ಮನೆ ಆರೋಗ್ಯ ಶ್ವಾಸಕೋಶದಲ್ಲಿನ ಸೋಂಕನ್ನು ನಿವಾರಿಸುವ ಆಯುರ್ವೇದ ಮೂಲಿಕೆಗಳು

ಶ್ವಾಸಕೋಶದಲ್ಲಿನ ಸೋಂಕನ್ನು ನಿವಾರಿಸುವ ಆಯುರ್ವೇದ ಮೂಲಿಕೆಗಳು

0

ಶ್ವಾಸಕೋಶದ ಮೇಲೆ ಗಂಭಿರ ಪರಿಣಾಮ ಬೀರುವ ಕಾಯಿಲೆಗಳಲ್ಲಿ ನ್ಯುಮೋನಿಯಾ ಕೂಡ ಒಂದು. ಶ್ವಾಸಕೋಶದ ಚೀಲಗಳಲ್ಲಿ ಗಾಳಿ ತುಂಬಿಕೊಳ್ಳುವ ಮೂಲಕ ಉರಿಯೂತವನ್ನು ಉಂಟು ಮಾಡುತ್ತದೆ.

ಸಾಮಾನ್ಯವಾಗಿ ಬ್ಯಾಕ್ಟೀರಿಯಾ ಅಥವಾ ವೈರಸ್’ನಿಂದ ನ್ಯುಮೋನಿಯಾ ಉಂಟಾಗುತ್ತದೆ . ಸರಿಯಾದ ಚಿಕಿತ್ಸೆ ಪಡೆಯದೇ ಇದ್ದರೆ ಅದು ಇನ್ನಿತರ ತೊಡಕುಗಳಿಗೆ ಕಾರಣವಾಗಬಹುದು ಎನ್ನುತ್ತಾರೆ ವೈದ್ಯರು.

ನ್ಯುಮೋನಿಯಾ ರೋಗಲಕ್ಷಣಗಳು ಸೌಮ್ಯದಿಂದ ತೀವ್ರತರವಾದವುಗಳನ್ನು ಒಳಗೊಂಡಿರುತ್ತವೆ. ಕೆಮ್ಮು, ಜ್ವರ, ಶೀತ, ಕೆಮ್ಮು, ಉಸಿರಾಟದ ತೊಂದರೆ ಮತ್ತು ಎದೆ ನೋವು ಸಾಮಾನ್ಯವಾಗಿ ಕಂಡು ಬರುವ ಲಕ್ಷಣಗಳಾಗಿವೆ.

ಆಯುರ್ವೇದದ ಪ್ರಕಾರ ನ್ಯುಮೋನಿಯಾ ಎಂದರೆ

ನ್ಯುಮೋನಿಯಾವನ್ನು ಆಯುರ್ವೇದದಲ್ಲಿ ಶ್ವಾಸನಕ ಜ್ವರ ಎಂದು ಕರೆಯಲಾಗುತ್ತದೆ. ಮುಖ್ಯವಾಗಿ ಇದರಲ್ಲಿ ತೀವ್ರತರವಾದ ಜ್ವರ, ಎದೆ ನೋವು, ದಟ್ಟವಾದ ಕೆಮ್ಮು ಸೇರಿದಂತೆ ಕಫ, ಮತ್ತು ಉಸಿರಾಟದ ತೊಂದರೆ ಉಂಟಾಗುತ್ತದೆ.

ಆಯುರ್ವೇದದಲ್ಲಿ ನ್ಯುಮೋನಿಯಾಕ್ಕೆ ಉತ್ತಮ ಚಿಕಿತ್ಸೆ ಇದೆ. ಅವು ಯಾವವು ಎಂದು ನೋಡುವುದಾದರೆ,

ಲಂಘನ

ನ್ಯುಮೋನಿಯಾಕ್ಕೆ ಆಯುರ್ವೇದದಲ್ಲಿ ಲಂಘನಾ ಎನ್ನುವ ಚಿಕಿತ್ಸೆ ನೀಡಲಾಗುತ್ತದೆ. ಇದರ ಮೊದಲ ಕೆಲಸವೇ ಅಮಾ (ಜೀರ್ಣಕಾರಿ ವಿಷವನ್ನು ಹೊರಹಾಕುವುದು) ಮತ್ತು ಜ್ವರಕ್ಕೆ ಚಿಕಿತ್ಸೆ ನೀಡುವುದು. ಇದನ್ನು ಉಪವಾಸ ಎಂದು ಪರಿಗಣಿಸಲಾಗುತ್ತದೆ.

