ಮನೆ ರಾಜ್ಯ ದಸರಾ ಕವಿಗೋಷ್ಠಿ ಉದ್ಘಾಟಿಸಿದ ಸಚಿವರಾದ ಎಸ್‌.ಟಿ.ಸೋಮಶೇಖರ್

ದಸರಾ ಕವಿಗೋಷ್ಠಿ ಉದ್ಘಾಟಿಸಿದ ಸಚಿವರಾದ ಎಸ್‌.ಟಿ.ಸೋಮಶೇಖರ್

0

ಮೈಸೂರು(Mysuru): ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಲಾದ ದಸರಾ ಕವಿಗೋಷ್ಠಿ ಕಾರ್ಯಕ್ರಮವನ್ನು ಬುಧವಾರ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಉದ್ಘಾಟಿಸಿದರು.

ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿ ದಸರಾವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ರಾಜ್ಯದ ಬೇರೆ ಬೇರೆ ಭಾಗಗಳಿಂದ ಖ್ಯಾತ ಕವಿಗಳು ತಮ್ಮ ಕವಿತೆ ವಾಚಿಸಲು ಆಗಮಿಸಿದ್ದಾರೆ. ಈ ನಿಟ್ಟಿನಲ್ಲಿ ಗೋಷ್ಠಿಗೆ ಆಗಮಿಸಿರುವ ಕವಿಗಳಿಂದ ಉತ್ತಮವಾದ ಕವನ ಹಾಗೂ ಕವಿತೆಗಳು ಹೊರಬರುವುದರ ಮೂಲಕ ನೆರೆದಿರುವ ಸಭಿಕರನ್ನು ರಂಜಿಸಲಿ ಎಂದು ಆಶಿಸಿದರು.

ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಸುಪ್ರಸಿದ್ಧ ಕವಿಗಳಾದ ಡಾ.ದೊಡ್ಡರಂಗೇಗೌಡ ಅವರು ಮಾತನಾಡಿ, ಸಮಾಜದ ರೋಗಗ್ರಸ್ಥ ಅಂಶಗಳನ್ನು  ನಿರ್ಮೂಲನೆ ಮಾಡುವುದಕ್ಕೆ ಲೇಖನಿ ಸಿದ್ಧವಾಗಬೇಕಿದ್ದು, ಸಮಾಜದ ಪಿಡುಗುಗಳನ್ನು ಕಾವ್ಯದ ಮೂಲಕ ಬಿಡಿಸಲು ಕವಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಸಮಾಜದ ಶುದ್ಧೀಕರಣದೊಂದಿಗೆ, ಮನಸ್ಸಿನ ಶುದ್ಧೀರನಣವೂ ಆಗಬೇಕಿದ್ದು, ಬೇಧ-ಭಾವ, ಪಕ್ಷಪಾತಗಳನ್ನು ಮೂಲದಿಂದಲೇ ಉಚ್ಛಾಟನೆ ಮಾಡುವುದು ಅನಿವಾರ್ಯವಾಗಿದೆ. ವರ್ಗ ರಹಿತ, ವರ್ಣರಹಿತ ಸಮಾಜ ಕಟ್ಟಬೇಕಿದೆ. ಅನೀತಿಯೇ ನೀತಿಯಾಗಿರುವ, ಅಕ್ರಮಗಳೇ ಕ್ರಮಗಳಾಗಿರುವ ಇಂತಹ ಸಂದರ್ಭದಲ್ಲಿ ಅಪ್ರಮಾಣಿಕತೆಯಂತಹ ಹಲವಾರು ಅಂಶಗಳನ್ನು ತೊಡೆದು ಹಾಕಿ ಆದರ್ಶ ಸಮಾಜ ನಿರ್ಮಾಣದತ್ತ ಮುಂದಾಗಬೇಕಿದೆ‌. ಇದಕ್ಕೆ ಕವಿಗಳು ಮೊದಲ ಮುನ್ನುಡಿ ಬರೆಯಬೇಕಿದೆ‌ ಎಂದರು.

ಕನ್ನಡ ನಾಡು ನುಡಿ ಕುರಿತು ಮಾತನಾಡಿದ ಅವರು,  ರಾಜ್ಯದಲ್ಲಿ ಕೆಟ್ಟು ಹೋಗಿರುವ ಕನ್ನಡ ಭಾಷೆಯನ್ನು ಪುನರ್ ನವೀಕರಣ ಮಾಡಬೇಕಿದೆ‌. ಈ ನಿಟ್ಟಿನಲ್ಲಿ ಸೂರ್ಯ ಚಂದ್ರ ಇರುವವರೆಗೂ ಕನ್ನಡ ಭಾಷೆಯೂ ಇರಲಿದ್ದು, ಈ ಭಾಷೆಗೆ ಕವಿಗಳಿಂದಲೇ ಭದ್ರ ಬುನಾದಿ ಹಾಕುವಂತಹ ಕಾರ್ಯಕ್ಕೆ ಸ್ಪಷ್ಟ ಕಾಯಕಲ್ಪ ಮಾಡಬೇಕಿದೆ. ಆ ಮೂಲಕ ವೀರವಂತಿಕೆ ತುಂಬುವ, ನಿಜವಾದ ಶಕ್ತಿ ಯಾವುದೆಂದು ಹೇಳುವಂತಹ ಕವಿಗಳು ಹುಟ್ಟಿ ಬರಬೇಕಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಸುಪ್ರಸಿದ್ಧ ಕವಿಗಳಾದ ಪ್ರೊ.ಎಂ.ಕೃಷ್ಞೇಗೌಡ ಅವರು ಮಾತನಾಡಿ, ಸ್ಥಳೀಯ ಸಂಸ್ಕೃತಿ ಬಹಳ ಬೇಗ ಹಾಳು ಮಾಡುತ್ತಿರುವ ಕಾಸ್ಮೋ‌ಪಾಲಿಟನ್ ನಗರಗಳಿಗಿಂತ ಇಲ್ಲಿನ ಮೂಲ ಸಂಸ್ಕ್ರತಿಯನ್ನು ಉಳಿಸಿ, ಬೆಳೆಸಿ‌ ಕಾಪಾಡಿಕೊಂಡು ಹೋಗುತ್ತಿರುವ ಮೈಸೂರು   ಹಲವಾರು ವಿಶೇಷಗಳನ್ನು ಒಳಗೊಂಡಿದ್ದು, ರಾಯಲ್ ಸಿಟಿಯೆಂದು ಕರೆಯಲು ಹೆಮ್ಮೆಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯವರಾದ ಡಾ.ಬಗಾದಿ ಗೌತಮ್,  ಉಪಮಹಾಪೌರರಾದ ರೂಪಾ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀನಿವಾಸ್ ಗೌಡ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ್, ಖ್ಯಾತ ಹಾಸ್ಯ ಕವಿಗಳಾದ ಬಿ.ಆರ್‌.ಲಕ್ಷ್ಮಣರಾವ್,  ಕವಿಗೋಷ್ಠಿ ಉಪಸಮಿತಿ ಉಪ ವಿಶೇಷಾಧಿಕಾರಿ ಡಾ. ಎಂ.‌ದಾಸೇಗೌಡ, ಕಾರ್ಯಾಧ್ಯಕ್ಷರಾದ ಡಾ. ಎಂ.ಜಿ. ಮಂಜುನಾಥ್,  ಕಾರ್ಯದರ್ಶಿ ಹೆಚ್.ಡಿ.ಗಿರೀಶ್ ಸೇರಿದಂತೆ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.