ಮನೆ ಕಾನೂನು ಠೇವಣಿ ಹಣ  ಮರಳಿಸದ ಅಂಚೆ ಇಲಾಖೆಗೆ ದಂಡ ವಿಧಿಸಿದ ಗ್ರಾಹಕ ಆಯೋಗ

ಠೇವಣಿ ಹಣ  ಮರಳಿಸದ ಅಂಚೆ ಇಲಾಖೆಗೆ ದಂಡ ವಿಧಿಸಿದ ಗ್ರಾಹಕ ಆಯೋಗ

0

ಧಾರವಾಡ:  ಧಾರವಾಡದ ಯು.ಬಿ. ಹಿಲ್ ನಿವಾಸಿ ಅಶೋಕ ಹುದ್ದಾರ ಎಂಬುವವರು ಇಲ್ಲಿನ ಹೆಡ್ ಪೋಸ್ಟ್ ಕಛೇರಿಯಲ್ಲಿ 15 ವರ್ಷಗಳ ಅವಧಿಯ ಹೆಚ್.ಯು.ಎಫ್/ ಪಿ.ಪಿ.ಎಫ್ ಅಕೌಂಟ್ ತೆರೆದು ಸದರಿ ಯೋಜನೆಯಡಿ ಹಣವನ್ನು ತೊಡಗಿಸಿದ್ದರು. ಸದರಿ ಯೋಜನೆಯು ದಿ:31/03/2015 ರಂದು ಮುಕ್ತಾಯವಾಗಿತ್ತು.

ತದನಂತರ ದೂರುದಾರ ಸದರಿ ಯೋಜನೆಯನ್ನು ಮತ್ತೆ 5 ವರ್ಷಗಳ ಅವಧಿಗೆ ಅಂದರೆ 01/04/2015 ರಿಂದ 31/03/2020 ರವರೆಗೆ ಮುಂದುವರೆಸಿದ್ದರು. ಆ ಯೋಜನೆ ದಿ:31/03/2020 ರಂದು ಮುಕ್ತಾಯವಾಗಿದ್ದರೂ ಅಲ್ಲಿಯವರೆಗಿನ ಅವರ ವಂತಿಗೆ ಹಣ ಮತ್ತು ಅದರ ಮೇಲಿನ ಬಡ್ಡಿ ಲೆಕ್ಕ ಹಾಕಿ ಅಂಚೆ ಇಲಾಖೆಯವರು ತನಗೆ ಹಣವನ್ನು ಹಿಂದಿರುಗಿಸದೇ ಸತಾಯಿಸಿ ತೊಂದರೆ ನೀಡಿ, ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.

ಅಂಚೆ ಇಲಾಖೆಯವರು ಸದರಿ ದೂರಿಗೆ ಆಕ್ಷೇಪಣೆ ಎತ್ತಿ ಕೇಂದ್ರ ಸರ್ಕಾರದ ಸುತ್ತೋಲೆಯಂತೆ ಹೆಚ್.ಯು.ಎಫ್/ಪಿ.ಪಿ.ಎಫ್ಯೋೇಜನೆಯನ್ನು ಮುಂದುವರೆಸಲು ಅವಕಾಶ ಇರುವುದಿಲ್ಲ. ಕಾರಣ 2015ರ ನಂತರ ಅವಧಿ ಮುಕ್ತಾಯವಾಗಿರುವುದರಿಂದ ಆ ನಂತರದ ಅವಧಿಗೆ ಬಡ್ಡಿಕೊಡಲು ಬರುವುದಿಲ್ಲಅಂದಿದ್ದರು. ದೂರುದಾರನಿಗೆ 2015ರವರೆಗಿನ ಹಣ ಮತ್ತು ನಂತರದ ಅವಧಿಯ ಅವರ ವಂತಿಗೆ ಹಣವನ್ನು ಮಾತ್ರ ಅವರಿಗೆ ವಾಪಸ್ಸು ಕೊಡಬಹುದು ಅಂತಾ ಅಂಚೆ ಇಲಾಖೆಯವರು ಆಕ್ಷೇಪಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ, ಸದಸ್ಯರಾದ ವಿಶಾಲಾಕ್ಷಿ ಅ. ಬೋಳಶೆಟ್ಟಿ ಹಾಗೂ ಪ್ರಭು. ಸಿ ಹಿರೇಮಠ ಅಂಚೆ ಇಲಾಖೆಯ ಎಲ್ಲ ಆಕ್ಷೇಪಣೆಗಳನ್ನು ತಳ್ಳಿಹಾಕಿ, 2015ರ ನಂತರ ದೂರುದಾರರ ಹಣವನ್ನು ಜನರಲ್ ಪಿಪಿಎಫ್ ಯೋಜನೆಯಡಿ ಅಂಚೆ ಇಲಾಖೆಯವರು ಮುಂದುವರೆಸಿ ಆ ಹಣವನ್ನು ಬೇರೆಕಡೆ ವಿನಿಯೋಗಿಸಿ ಲಾಭ ಪಡೆದು ಈಗ ದೂರುದಾರನಿಗೆ ಬಡ್ಡಿಕೊಡಲು ನಿರಾಕರಿಸುತ್ತಿರುವುದು ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ದಿ:28/03/2000 ರಿಂದ ಇಲ್ಲಿಯವರೆಗೆ ದೂರುದಾರನ ವಂತಿಗೆ ಮೇಲೆ ಬಡ್ಡಿ ಲೆಕ್ಕ ಹಾಕಿ ಅಂಚೆ ಇಲಾಖೆಯವರು ಅವರಿಗೆ ಒಟ್ಟು ರೂ.28,34,686/- ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ನೀಡುವಂತೆ ಆದೇಶಿಸಿದೆ. ಸೇವಾ ನ್ಯೂನ್ಯತೆಯಿಂದ ದೂರುದಾರನಿಗೆ ಆಗಿರುವ ತೊಂದರೆ ಮತ್ತು ಹಿಂಸೆಗಾಗಿ ರೂ.50,000/-ಗಳ ಪರಿಹಾರ ಹಾಗೂ ರೂ.10,000/-ಗಳ ಪ್ರಕರಣದ ಖರ್ಚು ವೆಚ್ಚ ಅಂತಾಕೊಡಲು ಅಂಚೆ ಇಲಾಖೆಗೆ ನಿರ್ದೇಶನ ನೀಡಲಾಗಿದೆ.