ಮನೆ ಸುದ್ದಿ ಜಾಲ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್

ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್

0

ನವದೆಹಲಿ (ಜೂನ್ 11) : ರಾಜ್ಯಸಭಾ ನಾಮಪತ್ರ ತಿರಸ್ಕೃತಗೊಂಡಿರುವ ವಿಚಾರವಾಗಿ ಕಾಂಗ್ರೆಸ್‌ನ ಹಿರಿಯ ನಾಯಕಿ ಹಾಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ  ತೆಲಂಗಾಣ ಉಸ್ತುವಾರಿ ಮೀನಾಕ್ಷಿ ನಟರಾಜನ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ತಮಗೆ ನ್ಯಾಯ ಸಿಗಲಿದೆ ಎಂಬ ದೃಢ ವಿಶ್ವಾಸದೊಂದಿಗೆ ಅವರು ಸಲ್ಲಿಸಿರುವ ಅರ್ಜಿಯು ಇಂದು ಬೆಳಗ್ಗೆ ತುರ್ತು ವಿಚಾರಣೆಗಾಗಿ ಪಟ್ಟಿಯಾಗುವ ಸಾಧ್ಯತೆಯಿದ್ದು, ಅವರ ಉಮೇದುವಾರಿಕೆ ಮರುಸ್ಥಾಪನೆಯಾಗುವ ನಿಟ್ಟಿನಲ್ಲಿ ಹೊಸ ಭರವಸೆ ಮೂಡಿಸಿದೆ. ತೆಲಂಗಾಣದಲ್ಲಿ ದಾಖಲಾಗಿರುವ ಖಾಸಗಿ ದೂರಿನ ವಿವರಗಳನ್ನು ನಾಮಪತ್ರದಲ್ಲಿ ಮರೆಮಾಚಿದ್ದಾರೆ ಎಂಬ ಕಾರಣಕ್ಕೆ ಚುನಾವಣಾ ಅಧಿಕಾರಿ ಅರವಿಂದ್ ಶರ್ಮಾ ಅವರು ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ತಿರಸ್ಕರಿಸಿದ್ದರು. ಆದರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್  ಈ ಕುರಿತು ಕಾನೂನಾತ್ಮಕವಾಗಿ ಅತ್ಯಂತ ಸ್ಪಷ್ಟ ಹಾಗೂ ತಾರ್ಕಿಕ ವಿವರಣೆ ನೀಡಿದ್ದು  ನ್ಯಾಯಾಲಯವು ಈ ಖಾಸಗಿ ದೂರಿನ ಮೇರೆಗೆ ಯಾವುದೇ ಕಾಗ್ನಿಜನ್ಸ್ (ಸ್ವೀಕೃತಿ) ತೆಗೆದುಕೊಂಡಿಲ್ಲ. ಕೇವಲ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 223ರ ಅಡಿಯಲ್ಲಿ ವಿಚಾರಣೆಯನ್ನು ಏಕೆ ಕೈಗೆತ್ತಿಕೊಳ್ಳಬಾರದು? ಎಂದು ವಿವರಣೆ ಕೇಳಿ ಪ್ರಾಥಮಿಕ ನೋಟಿಸ್ ಮಾತ್ರ ನೀಡಲಾಗಿದೆ ಎನ್ನಲಾಗಿದೆ.

