ಮನೆ ರಾಷ್ಟ್ರೀಯ ಭಯೋತ್ಪಾದನಾ ಚಟುವಟಿಕೆ ನಡೆಸಲು ಉಗ್ರರಿಗೆ ಹಣ ಒದಗಿಸುತ್ತಿದ್ದ ವ್ಯಕ್ತಿಯ ಬಂಧನ

ಭಯೋತ್ಪಾದನಾ ಚಟುವಟಿಕೆ ನಡೆಸಲು ಉಗ್ರರಿಗೆ ಹಣ ಒದಗಿಸುತ್ತಿದ್ದ ವ್ಯಕ್ತಿಯ ಬಂಧನ

0

ಶ್ರೀನಗರ(Srinagar): ಜಮ್ಮು – ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಉಗ್ರರಿಗೆ ಹಣ ಒದಗಿಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನುಪೊಲೀಸರು ಬಂಧಿಸಿದ್ದಾರೆ.

ಶನಿವಾರ ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ಬಂಧಿತ ಆರೋಪಿಯನ್ನು ಮೊಹಮ್ಮದ್ ಯಾಸಿನ್ ಎಂದು ಗುರುತಿಸಲಾಗಿದೆ.

ಆತ ಹವಾಲಾ ಮಾರ್ಗಗಳ ಮೂಲಕ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಸಂದಾಯ ಮಾಡುತ್ತಿದ್ದ. ಲಷ್ಕರ್‌ ಎ–ತಯಬಾ(ಎಲ್‌ಇಟಿ) ಮತ್ತು ಅಲ್-ಬದ್ರ್ ಭಯೋತ್ಪಾದಕ ಸಂಘಟನೆಗಳಿಗೆ ಯಾಸಿನ್ ಹಣ ರವಾನಿಸಿರುವುದು ದೃಢಪಟ್ಟಿದೆ ಎಂದು ದೆಹಲಿ ಪೊಲೀಸ್ ವಿಶೇಷ ಪೊಲೀಸ್ ಆಯುಕ್ತ ಎಚ್‌ಜಿಎಸ್ ಧಲಿವಾಲ್ ತಿಳಿಸಿದ್ದಾರೆ.

ಮೊಹಮ್ಮದ್ ಯಾಸಿನ್ ದೆಹಲಿಯ ಟರ್ಕ್‌ಮನ್ ಗೇಟ್ ಪ್ರದೇಶದಲ್ಲಿ ವಾಸವಾಗಿದ್ದು, ಗಾರ್ಮೆಂಟ್ಸ್‌ ವ್ಯವಹಾರ ನಡೆಸುತ್ತಿದ್ದ. ಕಳೆದ ವಾರ ಕಾಶ್ಮೀರದಲ್ಲಿರುವ ಅಬ್ದುಲ್ ಹಮೀದ್ ಮೀರ್ ಎಂಬ ಭಯೋತ್ಪಾದಕನಿಗೆ ಆತ ಸುಮಾರು ₹10 ಲಕ್ಷ ಹಣ ಕಳುಹಿಸಿದ್ದ. ಈ ಸಂಬಂಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೀರ್‌ನನ್ನು ಬಂಧಿಸಿದ್ದಾರೆ.

ಆತನ ವಿಚಾರಣೆಯ ನಂತರ, ಯಾಸಿನ್‌ನನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಆತನಿಂದ ₹7 ಲಕ್ಷ ನಗದು ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ದಕ್ಷಿಣ ಆಫ್ರಿಕಾದಿಂದ ಗುಜರಾತ್‌ ಮತ್ತು ಮುಂಬೈಗೆ ಹವಾಲಾ ಹಣ ರವಾನೆಯಾಗುತ್ತಿರುವ ಬಗ್ಗೆ ಮಾಹಿತಿ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ.