ಮನೆ ಅಪರಾಧ ಅಫಜಲಪುರ ಕೊಲೆ ಪ್ರಕರಣ: ಪತ್ನಿಯನ್ನು ಕೊಂದು ನಾಟಕವಾಡಿದ ಪತಿಯ ಬಂಧನ

ಅಫಜಲಪುರ ಕೊಲೆ ಪ್ರಕರಣ: ಪತ್ನಿಯನ್ನು ಕೊಂದು ನಾಟಕವಾಡಿದ ಪತಿಯ ಬಂಧನ

0

ಕಲಬುರಗಿ: ಅಫಜಲಪೂರ ತಾಲೂಕಿನ‌ ಬಂದರವಾಡ ಗ್ರಾ.ಪಂ. ಮಾಜಿ ಸದಸ್ಯನ ಪತ್ನಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕೊಲೆ ಮಾಡಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆ ಮಾಡಿ ತನಗೇನು ಗೊತ್ತೇ ಇಲ್ಲ ಎಂಬಂತೆ ಡ್ರಾಮಾ ಮಾಡಿ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದ ಗ್ರಾಪಂ ಮಾಜಿ ಸದಸ್ಯನನ್ನು ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.

ಮಾರ್ಚ್ 13ರ ಬೆಳಗ್ಗೆ 10 ಗಂಟೆ ಸುಮಾರಿಗೆ ನಿತ್ಯದಂತೆ ನೀರು ಬೀಡಲು ಬಂದರವಾಡ ಗ್ರಾಮದ ರೈತ ಮಹಿಳೆ ಶಾಮಲಾಬಾಯಿ ಕಟ್ಟಿಮನಿ (35) ಹೊಲಕ್ಕೆ ಹೋದಾಗ ಬರ್ಬರವಾಗಿ ಕೊಲೆಯಾಗಿದ್ದರು. ಅರಬೆತ್ತಲೆ ಸ್ಥಿತಿಯಲ್ಲಿ ಶವ ಸಿಕ್ಕಿತ್ತು. ಮಹಿಳೆಯ ಅತ್ಯಾಚಾರ ಎಸಗಿ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂಬಂತೆ ಬಿಂಬಿಸಲಾಗಿತ್ತು.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರ ಮುಂದೆ ಮಹಿಳೆ ಪತಿ, ಗ್ರಾ.ಪಂ ಮಾಜಿ ಸದಸ್ಯ ಬಸವರಾಜ ಕಟ್ಟಿಮನಿ ಗಳಗಳನೆ ಅತ್ತು ಕೊಲೆಯ ಬಗ್ಗೆ ತನಗೇನೂ ಗೊತ್ತಿಲ್ಲ. ಕಾಮುಕರು ತನ್ನ ಹೆಂಡತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಅಂತ ನಾಟಕ ಮಾಡಿದ್ದ. ಅಲ್ಲದೇ ತನ್ನ ಹತ್ತಿರದ ಸಂಬಂಧಿ ಹಾಗೂ ಗ್ರಾಮದ ಕೆಲವರ ಮೇಲೆ ಅನುಮಾನ ಇದೆ ಅಂತ ದೂರಿನಲ್ಲಿ ಉಲ್ಲೇಖಸಿದ್ದರು.

ಘಟನೆ ವಿವರ:

ಅಂದು ಬಂದರವಾಡ ಗ್ರಾಮದ ಗೋದಿ ಹೊಲಕ್ಕೆ ಹೋಗಿದ್ದ ಪತ್ನಿ ಶಾಮಲಾಬಾಯಿ ಜೊತೆಗೆ ಪತಿ ಬಸವರಾಜ ಜಗಳ ತೆಗೆದಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದ್ದು, ಪತ್ನಿಯ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಪತ್ನಿಯ ಕೊಲೆ ಮಾಡಿ ಪ್ರಕರಣ ದಾರಿ ತಪ್ಪಿಸಲು ಶವವನ್ನು ಅರಬೆತ್ತಲೆ ಮಾಡಿ ಪಕ್ಕದ ಊರಿಗೆ ಆರೋಪಿ ಬಸವರಾಜ ಪಲಾಯನ ಮಾಡಿದ್ದ.ಪಕ್ಕದ ಗ್ರಾಮದ ದನದ ಜಾತ್ರೆಯಲ್ಲಿ ಪಾಲ್ಗೊಂಡು, ಅಲ್ಲಿ ಸಿಕ್ಕಸಿಕ್ಕವರನ್ನು ಮಾತನಾಡಿಸಿ ಬೆಳಗಿನ ಸಮಯ ತಾನೂ ಪಕ್ಕದ ಊರಲ್ಲಿದ್ದೆ ಎಂಬಂತೆ ಸಾಕ್ಷಿ ಹುಟ್ಟುಹಾಕಿದ್ದಾನೆ. ಕೊಲೆಯ ಸುದ್ದಿ ತಿಳಿದು ಪೊಲೀಸರು ಬಂದಾಗ ಗಳಗಳನೆ ಅತ್ತು ಪ್ರಕರಣದ ತನಿಖೆಯ ದಿಕ್ಕು ತಪ್ಪಿಸಲು ಪ್ರಯತ್ನ ಮಾಡಿದ್ದಾನೆ.

