ಮನೆ ಅಂಕಣ ಭ್ರಷ್ಟ ಯುಗದ ಅಧೀಕೃತ ಆರಂಭ ಎಂದು ಘೋಷಿಸಲು ಇದು ಸಕಾಲ

ಭ್ರಷ್ಟ ಯುಗದ ಅಧೀಕೃತ ಆರಂಭ ಎಂದು ಘೋಷಿಸಲು ಇದು ಸಕಾಲ

ತೇತ್ರಾಯುಗ, ದ್ವಾಪರಯುಗ, ಕಲಿಯುಗವೂ ಮುಗಿದು ಭ್ರಷ್ಟ ಯುಗ ಪ್ರಾರಂಭವಾಗಿದೆ.

0

ಶಾಸಕಾಂಗದ ಆಡಳಿತ ಪಕ್ಷದ ಜನಪ್ರತಿನಿಧಿ ಮತ್ತು ಕ್ಯಾಬಿನೆಟ್ ದರ್ಜೆಯ ನಿಗಮದ ಅಧ್ಯಕ್ಷ ಹಾಗು ಆತನ ಮಗ ಕಾರ್ಯಾಂಗದ ಉನ್ನತ ಅಧಿಕಾರಿ ಕೋಟಿ ಕೋಟಿ ಹಣದ ಸಮೇತ ( ಅಧೀಕೃತವಾಗಿಯೇ ಸ್ವಂತ ಹಣವನ್ನು ಕೂಡ ಆ ಪ್ರಮಾಣದಲ್ಲಿ ನಗದು ರೂಪದಲ್ಲಿ ಇಟ್ಟುಕೊಳ್ಳುವುದು ಅಪರಾಧ ) ಪೋಲೀಸರಿಗೆ ಸಿಕ್ಕಿ ಬೀಳುವುದು, ಶಾಸಕ 6 ದಿನಗಳ ಕಾಲ ಇಂತಹ ಆಧುನಿಕ ತಂತ್ರಜ್ಞಾನದ ಕಾಲದಲ್ಲೂ ನಾಪತ್ತೆಯಾಗುವುದು, ಪೋಲೀಸರು ನಿಷ್ಕ್ರಿಯರಾಗುವುದು, ರಾಜ್ಯದ ಶ್ರೇಷ್ಠ ನ್ಯಾಯಾಲಯ ತನ್ನ ಎಲ್ಲಾ ಕಾರ್ಯ ಒತ್ತಡದ ನಡುವೆಯೂ ಈ ಜಾಮೀನು ಅರ್ಜಿಯನ್ನು ತುರ್ತು ಎಂದು ಭಾವಿಸಿ ಶೀಘ್ರ – ತತ್ ತಕ್ಷಣ ವಿಚಾರಣೆಗೆ ತೆಗೆದುಕೊಳ್ಳುವುದು, ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಜಾಮೀನು ನಿರಾಕರಣೆಯ ಸಂಪ್ರದಾಯವಿದ್ದರು, ಎ2 ಆರೋಪಿ ನ್ಯಾಯಾಂಗ ಬಂಧನದಲ್ಲಿ ಇದ್ದರೂ ಎ1 ಆರೋಪಿಗೆ ಇಲ್ಲಿ ಅಪರೂಪದ ಪ್ರಕರಣ ಎಂದು ಪರಿಗಣಿಸಿ ತಾತ್ಕಾಲಿಕ ಜಾಮೀನು ನೀಡುವುದು, ನಂತರದಲ್ಲಿ ಆ ಶಾಸಕ ತಕ್ಷಣವೇ ತನ್ನ ಮನೆಯಲ್ಲಿಯೇ ಪ್ರತ್ಯಕ್ಷವಾಗಿ ತಾನು ಇಷ್ಟು ದಿನ ಮನೆಯಲ್ಲೇ ಇದ್ದೆ ಎಂದು ಹೇಳಿ ಪೋಲೀಸರನ್ನು ಅಣಕಿಸುವುದು, ಜನರೆಲ್ಲ ಆತನನ್ನು ಮೆರವಣಿಗೆಯಲ್ಲಿ ಮಹಾತ್ಯಾಗ ಪುರುಷನಂತೆ ಜೈಕಾರ ಹಾಕುತ್ತಾ ಸ್ವಾಗತಿಸುವುದು, ಆತ ಏನೂ ನಡೆದೇ ಇಲ್ಲ ಎಂಬಂತೆ ವರ್ತಿಸುವುದು, ಮಾಧ್ಯಮಗಳು ಈ‌ ದೃಶ್ಯಗಳನ್ನು ವಿಜೃಂಭಿಸುವುದು, ಪೋಲೀಸರು ಅಸಹಾಯಕರಾಗಿರುವುದು, ರಾಜಕಾರಣಿಗಳು ಚುನಾವಣೆಯ ತಯಾರಿಯಲ್ಲಿರುವುದು, ಜನರು ಲೋಕಾಭಿರಾಮವಾಗಿ ಮಾತನಾಡುತ್ತಾ ತಮಗೆ ತೋಚಿದಂತೆ ಪ್ರತಿಕ್ರಿಯಿಸುವುದು, ಪಕ್ಷದ ಕಾರ್ಯಕರ್ತರು ಇತರ ಪಕ್ಷಗಳ ಭ್ರಷ್ಟಾಚಾರವನ್ನು ಹೇಳಿ ಇದನ್ನು ಸಮರ್ಥಿಸಿಕೊಳ್ಳುವುದು ಮುಂತಾದ ಘಟನೆಗಳ ಸರಪಳಿಯನ್ನು ನೋಡಿದರೆ ಯಾವುದೇ ಅನುಮಾನಕ್ಕೆ ಆಸ್ಪದ ಇಲ್ಲದಂತೆ ಕಲಿಯುಗ ಅಂತ್ಯವಾಗಿ ಭ್ರಷ್ಟಯುಗ ಪ್ರಾರಭವಾಗಿರುವುದು ಖಚಿತವಾಗುತ್ತದೆ.

