ಮನೆ ಅಪರಾಧ ಸರ್ಕಾರಕ್ಕೆ ಜಮಾ ಮಾಡಬೇಕಾದ ಹಣ ದುರುಪಯೋಗ: ಗ್ರಾಮ ಲೆಕ್ಕಿಗ ಅಮಾನತು

ಸರ್ಕಾರಕ್ಕೆ ಜಮಾ ಮಾಡಬೇಕಾದ ಹಣ ದುರುಪಯೋಗ: ಗ್ರಾಮ ಲೆಕ್ಕಿಗ ಅಮಾನತು

0

ಮೈಸೂರು: ಸರ್ಕಾರಕ್ಕೆ ಜಮಾ ಮಾಡಬೇಕಾದ ಕಂದಾಯ ರಶೀತಿಯಲ್ಲಿ ಹಣ ದುರುಪಯೋಗ ಮಾಡಿಕೊಂಡ ಗ್ರಾಮಲೆಕ್ಕಿಗನನ್ನು ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಟಿ.ನರಸೀಪುರ ತಾಲ್ಲೂಕು ಸೋಸಲೆ ಹೋಬಳಿ, ದೊಡ್ಡಬಾಗಿಲು ವೃತ್ತ ಗ್ರಾಮಲೆಕ್ಕಿಗ ಅಂಥೋನಿ ರಾಜ್ ಸುನಿಲ್ ರನ್ನು ಅಮಾನತುಗೊಂಡವರು.

ಈ ಹಿಂದೆ ಟಿ.ನರಸೀಪುರ ತಾಲ್ಲೂಕು, ಮೂಗೂರು ಹೋಬಳಿ ಮಾಡ್ರಹಳ್ಳಿ ವೃತ್ತದ ಅಧಿಕ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವಧಿಯಲ್ಲಿ ಮೂಗೂರು ಹೋಬಳಿ, ಮಾಡ್ರಹಳ್ಳಿ ಗ್ರಾಮದ ಸರ್ವೆ ನಂ 74/1, 74/3, 81/2, 23 ಹಾಗೂ 180/1 ರ ಜಮೀನಿಗೆ ಸಂಬಂಧಿಸಿದಂತ ಕಂದಾಯ ಪಾವತಿ ರಶೀತಿಯಲ್ಲಿ ಹೆಚ್ಚಿನ ಶುಲ್ಕವನ್ನು ವಸೂಲಿ ಮಾಡಿರುವುದಾಗಿ ಎಂ.ಕೆ.ಶಂಕರ್ ಗುರು, ಮಾಡ್ರಹಳ್ಳಿ ಗ್ರಾಮ ದವರು ದೂರು ಮನವಿ ಸಲ್ಲಿಸಿರುವ ಮೇರೆಗೆ, ರಶೀತಿ ನೀಡಿರುವುದು ಮತ್ತು ಕಛೇರಿ ಕಂದಾಯ ರಶೀತಿ ಪುಸ್ತಕದಲ್ಲಿ ನಮೂದಿಸಿರುವ ಮೊತ್ತಕ್ಕೂ ವ್ಯತ್ಯಾಸ ಕಂಡು ಬಂದಿತ್ತು.

ಖಾತದಾರರಿಂದ ರೂ.8162 ವಸೂಲಿ ಮಾಡಿ ಸರ್ಕಾರಕ್ಕೆ ರೂ. 440 ಪಾವತಿ ಮಾಡಿ ಸರ್ಕಾರಿ ರಶೀತಿಯನ್ನು ತಿದ್ದುವುದರ ಮೂಲಕ ಸರ್ಕಾರದ ಬೊಕ್ಕಸಕ್ಕೆ ರೂ.7722 ನಷ್ಟ ಉಂಟು ಮಾಡಿರುವುದರಿಂದ ಶಿಸ್ತು ಕ್ರಮ ಜರುಗಿಸುವಂತೆ  ಟಿ.ನರಸೀಪುರ ತಹಸೀಲ್ದಾರ್ ಶಿಫಾರಸ್ಸು ಮಾಡಿದ್ದರು.

ಸರ್ಕಾರದ ಹಣ ದುರುಪಯೋಗ ಪಡಿಸಿಕೊಂಡಿರುವ ಹಾಗೂ ಸರ್ಕಾರಿ ದಾಖಲೆಯನ್ನು ತಿದ್ದಿ ಸರ್ಕಾರಿ ಕೆಲಸದಲ್ಲಿ ಕರ್ತವ್ಯ ಲೋಪವೆಸಗಿರುವ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತ್ತು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.