ಶಾಮಲಾಬಾಯಿ ಹಾಗೂ ಬಸವರಾಜ ಕಟ್ಟಿಮನಿ ಮದುವೆ ಸುಮಾರು ವರ್ಷಗಳ ಹಿಂದೆ ನಡೆದಿತ್ತು. ಎದೆಯ ಎತ್ತರಕ್ಕೆ ಮಕ್ಕಳು ಸಹ ಇದ್ದಾರೆ. ಬಸವರಾಜ ಈ ಹಿಂದೆ ಗ್ರಾ.ಪಂ ಸದಸ್ಯೆ ಕೂಡಾ ಆಗಿದ್ದ. ಆದ್ರೆ ಕಳೆದಬಾರಿ ಸೋಲು ಅನುಭವಿಸಿದ್ದ.

ಮೈಮುರಿದು ದುಡಿಯುವ ಬದಲಾಗಿ ಗ್ರಾಮದಲ್ಲಿ ರಾಜಕೀಯ ಜೊತೆ ಸಾಲ – ಸೂಲ ಮಾಡಿ ನಿತ್ಯ ಕುಡಿದುಬಂದು ಹಣ ನೀಡುವಂತೆ ಪತ್ನಿಯೊಂದಿಗೆ ಜಗಳವಾಡ್ತಿದ್ದ. ಗಂಡ ದುಡಿಯಲ್ಲ ಅಂತ ಶಾಮಲಾಬಾಯಿ ತಾವೇ ಗಂಡಸರಂತೆ ಕೃಷಿ ಮಾಡಿ ಸಂಸಾರ ಮುನ್ನಡೆಸುತ್ತಿದ್ದಳು. ತನ್ನ ಹೊಲ ಮಾತ್ರವಲ್ಲದೇ ಇತರರ ಹೊಲ ಕೂಡಾ ಲೀಸ್ ಪಡೆದು ಕೃಷಿ ಮಾಡುತ್ತಿದ್ದಳು.

ಶಾಮಲಬಾಯಿ ಕೃಷಿ ಮಾಡಿ ಜೀವನ ನಡೆಸುತ್ತಿದ್ದರಿಂದ ಬಸವರಾಜಗೆ ತನ್ನ ಹೊಲ ಮಾರಾಟ ಮಾಡೋಕೆ ತೊಂದರೆ ಆಗಿತ್ತು. ಅಲ್ಲದೇ ಕುಡಿಯಲು ತನ್ನ ಪತಿ ಬಸವರಾಜನಿಗೆ ಸಾಲ ಕೊಡದಂತೆ ಗ್ರಾಮಸ್ಥರಿಗೆ ಹೇಳಿದ್ದರು. ಇದರಿಂದ ಕುಡಿದು ಬಂದು ನಿತ್ಯ ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದನಂತೆ, ಅಂದು ಜಗಳ ವಿಕೋಪಕ್ಕೆ ತಿರುಗಿ ಪತ್ನಿಯನ್ನೇ ಕೊಲೆ ಮಾಡಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಈ ಕೊಲೆ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಇವರ ಮಧ್ಯೆ ನಡೆಯುತ್ತಿದ್ದ ಕೌಟುಂಬಿಕ ಕಲಹದ ಬಗ್ಗೆ ಗ್ರಾಮಸ್ಥರು ತಿಳಿಸಿದ್ದರು. ಹೀಗಾಗಿ ಪತಿ ಬಸವರಾಜನನ್ನು ಪೊಲೀಸರು ವಿಚಾರಣೆ ನಿಮಿತ್ತ ಕರೆತಂದು ತಮ್ಮದೇ ಸ್ಟೈಲ್​ನಲ್ಲಿ ತನಿಖೆ ಆರಂಭಿಸಿದ್ದಾರೆ. ವಿಚಾರಣೆ ಆರಂಭವಾಗುತ್ತಿದ್ದಂತೆ ಸತ್ಯ ಹೊರ ಬಂದಿದೆ. ಸದ್ಯ ಪೊಲೀಸರು ಬಸವರಾಜನನ್ನು ಹಿಡಿದು ಜೈಲಿಗೆ ಕಳುಹಿಸಿದ್ದಾರೆ.