ಇನ್ನು ಮುಂದೆ ನಾವು ಸಹ ನಮ್ಮ ಬದುಕಿನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕಾಗಬಹುದು. ಏಕೆಂದರೆ ಇಡೀ ವ್ಯವಸ್ಥೆ ಭ್ರಷ್ಟರಿಗೇ ಮಾನ್ಯತೆ ಕೊಡುವ ಸಂಪ್ರದಾಯ ಶುರುವಾದರೆ ಪ್ರಾಮಾಣಿಕರ ಗತಿ ಏನು.

ನಾನು ಭ್ರಷ್ಟ, ಈ ಹಗರಣದಲ್ಲಿ ನೇರವಾಗಿ ಸಿಕ್ಕಿ ಹಾಕಿಕೊಂಡಿದ್ದೇನೆ ಎಂಬ ಸಂಕೋಚ ಆತನಿಗೂ ಇಲ್ಲ, ಆ ಭ್ರಷ್ಟನನ್ನು ಬೆಂಬಲಿಸಬಾರದು ಎಂಬ ಸಂಕೋಚ ಅಲ್ಲಿ ‌ಸೇರಿದ್ದ ಜನರಿಗೂ ಇಲ್ಲ, ನಾವು ಇನ್ನು ಮುಂದೆ ಭ್ರಷ್ಟಾಚಾರ ಮಾಡಬಾರದು ಎಂಬ ಸಂಕೋಚ ನಮಗೂ ಇಲ್ಲ. ಅದಕ್ಕಾಗಿಯೇ ಭ್ರಷ್ಟ ಯುಗ ಅಧಿಕೃತವಾಗಿ ಪ್ರಾರಂಭವಾಗಿದೆ ಎಂದು ಧೈರ್ಯವಾಗಿ ಹೇಳುತ್ತಿರುವುದು.

