ಮನೆ ಭಾವನಾತ್ಮಕ ಲೇಖನ ಕೋಪ ಹತಾಶೆ ಹತ್ತಿಕ್ಕುವ ಬಗೆ

ಕೋಪ ಹತಾಶೆ ಹತ್ತಿಕ್ಕುವ ಬಗೆ

0

ಚಿಕ್ಕದಿರಲಿ ದೊಡ್ಡದಿರಲಿ ಮನಸ್ಸು ಎಣಿಸಿದ್ದೆಲ್ಲಾ ನೆರವೇರದು. ಹುಟ್ಟಿದ ಆಶಯಗಳು ಕೈಗೂಡದಿದ್ದಲ್ಲಿ ಹುಟ್ಟುವುದೇ ಕೋಪ, ಹತಾಶೆಗಳು. ಬಯಸಿದ್ದು, ಬಂದದ್ದು ಎರಡರ ನಡುವಿನ ವ್ಯತ್ಯಯ ಆ ಕ್ಷ ಣದ ಕೋಪವಾಗಿ ಸಿಡಿದರೆ ಕಾಲಕ್ರಮೇಣ ಮಡುಗಟ್ಟಿದ ನಿರಾಸೆ ಹತಾಶೆಯಾಗಿ ಮನದೊಳಗೆ ನೆಲೆ ನಿಂತುಬಿಡುತ್ತದೆ.

ಫಲಾಫಲಗಳನ್ನು, ಬದುಕಿನ ಸಂಪೂರ್ಣ ನಿಯಂತ್ರಣವನ್ನು ಅದಮ್ಯ ಚೇತನಕ್ಕೊಪ್ಪಿಸದೇ ನಾವೇ ಹಿಡಿದಿಡಲು ಹೊರಟಾಗ ರೋಷಾವೇಶ ಹತಾಶ ಮನಃಸ್ಥಿತಿಗಳನ್ನು ನಿರಂತರ ಎದುರಿಸಬೇಕಾದ್ದು ಅನಿವಾರ್ಯವಷ್ಟೇ

ಕೋಪ, ಹತಾಶೆಯ ರೂಪಗಳು

ಕೋಪ-ಹತಾಶೆಗಳು ತನ್ನ ಮೇಲೆ, ಪರರ ಮೇಲೆ, ಪ್ರಪಂಚದ ಮೇಲೆ ಹೀಗೆ ನಾನಾ ಪ್ರಕಾರಗಳಲ್ಲಿ ವ್ಯಕ್ತವಾಗುತ್ತಿರುತ್ತವೆ. ತನ್ನಿಂದಲೇ ತಾನಿರಿಸಿಕೊಂಡ ನಿರೀಕ್ಷೆಗಳನ್ನು ತಲುಪಲಾಗದಿದ್ದಲ್ಲಿ ತನ್ನ ಮೇಲೆಯೇ ಕೋಪ, ಹತಾಶೆಗಳು ಉದ್ಭಾವವಾದರೆ ಪರರ ಮೇಲಿರಿಸಿದ ಭರವಸೆಗಳು ಹುಸಿಯೆನಿಸಿಬಿಟ್ಟಾಗ ಪರರ ಮೇಲೆಯೂ, ಹೊರಗಿನ ಪರಿಸ್ಥಿತಿಗಳಿಂದ ಕೈಕಟ್ಟಿದಂತೆ ಆಗಿಬಿಟ್ಟಾಗ ಪ್ರಪಂಚದ ಮೇಲೆಯೂ ಕೋಪ ಹತಾಶೆಯ ಭಾವಗಳು ಪ್ರಕಟವಾಗುತ್ತಿರುತ್ತವೆ

