ಮನೆ ರಾಜ್ಯ ಕೆ.ಆರ್.ಪೇಟೆ: 1500 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಕೆ.ಆರ್.ಪೇಟೆ: 1500 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ

0

ಮಂಡ್ಯ (Mandya):  ಕೆ.ಆರ್.ಪೇಟೆಯಲ್ಲಿ ಸುಮಾರು 1500 ಕೋಟಿ ಮೊತ್ತದ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಸ್ಥಳೀಯ ಶಾಸಕರೂ ಆದ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಡಾ.ನಾರಾಯಣಗೌಡ ಅವರು ತಿಳಿಸಿದರು.

ಇಂದು ಮಂಡ್ಯದ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಸಚಿವ ಡಾ.ನಾರಾಯಣಗೌಡ ಅವರು,  ಜು.21 ರಂದು ಕೆ.ಆರ್. ಪೇಟೆಯಲ್ಲಿ 1500 ಕೋಟಿ ರೂ. ಮೊತ್ತದ ಕಾಮಗಾರಿಗಳ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಆಗಮಿಸುತ್ತಿದ್ದಾರೆ. ಇವರ ಜೊತೆಗೆ ಸಚಿವರಾದ ಗೋವಿಂದ ಕಾರಜೋಳ, ಆರ್.ಅಶೋಕ್, ಡಾ. ಅಶ್ವಥ್ ನಾರಾಯಣ್, ಶ್ರೀರಾಮುಲು, ಡಾ.ಸುಧಾಕರ್, ಎಂಟಿಬಿ ನಾಗರಾಜ್ ಸೇರಿದಂತೆ ಇನ್ನೂ ಹಲವು ಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಕೆಆರ್ ಪೇಟೆಯ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಸುಮಾರು 17 ಎಕರೆ ಜಾಗದಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ. ಅಮೃತ್ ಯೋಜನೆಯಡಿ 100 ಮಹಿಳಾ ಸ್ವ-ಸಹಾಯ ಸಂಘಟಗಳಿಗೆ ತಲಾ ರೂ.1 ಲಕ್ಷಗಳ ಸಹಾಯಧನ ವಿತರಣೆ. 316  ಕಂದಾಯ ಗ್ರಾಮಗಳಲ್ಲಿ 182 ಗ್ರಾಮಗಳು ಪೋಡಿಮುಕ್ತ ಗ್ರಾಮಗಳಾಗಿ ಘೋಷಣೆ, ಉಳಿದ 134 ಗ್ರಾಮಗಳು 6 ತಿಂಗಳಲ್ಲಿ ಪೂರ್ಣ. 3000 ವಸತಿ ನಿವೇಶನ ರಹಿತರಿಗೆ ಮನೆ, 2000 ಜನರಿಗೆ ನಿವೇಶನರಹಿತರಿಗೆ ನಿವೇಶನ ಹಂಚಿಕೆ. 15000 ಜನರಿಗೆ ಉಚಿತ ನೇತ್ರ ತಪಾಸಣೆ, 3000 ಜನರಿಗೆ ಶಸ್ತ್ರಚಿಕಿತ್ಸೆ, 5000 ಜನರಿಗೆ ಉಚಿತ ಕನ್ನಡಕ ವಿತರಣೆ. ಒಕ್ಕಲಿಗ, ಲಿಂಗಾಯಿತ, ಕುರುಬ, ವಿಶ್ವಕರ್ಮ, ತಿಗಳ, ಈಡಿಗ, ಕುರುಹಿನಶೆಟ್ಟಿ, ಬಣಜಿಗಶೆಟ್ಟಿ, ಅರಸು, ತೊಗಟುವೀರ, ಕ್ಷತ್ರಿಯ, ನಯನಜಕ್ಷತ್ರಿಯ, ಮಡಿವಾಳ, ಕುಂಬಾರ, ದೇವಾಂಗ, ವೈಷ್ಣವ, ನಾಮಧಾರಿ ಮತ್ತು ಗಾಣಿಗ ಸಮುದಾಯದವರಿಗೆ ಸಮುದಾಯಭವನ ನಿರ್ಮಿಸಲು ಕೆ.ಆರ್. ಪೇಟೆ ನಗರದಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ವಿ.ಆರ್. ಶೈಲಜ, ಪೊಲೀಸ್ ವರಿಷ್ಠಾಧಿಕಾರಿಗಳಾದ ಎನ್.ಯತೀಶ್, ಕಾರ್ಯಪಾಲಕ ಅಭಿಯಂತರರಾದ ಶಿವಕುಮಾರ್,ತಮ್ಮಣ್ಣ,ನಾಗರಾಜು,ವಾರ್ತಾಧಿಕಾರಿ ಹೆಚ್.ಎಸ್ ನಿರ್ಮಲ ಸೇರಿದಂತೆ ಇತರರು ಉಪಸ್ಥಿರಿದ್ದರು.