ಕೆಲವು ವರ್ಷಗಳ ಹಿಂದೆ ಸರ್ಕಾರಿ ಉದ್ಯೋಗ ಪಡೆಯಲು ಲಂಚ ನೀಡಬೇಕಾಗಿತ್ತು. ಆದರೆ ಇಂದು ಡೆತ್ ಸರ್ಟಿಫಿಕೇಟ್ ಗೂ, ಬರ್ತ್ ಸರ್ಟಿಫಿಕೇಟ್ ಗೂ ಲಂಚ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಲಂಚವನ್ನು ಪರ್ಸೆಂಟೇಜ್ ಲೆಕ್ಕದಲ್ಲಿ ಪಡೆಯಲಾಗುತ್ತದೆ. ಕಡತ ವಿಲೇವಾರಿ ಮಾಡಲು ಲಂಚ ನೀಡಬೇಕಾಗಿದೆ.

ಇದರ ಪರಿಣಾಮ ಭಾರತದ ನಿಜವಾದ ಆತ್ಮಕ್ಕೆ ಧಕ್ಕೆಯಾಗಿದೆ. ಜನರ ದಕ್ಷತೆ ಪ್ರಾಮಾಣಿಕತೆಯೇ ಕುಸಿದಿದೆ. ಸಮಾಜ ಮತ್ತು ಸರ್ಕಾರದ ಮೇಲಿನ ನಂಬಿಕೆಯೇ ಇಲ್ಲವಾಗಿದೆ. ಭ್ರಷ್ಟಾಚಾರ ಮತ್ತು ಜಾತಿ ವ್ಯವಸ್ಥೆ ಭಾರತಕ್ಕೆ ಶಾಪವಾಗಿ ಪರಿಣಮಿಸಿದೆ.

ಭ್ರಷ್ಟಾಚಾರದ ಮೂಲ ಸ್ವರೂಪವನ್ನು ಹುಡುಕುವ ಜವಾಬ್ದಾರಿ ನಮ್ಮ ಮೇಲಿದೆ. ಇದನ್ನು ಪಕ್ಷಾತೀತವಾಗಿ ಅವಲೋಕನ ಮಾಡಬೇಕು. ಇಲ್ಲದಿದ್ದರೆ ತಪ್ಪುಗಳ ಪ್ರಮಾಣದ ಮೇಲೆ ಭ್ರಷ್ಟಾಚಾರಿಗಳು ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಂಡು ನಿರಂತರ ವಂಚಕರಾಗುತ್ತಾರೆ. ಮಾಧ್ಯಮಗಳು ಅವರಿಗೆ ಅನುಕೂಲಕರ ವೇದಿಕೆಯನ್ನು ಸೃಷ್ಟಿಸುತ್ತಾರೆ.

ಮೊದಲನೆಯದಾಗಿ, ಕಾನೂನುಗಳ ಸಂಕೀರ್ಣತೆ ಭ್ರಷ್ಟಾಚಾರ ಹೆಚ್ಚಾಗಲು ಒಂದು ಪ್ರಮುಖ ಕಾರಣ. ಜನರನ್ನು ನಂಬದ ಅಧಿಕಾರಿಗಳು, ಅಧಿಕಾರಿಗಳನ್ನು ನಂಬದ ಜನರು ಒಟ್ಟು ಅನುಮಾನ ಪ್ರವೃತ್ತಿಯ ಸ್ವಾರ್ಥ ವ್ಯವಸ್ಥೆಯೇ  ಕೆಟ್ಟ ಹಣದ ಹರಿವು ಹೆಚ್ಚಾಗಲು ಒಂದು ಸಾಧನವಾಗಿದೆ. ಅಧಿಕಾರಿಗಳ ಮತ್ತು ರಾಜಕಾರಣಿಗಳ ಶ್ರೇಣೀಕೃತ ಅಧಿಕಾರದ ಹಂಚಿಕೆ, ನಿಯಮಗಳ ಒಳಮರ್ಮವನ್ನು ತಮ್ಮ ಹಣದಾಹಕ್ಕೆ ಬಳಸಿಕೊಳ್ಳುವ ತಂತ್ರಗಾರಿಕೆ ಭ್ರಷ್ಟಾಚಾರ ಸಾರ್ವತ್ರಿಕವಾಗಲು ಕಾರಣವಾಗಿದೆ.

