ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.
ಮಂಡ್ಯ ಜಿಲ್ಲೆಯ ನಾಗಮಂಗಲ ಪುರಾಣ ಪ್ರಸಿದ್ಧ ಹಾಗೂ ಇತಿಹಾಸ ಪ್ರಸಿದ್ಧ ಸ್ಥಳ. ದ್ವಾಪರದ ಮಣಿಪುರವೇ ಈಗಿನ ನಾಗಮಂಗಲಎಂದೂ ಹೇಳಲಾಗುತ್ತದೆ. ಧರ್ಮರಾಯನ ಅಶ್ವಮೇಧಯಾಗದ ಕುದುರೆ ಕಟ್ಟಿ ಹಾಕಿದ ಬಭ್ರುವಾಹನ – ಅರ್ಜುನನೊಂದಿಗೆ ಯುದ್ಧ ಮಾಡಿದಾಗ ಅರ್ಜುನನ ಶಿರವನ್ನೇ ತುಂಡರಿಸುತ್ತಾನೆ. ಆಗ ತನ್ನ ತಾಯಿ ಉಲೂಚಿಯ ಸೂಚನೆಯಂತೆ ವಜ್ರಾಸ್ತ್ರ ಹೂಡಿ, ಪಾತಾಳಲೋಕಕ್ಕೆ ಮಾರ್ಗ ಮಾಡಿ, ಅಲ್ಲಿಂದ ನಾಗ ಮಣಿ ತಂದು ತನ್ನ ತಂದೆಗೆ ಪುನರ್ಜನ್ಮ ನೀಡಿದ ಕ್ಷೇತ್ರವೂ ಇದೆಂದು ಹೇಳಲಾಗುತ್ತದೆ. ಇದಕ್ಕೆ ಸಾಕ್ಷಿಯಾಗಿ ಇಲ್ಲಿರುವ ಪುರಾತನ ಯೋಗಾನರಸಿಂಹ ದೇವಾಲಯದಲ್ಲಿ ಅಡ್ಡಡ್ಡವಾಗಿ ಭೂಮಿ ಬಾಯಿ ಬಾಯಿಬಿಟ್ಟಂತಿರುವ ಸಾವಿರಾರು ಅಡಿ ಆಳದ ಬಾವಿ ಇದೆ. ಈ ಬಾವಿಯಲ್ಲಿ ಈಗಲೂ ಶುದ್ಧ ಕುಡಿಯುವ ನೀರಿದ್ದು, ಎಂಥ ಬರಗಾಲದಲ್ಲೂ ಬಾವಿ ಬತ್ತದೇ ಇರುವುದು ವೈಶಿಷ್ಟ್ಯವಾಗಿದೆ. ಇಂದಿಗೂ ಯೋಗಾನರಸಿಂಹನಿಗೆ ನಿತ್ಯ ಈ ಜಲದಿಂದಲೇ ಅಭಿಷೇಕ ನಡೆಯುತ್ತದೆ.
ಈ ದೇವಾಲಯವನ್ನು ನರಸಿಂಹ ನಾಯಕ ಎಂಬ ಪಾಳೆಯಗಾರ ಕಟ್ಟಿಸಿದ ಎಂದು ಸ್ಥಳ ಪುರಾಣ ಸಾರುತ್ತದೆ. ಒಮ್ಮೆ ನರಸಿಂಹನಾಯಕನ ಕನಸಲ್ಲಿ ಬಂದ ನರಸಿಂಹದೇವರು, ತಾನು ಕಾಡಿನ ಮಧ್ಯದಲ್ಲಿರುವ ಹುತ್ತದಲ್ಲಿರುವುದಾಗಿಯೂ, ಹುತ್ತಕ್ಕೆ ಹೊಂದಿಕೊಂಡು ಸಾಮಾನ್ಯವಾಗಿ 3 ಅಡಿಯಷ್ಟೇ ಬೆಳೆಯುವ ಹಂಗರು ಎಂಬ ಕುರುಚಲು ಗಿಡ ವೃಕ್ಷದೋಪಾದಿಯಲ್ಲಿ ಮುಗಿಲಿನೆತ್ತರ ಬೆಳೆದಿರುವುದಾಗಿಯೂ, ಅದಕ್ಕೆ ಸರ್ಪ ಸುತ್ತಿಕೊಂಡಿರುತ್ತದೆ ಎಂದೂ ತಿಳಿಸಿ ಅದೃಶ್ಯನಾದನಂತೆ.