ಅಪನಂಬಿಕೆ, ಅಸಹಾಯಕತೆಗಳು

ಬರೀ ಆವೇಶದ ಬೆನ್ನೇರುತ್ತಾ ಸಿಡಿಮಿಡಿಗೊಳ್ಳುವುದಕ್ಕಷ್ಟೇ ಸೀಮಿತರಾಗದೇ ನನಗೇಕೆ ಹೀಗಾಗುತ್ತಿದೆ? ಎಂದು ಅವಲೋಕಿಸಿಗೊಂಡಾಗ ಇದೆಲ್ಲದರ ಹಿಂದೆ ಅಸಹಾಯಕತೆ, ಅಪನಂಬಿಕೆಗಳ ಮನಃಸ್ಥಿತಿ ಹೊಗೆಯಾಡುತ್ತಿರುವುದು ಕಣ್ಣಿಗೆ ಕಾಣುವುದು. ತನ್ನ ಸಾಮರ್ಥ್ಯದ ಹಾಗೂ ಮುನ್ನಡೆಸುತ್ತಿರುವ ಚೈತನ್ಯದ ಮೇಲೆ ಅಪನಂಬಿಕೆ, ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಲಾಗದ, ಜೀವನದ ಸನ್ನಿವೇಶಗಳನ್ನು ಎದುರಿಸಲಾಗದ ಅಸಹಾಯಕತೆ ಇವುಗಳು ನಮ್ಮೊಳಗನ್ನು ಆವರಿಸಿ ತನ್ನ ಬಗ್ಗೆ, ತನ್ನ ಬದುಕಿನ ಬಗ್ಗೆಯೇ ಸಿಟ್ಟಾಗಿ, ರೋಸಿಹೋಗುವಂತೆ ಮಾಡಿ ಬಿಟ್ಟಿರುತ್ತವೆ.

ಆಗಿರುವುದೆಲ್ಲಾ ಅವಶ್ಯಕವೇ

ನಮ್ಮ ಕೋಪ ಹತಾಶೆಗಳಿಗೆ ಕಾರಣವಾದರೂ ಏನು? ನಮಗೆ ಅಗತ್ಯವೆನಿಸಿದ್ದು, ಈ ಕ್ಷ ಣಕ್ಕೆ ಹಿತವಾಗಿ ಕಂಡದ್ದು ನಮ್ಮದಾಗಲಿಲ್ಲ ಎಂಬ ಕೊರಗು. ಆದರೆ ನಿಜಕ್ಕೂ ವಿಮರ್ಶಿಸಿದರೆ ಮನದ ಇಂಗಿತಗಳೆಲ್ಲ ಬದುಕಿಗೆ ಹಿತವಾದಂತವುಗಳೇ ಆಗಿರುವುದಿಲ್ಲ. ಈ ಹೊತ್ತಿನಲ್ಲಿ ಬಹಳವೇ ಅವಶ್ಯಕವಿನಿಸಿದ್ದು ಮುಂದೊಂದು ದಿನ ನಿರರ್ಥಕವಾಗಿದ್ದಿರಬಹುದು. ನಮ್ಮ ಬದುಕಿಗೆ, ಪ್ರಗತಿಗೆ ಅಡ್ಡಿಯಾಗುವಂತದ್ದೇ ಕೈಗೆ ದಕ್ಕದೇ ಹೋಗಿದ್ದಿರಬಹುದು. ಹಾಗೆ ನೋಡಿದರೆ ಈ ಜೀವನದಲ್ಲಿ ನಡೆಯುತ್ತಿರುವುದೆಲ್ಲ ಮನುಷ್ಯರಾಗಿ ಬೆಳೆದು, ಹದವಾಗಲು ಅವಶ್ಯಕವೇ. ಅನವಶ್ಯಕವಾಗಿರುವುದೇನಿದ್ದರೂ ಈ ಸಿಟ್ಟು ಸೆಡುವುಗಳಷ್ಟೇ!

ಎಲ್ಲವನ್ನೂ ನಿಯಂತ್ರಿಸಲಾಗದು

ನಮ್ಮ, ನಮ್ಮವರ ಬದುಕಿನಲ್ಲಿ ಜರುಗುವಂತದ್ದೆಲ್ಲವೂ ತನ್ನ ಹಿಡಿತದಲ್ಲಿಯೇ ಇರಬೇಕು ಎಂಬುದೇ ಹಾಗಾಗದೇ ಇದ್ದಾಗ ದುಃಖ ದುಮ್ಮಾನಗಳನ್ನು ತಂದಿಕ್ಕುವುದು. ಮನುಜರಾಗಿ ಇಲ್ಲಿ ನಾವು ಮಾಡಲೇಬೇಕಾದ ಕರ್ತವ್ಯಗಳೊಂದಿಷ್ಟಿವೆ. ಸ್ವಸಾಧನೆಯೇ ಇರಲಿ, ಸಂಸಾರ- ಸಂಬಂಧಗಳಿಗೊಳಪಟ್ಟಿರುವ ಪಾತ್ರ ನಿರ್ವಹಣೆಯೇ ಇರಲಿ ನಮ್ಮ ಪಾಲಿನದ್ದನ್ನು ಅಚ್ಚುಕಟ್ಟಾಗಿ ಮಾಡುವ ಪ್ರಯತ್ನ, ಚೆನ್ನಾಗಿ ನಡೆಯಲೆಂಬ ಪ್ರಾರ್ಥನೆ ನಮ್ಮದಾಗಬೇಕೇ ವಿನಃ ಜೀವನದ ಅಷ್ಟೂ ನಿಯಂತ್ರಣವೂ, ಫಲ-ಫಲಿತಾಂಶಗಳ ಹಿಡಿತವೂ ತನಗೇ ಪ್ರಾಪ್ತಿಯಾಗಬೇಕೆಂಬ ಹಠ ಸಲ್ಲದು. ಇಂತಹ ಅಜ್ಞಾನ ನಮ್ಮೊಳಗೆ ಪೇರಿಸಿಟ್ಟಿರುವ ಕೋಪ, ನಿರಾಸೆಗಳ ಕಟ್ಟಿಗೆಗೆ ಕಿಡಿ ತಗುಲಿಸುವುದು ಖಚಿತ.