ಎರಡನೆಯದಾಗಿ, ದುಡಿದ ಹಣಕ್ಕಿಂತ ಭ್ರಷ್ಟ ಹಣ ಹೆಚ್ಚು ಸುಲಭವಾಗಿ ಸಿಗುತ್ತದೆ ಮತ್ತು ಆ ಹಣದಿಂದ ನಮ್ಮ ಐಹಿಕ ಸುಖ ಭೋಗಗಳನ್ನು ಸಂತೃಪ್ತಿ ಗೊಳಿಸಿಕೊಳ್ಳಬಹುದು ಎಂಬ ಅಭಿಪ್ರಾಯ ಈ ಆಧುನಿಕ ಕಾಲದಲ್ಲಿ ಬಲವಾಗಿ ಬೇರೂರಿದೆ. ಹಣದಿಂದಲೇ ಚುನಾವಣೆ ಗೆದ್ದು ಅಧಿಕಾರ ಹಿಡಿಯಬಹುದು ಮತ್ತು ಅದರಿಂದ ಮತ್ತಷ್ಟು ಹಣ ಮಾಡಿ ಅದೇ  ಅಧಿಕಾರವನ್ನು ಉಳಿಸಿಕೊಳ್ಳಬಹುದು, ಸರ್ಕಾರಿ ಅಧಿಕಾರಿಗಳು ಸಂಬಳದಿಂದ ಸಾಧಿಸಲು ಸಾಧ್ಯವಾಗದ ಭವ್ಯ ಬಂಗಲೆ ಕಾರು ವಿದೇಶ ಪ್ರವಾಸ ತೋಟದ ಮನೆ ಅನುಕೂಲಕರ ವರ್ಗಾವಣೆ ಎಲ್ಲವೂ ಭ್ರಷ್ಟ ಹಣದಿಂದ ಪಡೆಯಬಹುದು ಎಂಬುದು ಹೆಚ್ಚು ವಾಸ್ತವವಾಗಿದೆ. ಅದಕ್ಕಾಗಿಯೇ ಹೆಚ್ಚು ಹೆಚ್ಚು ಹಣ ಮಾಡಲು ಯಾವುದೇ ದಾರಿಯನ್ನು ಕಂಡುಕೊಳ್ಳುತ್ತಾರೆ.

ಮೂರನೆಯದಾಗಿ, ಸಮಾಜದಲ್ಲಿ ಕುಸಿಯುತ್ತಿರುವ ಮಾನವೀಯ ಮೌಲ್ಯಗಳು, ಹೆಚ್ಚುತ್ತಿರುವ ಕೊಳ್ಳುಬಾಕ ಸಂಸ್ಕೃತಿ, ಹಣದಿಂದಲೇ ನಿರ್ಧಾರವಾಗುವ ನಮ್ಮ ಗೌರವ ಸ್ಥಾನಮಾನ, ಸಂಬಂಧಗಳು, ಆರೋಗ್ಯ ಶಿಕ್ಷಣ ಮುಂತಾದ ಸೇವೆಗಳು, ಕೊನೆಗೆ ದೇವರ ದರ್ಶನವನ್ನು ಸಹ ಹಣದಿಂದಲೇ ಮಾಡಬಹುದು ( ಪೂಜೆ ಪ್ರಾರ್ಥನೆ ಹೋಮ ಹವನ ) ಎಂಬ ಕಾರಣದಿಂದ ಜನರು ಹಣ ಮಾಡಲು ಭ್ರಷ್ಟ ಮಾರ್ಗಗಳನ್ನು ಹುಡುಕತೊಗಿದರು. ಅದು ಊಹೆಗೂ ನಿಲುಕದ ಹೊಸ ಹೊಸ ಆಯಾಮಗಳನ್ನು ಪಡೆಯಿತು. ಅದು ಎಷ್ಟೆಂದರೆ ಈಗ ಭ್ರಷ್ಟಾಚಾರದ ಮೂಲ ಹುಡುಕುವುದೇ ಸಾಧ್ಯವಿಲ್ಲ ಎನ್ನುವಂತಾಗಿದೆ.