ಅದರಂತೆ ನರಸಿಂಹ ನಾಯಕ ಕಾನನದಲ್ಲಿ ಹುಡುಕಿದಾಗ ಹಂಗರು ವೃಕ್ಷ ಕಾಣಿಸಿತಂತೆ ಅದಕ್ಕೆ ಸರ್ಪ ಸುತ್ತಿಕೊಂಡಿತ್ತು. ಹುತ್ತ ಅಗೆದು ನೋಡಿದಾಗ ಅದರಲ್ಲಿ ಮುದ್ದಾದ ಶಿಲಾರೂಪದ ಯೋಗಾನರಸಿಂಹನ ವಿಗ್ರಹ ದೊರಕಿತಂತೆ. ಇದನ್ನು ಎಲ್ಲಿ ಸ್ಥಾಪಿಸಬೇಕು ಎಂದು ನಾಯಕ ಕೇಳಿದಾಗ, ಆ ಸರ್ಪ ದಾರಿ ತೋರುತ್ತಾ ಹೋಗಿ, ಈಗಿನ ದೇವಾಲಯದ ಅಂತರಾಳದಲ್ಲಿರುವ ಹುತ್ತದ ಬಳಿ ಮಂಡಲಾಕಾರವಾಗಿ ಮಲಗಿತಂತೆ. ಅಲ್ಲಿಯೇ ನರಸಿಂಹದೇವರನ್ನು ಸ್ಥಾಪಿಸಿ ಪೂಜಿಸಲಾಯಿತಂತೆ. ನಾಗರಹಾವು ಮಂಡಲಾಕಾರದಲ್ಲಿ ಮಲಗಿದ ಊರು ನಾಗಮಂಡಲವಾಯಿತು, ಕಾಲಾನಂತರದಲ್ಲಿ ನಾಗಮಂಗಲವಾಯಿತು ಎಂದು ಹೇಳುತ್ತಾರೆ.
ಈಗಲೂ ದೇವಾಲಯದ ಗರ್ಭಗೃಹದ ಮುಂಭಾಗದ ಜಾಗದಲ್ಲಿ ಹುತ್ತವಿದ್ದು, ಅಲ್ಲಿ ನಾಗರಕಲ್ಲಿದೆ. ಹುತ್ತಕ್ಕೆಎಷ್ಟೇ ಹಾಲು, ನೀರುಹಾಕಿದರೂ ಅದು ಕೆಳಗೆಹೋಗುತ್ತದೆ. ಈಗಲೂ ದೇವಾಲಯದಲ್ಲಿ ಸುಮಾರು 30 ಅಡಿಗೂ ಹೆಚ್ಚು ಉದ್ದ ಇರುವ ಹಂಗರ ವೃಕ್ಷವನ್ನು ಸಂರಕ್ಷಿಸಿಡಲಾಗಿದೆ.
ಈ ದೇವಾಲಯವನ್ನು ನಂತರದ ಕಾಲದಲ್ಲಿ ವಿಜಯನಗರದ ಅರಸರು, ಮೈಸೂರು ಒಡೆಯರು ಜೀರ್ಣೋದ್ಧಾರ ಮಾಡಿದ್ದಾರೆ. ಕೋಟೆಯಂತೆ ಭಾಸವಾಗುವ ವಿಶಾಲವಾದ ದೇವಾಲಯದ ಮುಂದೆ ಬೃಹತ್ ಗರುಡಗಂಬವಿದೆ. ದೇವಾಲಯದ ದ್ವಾರಬಂಧದ ಮೇಲೆ ಗಾರೆಗಚ್ಚಿನ ಗೋಪುರವಿದ್ದು, ಮೂರು ಗೂಡುಗಳಲ್ಲಿ ನರಸಿಂಹ ದೇವರ ಮೂರ್ತಿಗಳಿವೆ. ಒಳ ಪ್ರವೇಶಿಸಿದರೆ ವಿಶಾಲವಾದ ಮುಖಮಂಟಪ, ಪ್ರದಕ್ಷಿಣ ಪಥವಿದೆ. ದೇವಾಲಯದಲ್ಲಿ ಶಂಖ, ಚಕ್ರ ಹಿಡಿದ ಚತುರ್ಭುಜನಾದ ಅಪರೂಪದ ಗರುಡನ ವಾಹನ ಹಾಗೂ ಹನುಮ ವಾಹನವಿದೆ.