ವಾಮನ ಚಿಕಿತ್ಸೆ

ಪಂಚಕರ್ಮಗಳಲ್ಲಿ ಒಂದಾದ ವಾಮನ ಚಿಕಿತ್ಸೆಯು ನ್ಯುಮೋನಿಯಾದಿಂದ ಉಂಟಾದ ಕಫ ಮತ್ತು ಪಿತ್ತದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಲ್ಲದೆ ಎದೆ ಮತ್ತು ನಾಡಿಯಿಂದ ವಿಷದ ಅಂಶವನ್ನು ಹೋಗಲಾಡಿಸಿ ಕೆಮ್ಮು, ಜ್ವರ, ಅಸ್ತಮಾದಂತಹ ಪರಿಸ್ಥಿತಿಗಳನ್ನು ಸರಿಪಡಿಸುತ್ತದೆ.

ನೆಲ್ಲಿಕಾಯಿ

ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅತ್ಯುತ್ತಮ ಪದಾರ್ಥವಾಗಿದೆ. ಮುಖ್ಯವಾಗಿ ನೆಲ್ಲಿಕಾಯಿಗಳನ್ನು ಆಯುರ್ವೇದದಲ್ಲಿ ಚಿಕಿತ್ಸೆಗಳಲ್ಲಿ ಬಳಸಲಾಗುತ್ತದೆ.

ರಕ್ತಹೀನತೆ, ಆಸ್ತಮಾ, ಮಧುಮೇಹ, ಶೀತ ಮತ್ತು ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯನ್ನು ಪರಿಣಾಮಕಾರಿಯಾಗಿ ಗುಣಪಡಿಸಲು ಸಹಾಯ ಮಾಡುತ್ತದೆ. ಹೀಗಾಗಿ ನ್ಯುಮೋನಿಯಾದಿಂದ ಗುಣಮುಖವಾಗಲು ಆಮ್ಲಾ, ಅಮಲಕಿ ಅಥವಾ ನೆಲ್ಲಿಕಾಯಿ ಎಂದು ಕರೆಯುವ ಈ ಮೂಲಿಕೆಯನ್ನು ಬಳಸಬಹುದಾಗಿದೆ.

ಕುಟಜ ಮೂಲಿಕೆ

ಕುಟಜ ಅಥವಾ ಗ್ರಾಮೀಣ ಭಾಷೆಯಲ್ಲಿ ಹಾಲು ಕೊಡಸಿಗೆ ಎನ್ನುವ ಈ ಮೂಲಿಕೆ ಸಂಕೋಚಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಸಾಮಾನ್ಯವಾಗಿ ಅತಿಸಾರ ಮತ್ತು ನ್ಯುಮೋನಿಯಾದಲ್ಲಿ ಬಳಸಲಾಗುತ್ತದೆ.

ಅತ್ಯುತ್ತಮ ಬ್ಯಾಕ್ಟೀರಿಯಾ ವಿರೋಧಿ ಔಷಧವಾಗಿರುವುದರಿಂದ, ಇದು ನ್ಯುಮೋನಿಯಾದಲ್ಲಿ ಪರಿಣಾಮಕಾರಿಯಾಗಿದೆ.

ಅಮೃತಬಳ್ಳಿ

ಇದನ್ನು ಇಮ್ಯುನೊಮಾಡ್ಯುಲೇಟರ್ ಮತ್ತು ಆಂಟಿಪೈರೆಟಿಕ್ ಆಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಚಟುವಟಿಕೆಯನ್ನು ಸಹ ಹೊಂದಿದೆ. ಅಲ್ಲದೆ ರರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವನ್ನು ಅಮೃತಬಳ್ಳಿ ಹೊಂದಿರುವ ಕಾರಣ ಇದನ್ನು ನ್ಯುಮೋನಿಯಾ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.

ಆಡುಸೋಗೆ ಗಿಡ

ಆಡುಸೋಗೆ ಎಂದು ಗ್ರಾಂಥಿಕವಾಗಿ ಕರೆಯುವ ಮೂಲಿಕೆಯನ್ನು Adulsa ಎಂದೂ ಕರೆಯುತ್ತಾರೆ. ಇದನ್ನು ರಕ್ತಪರಿಚಲನೆ, ಉಸಿರಾಟ ಮತ್ತು ನರಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ

ಈ ಆಡುಸೋಗೆ ಮೂಲಿಕೆಯನ್ನು ಕಫ, ಬ್ರಾಂಕೈಟಿಸ್, ಫ್ಲೂ ಮತ್ತು ಆಸ್ತಮಾದ ಅಸ್ವಸ್ಥತೆಗಳಲ್ಲಿ ಬಳಸಲಾಗುತ್ತದೆ. ಹೀಗಾಗಿ ನ್ಯುಮೋನಿಯಾವನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಆದರೆ ನೆನಪಿಡಿ ಆಯುರ್ವೇದ ವೈದ್ಯರ ಸಲಹೆ ಇಲ್ಲಿದೆ ಮೂಲಿಕೆಯನ್ನು ಬಳಸಬೇಡಿ.