ಆದರಿಂದ ಕಾನೂನಿನ ನಿಯಮಗಳ ಪ್ರಕಾರ, ನ್ಯಾಯಾಲಯವು ದೂರಿಗೆ ಕಾಗ್ನಿಜನ್ಸ್ ತೆಗೆದುಕೊಳ್ಳದ ಹೊರತು ವ್ಯಕ್ತಿಯ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣ ಅಧಿಕೃತವಾಗಿ ಅಸ್ತಿತ್ವಕ್ಕೆ ಬರುವುದಿಲ್ಲ. ಕೇವಲ ಯಾರೋ ಒಬ್ಬರು ಆರೋಪ ಮಾಡಿದ ತಕ್ಷಣ ಅದು ಕ್ರಿಮಿನಲ್ ಪ್ರಕರಣವಾಗುವುದಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 33ಎ ಪ್ರಕಾರ, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ವಿರುದ್ಧ ಕನಿಷ್ಠ 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ಶಿಕ್ಷೆಗೆ ಅರ್ಹವಾದ ಪ್ರಕರಣಗಳಲ್ಲಿ ಅಧಿಕೃತವಾಗಿ ನ್ಯಾಯಾಲಯದಿಂದ ‘ಆರೋಪ ಹೊರಿಸಲ್ಪಟ್ಟಿದ್ದರೆ’ ಮಾತ್ರ ಅದನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿರುತ್ತದೆ. ಮೀನಾಕ್ಷಿ ನಟರಾಜನ್ ಅವರ ವಿರುದ್ಧ ಯಾವುದೇ ಆರೋಪಗಳು ಸಾಬೀತಾಗದ ಅಥವಾ ಕಾಗ್ನಿಜನ್ಸ್ ಹಂತಕ್ಕೆ ಹೋಗದ ಕಾರಣ, ಅವರು ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಿದ್ದಾರೆ ಎಂಬುದು ಸಾಬೀತಾಗುತ್ತಿದೆ. ಇದು ಸುಪ್ರೀಂ ಕೋರ್ಟ್‌ನಲ್ಲಿ ಅವರಿಗೆ ಕಾನೂನುಬದ್ಧವಾಗಿ ದೊಡ್ಡ ಯಶಸ್ಸು ತಂದುಕೊಡುವ ನಿರೀಕ್ಷೆಯಿದೆ.

ನೂತನ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 223ರ ಅಡಿಯಲ್ಲಿ ಒಂದು ಮಹತ್ವದ ಸುಧಾರಣೆ ತರಲಾಗಿದೆ. ಇದರ ಪ್ರಕಾರ, ಯಾವುದೇ ಖಾಸಗಿ ವ್ಯಕ್ತಿ ಸಲ್ಲಿಸುವ ದೂರಿನ ಮೇಲೆ ನ್ಯಾಯಾಲಯವು ಆರೋಪಿಯ ವಾದವನ್ನು ಆಲಿಸದೆ ನೇರವಾಗಿ ವಿಚಾರಣೆ ನಡೆಸುವಂತಿಲ್ಲ. ಇದು ಸುಳ್ಳು ಅಥವಾ ರಾಜಕೀಯ ಪ್ರೇರಿತ ದೂರುಗಳಿಂದ ಪ್ರಾಮಾಣಿಕ ಜನಪ್ರತಿನಿಧಿಗಳನ್ನು ರಕ್ಷಿಸಲು ಇರುವ ಸುರಕ್ಷಾ ಕವಚವಾಗಿದೆ. ಚುನಾವಣಾ ಆಯೋಗವನ್ನೂ ಸಂಪರ್ಕಿಸಿರುವ ಕಾಂಗ್ರೆಸ್ ಪಕ್ಷ, ಈಗ ದೇಶದ ಅತ್ಯುನ್ನತ ನ್ಯಾಯಾಲಯದ ಮುಂದೆ ಸರಿಯಾದ ಕಾನೂನು ವ್ಯಾಖ್ಯಾನವನ್ನು ಮಂಡಿಸುತ್ತಿದೆ. ಈ ಹಿಂದೆ ಇಂತಹ ತಾಂತ್ರಿಕ ಕಾರಣಗಳಿಗಾಗಿ ನಾಮಪತ್ರ ತಿರಸ್ಕೃತಗೊಂಡಾಗ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿದ ಹಲವು ಉದಾಹರಣೆಗಳಿವೆ. ಹೀಗಾಗಿ, ಮೀನಾಕ್ಷಿ ನಟರಾಜನ್ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ತಡೆ ಸಿಕ್ಕರೆ, ಅವರು ಮಧ್ಯಪ್ರದೇಶದಿಂದ ರಾಜ್ಯಸಭಾ ಚುನಾವಣಾ ಕಣಕ್ಕೆ ಯಶಸ್ವಿಯಾಗಿ ಮರಳಲಿದ್ದಾರೆ ಎನ್ನಲಾಗಿದೆ.