ಒಳಗೆ ನವರಂಗವಿದ್ದು, ಪ್ರಧಾನಗರ್ಭಗೃಹದಲ್ಲಿ ಮೂರು ಅಡಿ ಗರುಡಪೀಠದ ಮೇಲೆ ಯೋಗಾನರಸಿಂಹನ ಬೃಹತ್ ಮೂರ್ತಿಯಿದೆ. ದ್ವಾರದಲ್ಲಿ ದ್ವಾರಪಾಲಕರ ವಿಗ್ರಹಗಳಿವೆ. ದೇವಾಲಯದ ಪ್ರಾಕಾರದಲ್ಲಿ ಚಕ್ರಪೀಠದ ಮೇಲೆ ಸುದರ್ಶನ ನಾರಸಿಂಹರ ಅಪರೂಪದ ವಿಗ್ರಹವೂ ಇದೆ ಇದರಲ್ಲಿ ಒಂದು ಬದಿಯಲ್ಲಿ ಸುದರ್ಶನ ಆಳ್ವಾರರೂ ಹಿಂಬದಿಯಲ್ಲಿ ನರಸಿಂಹ ದೇವರೂ ಇದ್ದಾರೆ. ಲಕ್ಷ್ಮೀ ಅಮ್ಮನವರಿಗೆ ಪ್ರತ್ಯೇಕ ಗುಡಿಯೂ ಇದೆ.
ನಿತ್ಯ ದೇವರಿಗೆ ವೈಖಾನಸ ಆಗಮದಂತೆ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಪ್ರತಿಸಂವತ್ಸರದ ವೈಶಾಖ ಮಾಸದ ಹುಣ್ಣಿಮೆಯಂದು ನರಸಿಂಹಸ್ವಾಮಿಯ ರಥೋತ್ಸವ ಜರುಗುತ್ತದೆ. ದೇವಾಲಯದಲ್ಲಿ ಮಡಿ ಮೈಲಿಗೆಯ ಲೋಪವಾದರೆ ಇಂದಿಗೂ ನಾಗದರ್ಶನವಾಗುತ್ತದೆ ಎಂಬುದು ಪ್ರತೀತಿ.
ಇಲ್ಲಿ ಬಂದು ಪೂಜೆ ಮಾಡಿಸಿದರೆ ಸರ್ಪದೋಷ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ. ಆಶ್ಲೇಷ ಹೋಮ, ಆಶ್ಲೇಷ ಬಲಿ, ಸರ್ಪ ಸಂಸ್ಕಾರ , ರಾಹುದೋಷ ನಿವಾರಣೆ, ಸುದರ್ಶನ ನಾರಸಿಂಹ ಹೋಮ, ಕಲ್ಯಾಣೋತ್ಸವಗಳನ್ನೂ ಹರಕೆಹೊತ್ತ ಭಕ್ತರು ಇಲ್ಲಿ ನಡೆಸುತ್ತಾರೆ.
ಹೆಚ್ಚಿನ ಮಾಹಿತಿಗೆ ಪ್ರಧಾನಅರ್ಚಕರಾದ ಎನ್.ಸುರೇಶ್ ಅವರನ್ನು 9448780933 ಮೂಲಕ ಸಂಪರ್ಕಿಸಬಹುದು.
ತುಮಕೂರಿನಿಂದ 90 ಕಿ.ಮೀ, ಮೈಸೂರಿನಿಂದ 75 ಕಿ.ಮೀ, ಮಂಡ್ಯದಿಂದ 40 ಕಿ.ಮೀ, ಹಾಸನದಿಂದ 90 ಕಿ.ಮೀ ಹಾಗೂ ಬೆಂಗಳೂರುನಿಂದ 125 ಕಿ.ಮೀ. ದೂದರದಲ್ಲಿರುವ ನಾಗಮಂಗಳಕ್ಕೆ ರಾಜ್ಯದ ಪ್ರಮುಖ ಸ್ಥಳಗಳಿಂದ ನೇರ ಬಸ್ ಸೌಕರ್ಯವಿದೆ. ಸಮೀಪದಲ್ಲೇ ಸೌಮ್ಯ ಕೇಶವನ ದೇವಾಲಯ ಹಾಗೂ ಕೋಟೆ ಬೆಟ್ಟವೂ ಇದೆ.