ನಾಲ್ಕನೆಯದಾಗಿ ಮತ್ತು ಬಹುಮುಖ್ಯವಾಗಿ ಭಾರತೀಯ ಸಮಾಜದ ಜಾತಿ ವ್ಯವಸ್ಥೆ ಭ್ರಷ್ಟಾಚಾರದ ಮೂಲವಾಗಿ ಬೇರು ಬಿಟ್ಟಿದೆ. ಹೇಳಿಕೇಳಿ ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಬಹುಮತವೇ ಅತ್ಯಂತ ಪ್ರಮುಖವಾದುದು. ಜಾತಿಯ ಅಭಿಮಾನ ಅಂಧಕಾರ ಮತದಾರರನ್ನು ಕುರುಡಾಗಿಸಿದೆ.  ಈ ಜಾತಿ ಪದ್ದತಿ ಭ್ರಷ್ಟಾಚಾರವನ್ನು ಸಮೃದ್ಧವಾಗಿ ಪೋಷಿಸುತ್ತಿದೆ. ಸಂಖ್ಯೆಯ ಪ್ರಬಲ ಜಾತಿಗಳು ಅದಕ್ಕೆ ಪೂರಕ ಭ್ರಷ್ಟ ಹಣ ಒಟ್ಟು ವ್ಯವಸ್ಥೆಯನ್ನೇ ನಿಯಂತ್ರಿಸುತ್ತಿದೆ.

ಭ್ರಷ್ಟಾಚಾರ ಕೇವಲ ಹಣ ಆಸ್ತಿ ಅಧಿಕಾರ ಎಂಬ ವಸ್ತು ರೂಪದಲ್ಲಿ ಮಾತ್ರ ಚಲಾವಣೆಯಲ್ಲಿಲ್ಲ. ಅದು ಮಾನಸಿಕವಾಗಿ ಕೂಡ ಕಾರ್ಯಾಚರಣೆಯಲ್ಲಿದೆ. ನಮ್ಮ ರಕ್ತ ಮೂಳೆ ಮಾಂಸ ಉಸಿರು ಹೃದಯ ಎಲ್ಲವನ್ನೂ ನಿಯಂತ್ರಿಸುವ ಮೆದುಳಿನಲ್ಲಿ ಭ್ರಷ್ಟಾಚಾರ ಅವಿತು ಕುಳಿತಿದೆ. ಅವಕಾಶ ಇಲ್ಲದಿದ್ದಾಗ ಅದು ಪ್ರಾಮಾಣಿಕ ಮುಖವಾಡ ತೊಡುತ್ತದೆ. ಒಮ್ಮೆ ಅವಕಾಶ ಸಿಕ್ಕರೆ ಎಲ್ಲಾ ಮೌಲ್ಯಗಳನ್ನು ಗಾಳಿಗೆ ತೂರಿ ರಾಕ್ಷಸ ರೂಪ ಪಡೆಯುತ್ತದೆ. ಎಲ್ಲಾ ‌ಸಂಸ್ಕಾರ ಸಂಸ್ಕೃತಿಗಳನ್ನು ಆಪೋಶನ ತೆಗೆದುಕೊಳ್ಳುತ್ತದೆ. ಎಲ್ಲವನ್ನೂ ಸಮರ್ಥನೆ ಮಾಡಿಕೊಳ್ಳುವ ಭಂಡತನಕ್ಕೆ ಇಳಿಯುತ್ತದೆ.

