ಮನೆ ರಾಜಕೀಯ ಹಿಜಾಬ್ ಹೆಸರಿನಲ್ಲಿ ಕರಾವಳಿಯನ್ನು ತಾಲಿಬಾನ್ ಮಾಡಲು ಬಿಡುವುದಿಲ್ಲ: ನಳೀನ್ ಕುಮಾರ್ ಕಟೀಲ್

ಹಿಜಾಬ್ ಹೆಸರಿನಲ್ಲಿ ಕರಾವಳಿಯನ್ನು ತಾಲಿಬಾನ್ ಮಾಡಲು ಬಿಡುವುದಿಲ್ಲ: ನಳೀನ್ ಕುಮಾರ್ ಕಟೀಲ್

0

ದಕ್ಷಿಣ ಕನ್ನಡ: ಹಿಜಾಬ್ ಅಥವಾ ಇಂತಹ ಯಾವುದೇ ಘಟನೆಗಳಿಗೆ ರಾಜ್ಯದಲ್ಲಿ ಆಸ್ಪದವಿಲ್ಲ. ನಮ್ಮ ಬಿಜೆಪಿ ಸರ್ಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತದೆ. ಕರಾವಳಿಯನ್ನು, ನಮ್ಮ ಪ್ರದೇಶವನ್ನು ತಾಲಿಬಾನ್ ಮಾಡಲು ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಶಾಲಾ-ಕಾಲೇಜು ಎನ್ನುವುದು ಸರಸ್ವತಿ ಮಂದಿರವಾಗಿದ್ದು, ಅಲ್ಲಿ ಶಾಲೆಯ ನಿಯಮಗಳೊಂದಿಗೆ ಶಿಕ್ಷಣ ಪಡೆಯುವುದು ಧರ್ಮ. ಶಾಲೆಯೊಳಗೆ ಬೇರೆ ಧರ್ಮವನ್ನು ತರುವುದು ಸರಿಯಲ್ಲ.‌ ಶಾಲೆಯಲ್ಲಿ ಶಾಲೆಯ ನಿಯಮದಡಿಯಲ್ಲಿ ವ್ಯಾಸಂಗ ಮಾಡಬೇಕು. ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಇದೆ. ಯಾರಿಗೆ ಇಂತಹ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಮನಸ್ಸಿಲ್ಲವೋ ಅವರು ಬೇರೆ ದಾರಿ ಹುಡುಕಿಕೊಳ್ಳಲಿ ಎಂದರು.

ಹಿಜಾಬ್ ಬಗ್ಗೆ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಸಿಎಂ ಆಗಿದ್ದಾಗ ಟಿಪ್ಪು ಜಯಂತಿ ನಡೆಸಿ ಸಮಾಜದ ಸಾಮರಸ್ಯ ಹಾಳು ಮಾಡಿದ್ದಾರೆ. ಶಾದಿಭಾಗ್ಯದ ಹೆಸರಿನಲ್ಲಿ ಕೆಲವೇ ಕೆಲವು ಸಮುದಾಯಗಳಿಗೆ ಯೋಜನೆ ನೀಡಿದ್ದರು. ಈಗ ಇವರು ಹಿಜಾಬ್ ಬಗ್ಗೆ ಮಾತನಾಡುತ್ತಾರೆ. ಸಿದ್ದರಾಮಯ್ಯ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು. ಹಿಜಾಬ್ ವಿಚಾರವೀಗ ನ್ಯಾಯಾಲಯದಲ್ಲಿದೆ. ಅಲ್ಲಿಂದ ಯಾವ ರೀತಿಯ ನಿರ್ದೇಶನ ಬರುತ್ತದೆಯೆಂದು ಕಾದು ನೋಡೋಣ ಎಂದರು.