ಮನೆ ರಾಜ್ಯ ಬಿಎಂಟಿಸಿಗೆ 1300 ವಿದ್ಯುತ್ ಚಾಲಿತ ಬಸ್ ಜೋಡಣೆ: ಸಿಎಂ ಬೊಮ್ಮಾಯಿ

ಬಿಎಂಟಿಸಿಗೆ 1300 ವಿದ್ಯುತ್ ಚಾಲಿತ ಬಸ್ ಜೋಡಣೆ: ಸಿಎಂ ಬೊಮ್ಮಾಯಿ

0

ಬೆಂಗಳೂರು: ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 1300 ವಿದ್ಯುತ್ ಚಾಲಿತ ವಾಹನಗಳು  ಬಿಎಂಟಿಸಿ ಸೇವೆಗೆ ಜೋಡಿಸಲಾಗುತ್ತಿದೆ. ಪರಿಸರ ಹಾನಿಯನ್ನು ತಡೆಗಟ್ಟುವ ಎಲೆಕ್ಟ್ರಿಕಲ್ ಬಸ್ ಸೇವೆ ಜನರಿಗೆ ದೊರೆಯಲಿದೆ ಎಂದರು.

ಅವರು ಇಂದು ಬಿಎಂಟಿಸಿ ವತಿಯಿಂದ ನಿರ್ಮಿಸಿರುವ ಕಲಾಸಿಪಾಳ್ಯ  ನೂತನ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದರು.

ಬಿಎಂಟಿಸಿ ನಗರದ ಜನರಿಗೆ ಉತ್ತಮ ಸೇವೆ ಸಲ್ಲಿಸುತ್ತಿದೆ. ಮುಂಬರುವ ದಿನಗಳಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಬಿಎಂಟಿಸಿ ಪ್ರಮುಖ ಪಾತ್ರ ವಹಿಸಲಿದ್ದು, ಬಿಎಂಟಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವುದರಿಂದ ಬೆಂಗಳೂರಿನ ವಾಹನ ದಟ್ಟಣೆ ಕಡಿಮೆಯಾಗುತ್ತದೆ. ಕೋವಿಡ್ ನಿಂದಾಗಿ ಹಾಗೂ ಕೆಲವು ವರ್ಷಗಳಿಂದ ಬಿಎಂಟಿಸಿ ದರಗಳನ್ನು ಹೆಚ್ಚಿಸದ ಕಾರಣ , ಬಿಎಂಟಿಸಿ ನಷ್ಟದಲ್ಲಿದೆ ಕಳೆದ ಎರಡು ವರ್ಷಗಳಲ್ಲಿ ಸರ್ಕಾರ 2915 ಕೋಟಿ ರೂ.ಗಳನ್ನು ಸಂಸ್ಥೆಗೆ ನೀಡಿರುವುದರಿಂದ, ಬಿಎಂಟಿಸಿ, ತನ್ನ ಸೇವೆಯನ್ನು  ಸಲ್ಲಿಸಲು ಸಾಧ್ಯವಾಗಿದೆ. ಬಿಎಂಟಿಸಿಗೆ 3445 ಹೊಸ ಬಸ್ ಗಳನ್ನು ಒದಗಿಸಲಾಗುತ್ತಿದೆ ಎಂದರು.

ಬಿಎಂಟಿಸಿ ಹಾಗೂ ಮೆಟ್ರೋ ಅಧಿಕಾರಿಗಳ ಜೊತೆ ಚರ್ಚಿಸಿ ಕಲಾಸಿಪಾಳ್ಯ ಬಸ್ ನಿಲ್ದಾಣವನ್ನು ಮೆಟ್ರೋ ಸ್ಟೇಷನ್ ಗೆ ಜೋಡಿಸುವ ಬಗ್ಗೆ  ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುವುದು. ಬೆಂಗಳೂರಿನಲ್ಲಿ  ಬಿಎಂಟಿಸಿ ಅತ್ಯಂತ ದಕ್ಷತೆಯಿಂದ ಕೆಲಸ ಮಾಡಬೇಕಿದೆ. ಬಿಎಂಟಿಸಿ ಯನ್ನು ಲಾಭದಾಯಕಗೊಳಿಸಲು ಶ್ರೀನಿವಾಸಮೂರ್ತಿಯವರ ಸಮಿತಿ ವರದಿಯನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಬಿಎಂಟಿಸಿ ನೌಕರರ ಕಲ್ಯಾಣಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ನೌಕರರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದರು.

ಕಲಾಸಿಪಾಳ್ಯದ ಐತಿಹಾಸಿಕ ಬಸ್ ನಿಲ್ದಾಣವನ್ನು ಹೊಸದಾಗಿ ನಿರ್ಮಿಸಿರುವುದು ಸಂತೋಷ ತಂದಿದೆ.  ಕಲಾಸಿಪಾಳ್ಯ ಬಸ್ ನಿಲ್ದಾಣ ಬಹಳ ವರ್ಷಗಳಿಂದ ಜನರ ಸೇವೆ ಮಾಡಿಕೊಂಡು ಬಂದಿದೆ. ಕೆಎಸ್ ಆರ್ ಟಿ ಸಿ ಮತ್ತು ಖಾಸಗಿಬಸ್ ಸೇವೆ ಸುತ್ತಮುತ್ತಲಿನ ಗ್ರಾಮದವರು ಮತ್ತು ವ್ಯಾಪಾರಸ್ಥರಿಗೆ ಬಹಳ ಅನುಕೂಲ ಕಲ್ಪಿಸಿರುವ ಬಸ್ ನಿಲ್ದಾಣ. ಇಲ್ಲಿನ ಸೌಲಭ್ಯಗಳನ್ನು ವ್ಯವಸ್ಥಿತಗೊಳಿಸಿ ನೂತನ ಬಸ್ ನಿಲ್ದಾಣ ನಿರ್ಮಿಸಿ ಜನರ ಸೇವೆಗೆ ಸಮರ್ಪಿಸಿರುವುದು ಜನರಿಗೆ ದೊಡ್ಡ ಅನುಕೂಲ ಕಲ್ಪಿಸಿದಂತಾಗಿದೆ ಎಂದರು.

ಸಚಿವರಾದ ಆರ್.ಅಶೋಕ್ ಹಾಗೂ  ಮುನಿರತ್ನ, ಶಾಸಕ ಉದಯ್ ಗರುಡಾಚಾರ್,   ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.