ಮನೆ ರಾಜ್ಯ ಕಾನೂನು ಸಚಿವರೊಂದಿಗೆ ಚರ್ಚಿಸಿ ಮೀಸಲಾತಿ ತೀರ್ಮಾನ: ಸಿಎಂ ಬೊಮ್ಮಾಯಿ

ಕಾನೂನು ಸಚಿವರೊಂದಿಗೆ ಚರ್ಚಿಸಿ ಮೀಸಲಾತಿ ತೀರ್ಮಾನ: ಸಿಎಂ ಬೊಮ್ಮಾಯಿ

0

ಬೆಂಗಳೂರು/ಬೆಳಗಾವಿ: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಮಧ್ಯಂತರ ವರದಿ ಸಲ್ಲಿಸಿದ್ದು, ಮುಂದಿನ ಕ್ರಮದ ಬಗ್ಗೆ ಕಾನೂನು ಸಚಿವರ ಜತೆ ಚರ್ಚಿಸಿ ಮೀಸಲಾತಿ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಇಂದು ಬೆಳಗ್ಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಜಯಪ್ರಕಾಶ್ ಹೆಗ್ಡೆ ಭೇಟಿ ಮಾಡಿ ಮಧ್ಯಂತರ ವರದಿ ಕೊಟ್ಟಿದ್ದಾರೆ. ಅದರ ಬಗ್ಗೆ ಮುಂದೇನು ಕ್ರಮ ತಗೆದುಕೊಳ್ಳಬೇಕು ಎಂದು ಕಾನೂನು ಸಚಿವರ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಆದಷ್ಟು ಬೇಗ ಕಾನೂನಾತ್ಮಕವಾಗಿ ಚರ್ಚಿಸಿ, ಎಲ್ಲ ಸಮುದಾಯದ ನಾಯಕರ ವಿಶ್ವಾಸದೊಂದಿಗೆ ಸೂಕ್ತ ನಿರ್ಧಾರ ಮಾಡುತ್ತೇವೆ ಎಂದು ಸದನಕ್ಕೆ ತಿಳಿಸಿದರು.

ಸದಾಶಿವ ಆಯೋಗ ವರದಿ ಬಂದು ಹತ್ತು ವರ್ಷ ಆದರೂ ಸರ್ಕಾರ ಅದನ್ನು ಒಪ್ಪದ ಕಾರಣ ವಿವರ ಕೊಟ್ಟಿಲ್ಲ. ಅದೇ ರೀತಿ ಕಾಂತರಾಜು ವರದಿ ಬಂದರೂ ಆಯೋಗದಲ್ಲಿ ಇದೆ. ಆದರೆ, ಈ ವರದಿ ಬಗ್ಗೆ ಕಾನೂನಾತ್ಮಕ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ. ಎಲ್ಲ ಪಕ್ಷದ ನಾಯಕರ ವಿಶ್ವಾಸದೊಂದಿಗೆ ಮುಂದುವರಿಯುತ್ತೇವೆ ಎಂದು ಮಾಹಿತಿ ನೀಡಿದರು.

ಅವಧಿ ಮುನ್ನ ಚುನಾವಣೆ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.

ದೆಹಲಿ ನಾಯಕರು ಸಿಎಂ ಜತೆಗೆ ಮಾತನಾಡಿದ್ದಾರೆ ಎಂಬುದು ಸತ್ಯವಲ್ಲ. ದೆಹಲಿ ನಾಯಕರು ‌ನನ್ನ ಜತೆ ಮಾತನಾಡಿಲ್ಲ. ಅವಧಿ ಮುಂಚೆ ಚುನಾವಣೆ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದು ತಿಳಿಸಿದರು.

ಸುಪ್ರೀಂನಲ್ಲಿ ಹೋರಾಡಲಿ: ಮಹಾರಾಷ್ಟ್ರ ನಾಯಕರು ಉದ್ಧಟತನ ಹೇಳಿಕೆ ಕೊಡುವುದರಿಂದ ಯಾವುದೇ ಪ್ರಯೋಜನ ಆಗಲ್ಲ. ಅವರ ರಾಜಕೀಯ ಉದ್ದೇಶಕ್ಕಾಗಿ ಆ ತರಹ ಮಾತನಾಡಿದ್ದಾರೆ. ಅವರು ಹೇಳಿರುವ ಯಾವುದು ಕೂಡ ಕಾರ್ಯಗತ ಮಾಡೋಕೆ ಸಾಧ್ಯವೇ ಇಲ್ಲ.‌ ಒಂದು ರಾಜ್ಯ ಇನ್ನೊಂದು ರಾಜ್ಯಗಳ ಸಂಬಂಧ ಇದ್ದೇ ಇರುತ್ತದೆ. ಈಗಾಗಲೇ ಗಡಿ ವಿವಾದ ಸುಪ್ರೀಂಕೋರ್ಟ್ ನಲ್ಲಿದೆ.ಅವರಿಗೆ ಅಷ್ಟು ಶಕ್ತಿ ಇದ್ರೆ ಅಲ್ಲಿ ಹೋರಾಟ ಮಾಡಲಿ ಎಂದು ಸವಾಲು ಹಾಕಿದರು‌.

ನಮ್ಮ ವಾದವನ್ನು ಸುಪ್ರೀಂಕೋರ್ಟ್ ನಲ್ಲಿ ಗಟ್ಟಿಯಾಗಿ ಮಂಡಿಸುತ್ತೇವೆ ಎಂದ ಅವರು, ಸಂಜಯ್ ರಾವತ್ ಏನು..? ಯಾವಾಗಲೂ ಅವರು ಪ್ರಚೋದನೆ ಹೇಳಿಕೆ ಕೊಡ್ತಾರೆ ಅಷ್ಟೇ. ಅವರು ಚೈನಾ ತರಹ ಬಂದರೆ, ಭಾರತದ ಸೇನೆ ತರಹ ನಮ್ಮ ಕನ್ನಡಿಗರು ಅದನ್ನು ಹಿಮ್ಮೆಟ್ಟಿಸುತ್ತಾರೆ ಎಂದು ತಿರುಗೇಟು ನೀಡಿದರು‌. ‌