ನಮ್ಮ ಸಹಜ ಸುಖ ಸಂತೋಷ ನೆಮ್ಮದಿಯ ಜೀವನಮಟ್ಟವನ್ನೇ ಈ ಭ್ರಷ್ಟಾಚಾರ ನಾಶ ಮಾಡುತ್ತಿದೆ.  ಕೆಟ್ಟವರನ್ನು ಬಿಡಿ, ಕನಿಷ್ಟ ಒಳ್ಳೆಯವರು ಒಳ್ಳೆಯವರಾಗಿ ಬದುಕಲು ಸಹ ಈ ಭ್ರಷ್ಟಾಚಾರ ಅವಕಾಶ ನೀಡುತ್ತಿಲ್ಲ. ಇದು ಅತ್ಯಂತ ಅಪಾಯಕಾರಿ ಮತ್ತು ದುರಂತ.

ಮನುಷ್ಯನ ಆತ್ಮ ಮತ್ತು ಮನಸ್ಸುಗಳನ್ನು ಶುದ್ಧೀಕರಿಸಿ ಅದರ ಮೂಲಕ ಸಮಾಜದ ಮೂಲ ಆಶಯವನ್ನು ಸಾಮೂಹಿಕವಾಗಿ ಪರಿವರ್ತಿಸಿದರೆ ಭ್ರಷ್ಟಾಚಾರ ಕಡಿಮೆ ಮಾಡುವ ಸಾಧ್ಯತೆ ಇದೆ. ಕೇವಲ ಕಠಿಣ ಕಾನೂನುಗಳಿಂದ ಭಾರತದಂತಹ ಬೃಹತ್ ದೇಶದಲ್ಲಿ ಭ್ರಷ್ಟಾಚಾರ ನಿಯಂತ್ರಿಸುವುದು ಸಾಧ್ಯವಿಲ್ಲ. ನೀರಿನಂತೆ ಭ್ರಷ್ಟಾಚಾರ ಕೂಡ ಸ್ಥಿತಿಸ್ಥಾಪಕತ್ವ ಗುಣವನ್ನು ಹೊಂದಿದೆ. ‌ಅದು ಸಹಜವಾಗಿಯೇ ತನ್ನ ಸ್ಥಾನ ಸಂಬಂಧಗಳನ್ನು ಅವಶ್ಯಕತೆಗೆ ಅನುಗುಣವಾಗಿ ತಾನೇ ಹುಡುಕಿಕೊಳ್ಳುತ್ತದೆ.

