-ಚಿಕ್ಕಮಗಳೂರು ತಹಶೀಲ್ದಾರ್ ಕೂಡ ಬಂದಿದ್ದಾರೆ. ಮತ ಎಣಿಕೆಯ ವೀಕ್ಷಕರಾಗಿ ಕಿರಣ್ ಹೆಚ್ ಕುಲಕರ್ಣಿ ಆಗಮಿಸಿದ್ದಾರೆ. ಅಭ್ಯರ್ಥಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ಓಪನ್ ಮಾಡಲಾಗಿದೆ. 20 ಟ್ರಂಕ್ನಲ್ಲಿ ಅಂಚೆ ಮತಗಳಿವೆ. ಶಾಸಕ ರಾಜೇಗೌಡ ಹಾಗೂ ಏಜೆಂಟರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಡಿಯೋ ಮಾಡಿಕೊಂಡು ಪರಿಶೀಲನೆ ಮಾಡ್ತೀವಿ ಎಂದ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ರಾಜೇಗೌಡ ಹಾಗೂ ಬಿಜೆಪಿ ಪಕ್ಷದ ಮಾಜಿ ಶಾಸಕ ಜೀವರಾಜ್ ಏಜೆಂಟರು ಸ್ಥಳದಲ್ಲಿ ಹಾಜರಿದ್ದಾರೆ. 2023 ಚುನಾವಣೆಯಲ್ಲಿ ರಾಜೇಗೌಡರಿಗೆ 201 ಮತಗಳ ಗೆಲುವು ಸಿಕ್ಕಿತ್ತು. 1822 ಅಂಚೆ ಮತಗಳಲ್ಲಿ 279 ಮತಗಳು ತಿರಸ್ಕಾರಗೊಂಡಿದ್ದವು. ಮೊದಲು 279 ಮತಪತ್ರ ಎಣಿಕೆ ಕಾರ್ಯ, ನಂತರ 1540 ಮತಗಳ ಎಣಿಕೆ ಕಾರ್ಯ, 3 ನೋಟಾ ಮತಗಳು ಸೇರಿ ಒಟ್ಟು 1822 ಅಂಚೆ ಮತಗಳು ಬಿದ್ದಿದ್ದವು.
ಅಭ್ಯರ್ಥಿಗಳು ಸಮ್ಮುಖದಲ್ಲಿ ಈಗ ಮತ ಎಣಿಕೆ ಕಾರ್ಯ ನಡೆಯಲಿದೆ. ಮತ ಎಣಿಕೆ ಕಾರ್ಯ ಮುಕ್ತಾಯವಾದ ಬಳಿಕ ಫಲಿತಾಂಶ ಘೋಷಣೆಯಾಗಲಿದೆ. ತಿರಸ್ಕೃತ ಮತಗಳ ಮೇಲೆ ಮಾಜಿ ಸಚಿವ ಜೀವರಾಜ್ ಆಕ್ಷೇಪ ವ್ಯಕ್ತಪಡಿಸಿದ್ದರು. ಹೈಕೋರ್ಟ್ ಏಪ್ರಿಲ್ 6ರಂದು ಮರು ಮತ ಎಣಿಕೆಗೆ ಸೂಚನೆ ನೀಡಿತ್ತು.
2023ರಲ್ಲಿ 12 ಜನ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ಸಿನ ಟಿ.ಡಿ.ರಾಜೇಗೌಡ 201 ಮತಗಳ ಅಂತರದಿಂದ ಗೆಲುವು ಕಂಡಿದ್ದರು. 2023ರಲ್ಲಿ ಮತ ಎಣಿಕೆಯ ಸಂದರ್ಭದಲ್ಲಿ ಇಬ್ಬರು ಅಭ್ಯರ್ಥಿಗಳು ಗೈರಾಗಿದ್ದರು. ಫಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡರು ಎಣಿಕೆಯ ಕೇಂದ್ರಕ್ಕೆ ಆಗಮಿಸಿದ್ದರು. ಇಂದು ಅಭ್ಯರ್ಥಿಗಳ ಸಮ್ಮುಖದಲ್ಲಿ ಎಣಿಕೆ ಕಾರ್ಯ ನಡೆಯಲಿದೆ.