ದೃಷ್ಟಿಕೋನ ಬದಲಾಗಬೇಕು

ಒಳ್ಳೆಯದು ಆಗಲಿಲ್ಲ, ಧಕ್ಕಲಿಲ್ಲ ಎಂದು ಭ್ರಮಿಸಿ ಕಳವಳಿಸುವುದಕ್ಕಿಂತ ಆಗಿರುವುದು, ಧಕ್ಕಿರುವುದೆಲ್ಲಾ ಒಳ್ಳೆಯದೇ ಎಂದು ಭಾವಿಸಿಕೊಂಡು ಬಿಟ್ಟರೆ ಬದುಕನ್ನು ನಾವು ಕಾಣುವ ಮತ್ತು ಬದುಕು ನಮ್ಮನ್ನು ಕಾಣುವ ರೀತಿ ಎರಡರಲ್ಲಿಯೂ ಮಹತ್ತರ ಬದಲಾವಣೆ ಉಂಟಾಗಿ ಬಿಡುವುದು. ಜೀವನವನ್ನು ಆರೋಪಿಸಿ ಹೀಗೆಳೆಯುವುದು ಕಡಿಮೆಯಾದಲ್ಲಿ ಮತ್ತೆಲ್ಲಿಯ ಹತಾಶೆ, ನಿರಾಸೆಗಳು? ಬದುಕನ್ನು ನೋಡುವ ದೃಷ್ಟಿಯನ್ನು ಬದಲಾಯಿಕೊಳ್ಳಲು ಮನಸ್ಸು ಮಾಡಿದರೆ ಕಾಡಿದ ಕೋಪವೂ ಸ್ವವಿಮರ್ಶೆಗೆ ಬಾಗಿಲಾಗಿ ಬದಲಾಗಬಲ್ಲದು.

ಪ್ರಯತ್ನ ನಮ್ಮದಾಗಲಿ

ಹತಾಶೆ, ಆಕ್ರೋಶಗಳೇನಿದ್ದರೂ ಮನಸ್ಸು, ಬುದ್ಧಿ ಯನ್ನು ಕಂಗೆಡಿಸಿ ದೈಹಿಕ- ಮಾನಸಿಕ ಆರೋಗ್ಯಗಳನ್ನು ಕೆಡಿಸಿ, ಆತ್ಮೋನ್ನತಿಗೆ ಅಡ್ಡವಾಗಿ ಬಂದು ಕೂರುತ್ತದಷ್ಟೇ. ಒಳಗಿನ ಆರೋಗ್ಯ, ಆತ್ಮತೃಪ್ತಿಗೆ ತನ್ನ ಕರ್ತವ್ಯವೆಷ್ಟು , ತನ್ನ ಕೈ ಮೀರಿದ್ದೆಷ್ಟು ಎಂದು ಅರಿತು ನಡೆಯುತ್ತಾ ಕೈ ಮೀರಿದ್ದನ್ನು ಕಾಯುವ ಚೈತನ್ಯಕ್ಕೊಪ್ಪಿಸುತ್ತಾ ಕರ್ತವ್ಯವನ್ನು ನಿರ್ವಹಿಸುವ ಶಕ್ತಿಯನ್ನು ನೀಡೆಂದು ನಿರಂತರವಾಗಿ ಬೇಡುತ್ತಿರಬೇಕು. ಎಂದೆಂದಿಗೂ ಶರಣಾಗತಿ, ಸಮತೋಲಿತ ಮನಃಸ್ಥಿತಿಗಳು ನಮ್ಮನ್ನು ಪೊರೆದು ಸತ್ಯಪಥದಲ್ಲಿ ನಡೆಸುವವು. ಈ ದಿಕ್ಕಿನಲ್ಲಿ ಹೆಜ್ಜೆಯೂರುವ ಸತತ ಪ್ರಯತ್ನ ನಮ್ಮದಾಗಬೇಕಷ್ಟೇ.