ಮಂತ್ರಿಗಳ ರಾಜೀನಾಮೆ, ಅಧಿಕಾರಿಗಳ ಮೇಲೆ ದಾಳಿ,

ಮತ್ತಷ್ಟು ಕಠಿಣ ಕಾನೂನು ಮುಂತಾದ ಯಾವುದೂ ಉಪಯೋಗವಿಲ್ಲ. ನೈತಿಕತೆ ಮತ್ತು ಮಾನವೀಯತೆಯ ಆಧಾರದ ಮೇಲೆ ಈ ಸಮಾಜವನ್ನು ಪುನರ್ ರೂಪಿಸಬೇಕಿದೆ. ಧಾರ್ಮಿಕ, ಆಧ್ಯಾತ್ಮಿಕ, ಗುರು ಪರಂಪರೆ, ಆರೋಗ್ಯ, ಶಿಕ್ಷಣ, ಸಮಾಜ ಸೇವೆ, ಪತ್ರಿಕೋದ್ಯಮ ಸೇರಿ ಎಲ್ಲವೂ ಬಹುತೇಕ ಭ್ರಷ್ಟಗೊಂಡಿರುವಾಗ ಇದರ ನಿರ್ಮೂಲನೆ ತುಂಬಾ ಕಷ್ಟ. ಆದರೆ ಅಸಾಧ್ಯವಲ್ಲ. ಖಂಡಿತ ಕೆಟ್ಟ ಹಣದ ಮಹತ್ವ ಕಡಿಮೆಯಾಗಿ ಶ್ರಮದ ಪ್ರಾಮುಖ್ಯತೆ ಹೆಚ್ಚು ಮಾಡುವ ಮಾನವೀಯ ಮೌಲ್ಯಗಳನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡಿದರೆ, ಸಾಮಾನ್ಯ ಜನರಾದ ನಾವುಗಳು ಹಣ ಅಧಿಕಾರಕ್ಕಿಂತ ಮನುಷ್ಯನ ನಿಜವಾದ ಮತ್ತು ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಗೌರವ ಕೊಡುವ ಸರಳ ಮನೋಭಾವ ಪ್ರದರ್ಶಿಸಿದರೆ ಭ್ರಷ್ಟಾಚಾರ ಸಾಕಷ್ಟು ಕಡಿಮೆಯಾಗುತ್ತದೆ.

ಅದಕ್ಕಾಗಿ ಒಂದು ಸರಳ ಸೂತ್ರ ದಯವಿಟ್ಟು ಅಳವಡಿಸಿಕೊಳ್ಳೋಣ.

” ಒಳ್ಳೆಯವರ ಪ್ರೋತ್ಸಾಹ ಮತ್ತು ಜೊತೆ ಜೊತೆಗೆ ಕೆಟ್ಟವರ ತಿರಸ್ಕಾರ ಅಥವಾ ಅದು ಸಾಧ್ಯವಾಗದಿದ್ದರೆ ಕೆಟ್ಟವರ ನಿರ್ಲಕ್ಷ್ಯ ” ಇದು ನಮ್ಮಿಂದ ಸಾಧ್ಯವಾದರೆ ಈ ಸಮಾಜದಲ್ಲಿ ಭ್ರಷ್ಟಾಚಾರ ಕಡಿಮೆ ಆಗುವ ಸಾಧ್ಯತೆ ಇದೆ. ನಮ್ಮ ಜಾತಿಯವನು ನಮ್ಮ ಪಕ್ಷದವನು ನಮ್ಮ ಧರ್ಮದವನು ನಮ್ಮ ಊರಿನವನು ಎಂದು ಕಳ್ಳ ಸುಳ್ಳ ಜೈಲಿಗೆ ಹೋಗಿ ಬಂದವನನ್ನು ರಾಜಿನಾಮೆ ಕೊಡುವವನನ್ನು ಅತ್ತು ಕರೆದು ಹೆಗಲ ಮೇಲೆ ಹೊತ್ತು ತಿರುಗಿದರೆ ಈ ಸಮಾಜದ ಅಧೋಗತಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ದಯವಿಟ್ಟು ಸ್ವಾಭಿಮಾನವನ್ನು ಮಾರಿಕೊಳ್ಳಬೇಡಿ.

ಅವನು ಯಾರೇ ಆಗಿರಲಿ. ಒಳ್ಳೆಯವನು ಮಾತ್ರ ನಮ್ಮವನು. ಅವನಿಗೆ ಮಾತ್ರ ನಮ್ಮ ಪ್ರೀತಿ ಪ್ರೋತ್ಸಾಹ ಬೆಂಬಲ ಮತ್ತು ನಮ್ಮ ಮತ……..

ಆ ಬದಲಾವಣೆಯ ನಿರೀಕ್ಷೆಯಲ್ಲಿ ನಿಮ್ಮೊಂದಿಗೆ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ

ವಿವೇಕಾನಂದ ಎಚ್. ಕೆ.

9844013068…