ಮನೆ ರಾಜಕೀಯ ಜನರ ತೀರ್ಪಿಗೆ ನಾನು ತಲೆಬಾಗುತ್ತೇನೆ, ಕಾರ್ಯಕರ್ತರ ಜತೆ ನಿಲ್ಲುತ್ತೇನೆ: ನಿಖಿಲ್ ಕುಮಾರಸ್ವಾಮಿ

ಜನರ ತೀರ್ಪಿಗೆ ನಾನು ತಲೆಬಾಗುತ್ತೇನೆ, ಕಾರ್ಯಕರ್ತರ ಜತೆ ನಿಲ್ಲುತ್ತೇನೆ: ನಿಖಿಲ್ ಕುಮಾರಸ್ವಾಮಿ

0

ಬಿಡದಿ/ರಾಮನಗರ: ಚನ್ನಪಟ್ಟಣದ ಜನತೆ ನೀಡಿದ ತೀರ್ಪಿಗೆ ನಾನು ತಲೆಬಾಗಿದ್ದೇನೆ. ಅವರ ಅದೇಶವನ್ನು ಒಪ್ಪಿಕೊಳ್ಳುತ್ತಿದ್ದೇನೆ. ಯಾವುದೇ ಕಾರಣಕ್ಕೂ ಕಾರ್ಯಕರ್ತರನ್ನು ಬಿಟ್ಟು ಪಲಾಯನ ಮಾಡುವ ವ್ಯಕ್ತಿ ನಾನಲ್ಲ, ಎದೆಗುಂದುವ ಪ್ರಶೆಯೂ ಇಲ್ಲ. ಸೋತಿದ್ದೇನೆ ಅಂತ ಸುಮ್ಮನೇ ಕೂರಲ್ಲ, ಹೋರಾಟ ಮಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

Join Our Whatsapp Group

ಚನ್ನಪಟ್ಟಣ ಚುನಾವಣೆ ಫಲಿತಾಂಶದ ಬಳಿಕ ಬಿಡದಿ ತೋಟದ ಮನೆಯಲ್ಲಿ ಮಾಧ್ಯಮಗಳ ಜತೆ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಜನರ ಆದೇಶವೇ ಅಂತಿಮ. ಅವರ ತೀರ್ಪಿಗೆ ತಲೆಬಾಗುತ್ತೇನೆ. ಇದು ನನಗೆ ಮೂರನೇ ಸೋಲು. ಈ ಸೋಲನ್ನು ವಿನಮ್ರವಾಗಿ ಸ್ವೀಕಾರ ಮಾಡುತ್ತೇನೆ. ಕ್ಷೇತ್ರದ ಜನತೆಯ ನಿರಂತರವಾಗಿ ಇರುತ್ತೇನೆ, ಅವರ ಸೇವೆ ಮಾಡುತ್ತೇನೆ. ನನ್ನ ಪರವಾಗಿ ಚುನಾವಣೆಯಲ್ಲಿ ಹಗಲು ರಾತ್ರಿ ಅವಿರತವಾಗಿ ಕೆಲಸ ಮಾಡಿದ ಜೆಡಿಎಸ್ ಬಿಜೆಪಿ ಪಕ್ಷಗಳ ಎಲ್ಲಾ ಕಾರ್ಯಕರ್ತರು, ಮುಖಂಡರು ಸೇರಿ ಎಲ್ಲರಿಗೂ ಶಿರಬಾಗಿ ನಮಿಸುತ್ತೇನೆ ಎಂದು ಅವರು ಹೇಳಿದರು.

ಇದು ನಾನು ಬಯಸದೇ ಬಂದ  ಉಪ ಚುನಾವಣೆ. ಕಡೆ ಗಳಿಗೆಯಲ್ಲಿ ತೆಗೆದುಕೊಂಡ ನಿರ್ಧಾರ. ಪಕ್ಷ ಕಷ್ಟಕಾಲದಲ್ಲಿ ಇದ್ದಾಗ ತಲೆಬಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದೇನೆ. 87,031 ಜನರು ನನ್ನ ಪರವಾಗಿ ಮತ ಹಾಕಿದ್ದಾರೆ. ಅವರ ನಿರೀಕ್ಷೆಯನ್ನು ಹುಸಿ ಮಾಡಲಾರೆ. ಚುನಾವಣೆ ಸಂದರ್ಭದಲ್ಲಿ ಜನತೆಗೆ ನಾನು ಕೆಲ ಮಾತು ಕೊಟ್ಟಿದ್ದೇನೆ. ಅವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.

ಚನ್ನಪಟ್ಟಣ ಫಲಿತಾಂಶ ಅಘಾತ ತಂದಿದೆ ನಿಜ. ಆದರೆ, ಕೇವಲ ಅತ್ಯಂತ ಕಡಿಮೆ ಅವಧಿಯಲ್ಲಿ ಒಬ್ಬ ಯುವಕನಿಗೆ 87,031 ಮತಗಳು ಬಂದಿವೆ. ಇದು ಸಣ್ಣ ಪ್ರಮಾಣದ ಮತವಲ್ಲ, ಜನರ ಋಣ ತೀರಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ. ಎಲ್ಲರಿಗೂ ದನಿಯಾಗಿ ಇರುತ್ತೇನೆ. ಇಲ್ಲಿ ನಾವು ಎಡವಿದ್ದೇವೆ. ಎಲ್ಲಿ ಸರಿಪಡಿಸಿಕೊಳ್ಳ ಬೇಕೆಂದು ಕೂತು ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತೇವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.

ಈ ಸೋಲಿನಿಂದ ನಾನು ಎದೆಗುಂದಲ್ಲ

ನಿಖಿಲ್ ಕುಮಾರಸ್ವಾಮಿಯಿಂದ ಪಕ್ಷ ಅಲ್ಲ, ಪಕ್ಷದಿಂದ ನಿಖಿಲ್ ಕುಮಾರಸ್ವಾಮಿ ಎಂದು ನಂಬಿರುವವನು ನಾನು. ಒಬ್ಬ ಸಾಮಾನ್ಯ  ಕಾರ್ಯಕರ್ತನ ಹಾಗೆ ಕೆಲಸ ಮಾಡುತ್ತೇನೆ. ಈ ಸೋಲಿನಿಂದ ನಾನು ಎದೆಗುಂದಲ್ಲ, ಯುವ ಸಮುದಾಯದ ದನಿಯಾಗಿ ಕೆಲಸ ಮಾಡುತ್ತೇನೆ ಎಂದರು.

ದೇವೆಗೌಡರು ಮತ್ತು ಕುಮಾರಸ್ವಾಮಿ ಅವರನ್ನು ರಾಜಕೀಯದಲ್ಲಿ ಎತ್ತರಕ್ಕೆ ಬೆಳೆಸಿದವರು ರಾಮನಗರ ಜಿಲ್ಲೆಯ ಜನತೆ. ನಾನು ಚುನಾವಣೆ ವೇಳೆ ಮಾತಾಡಿದ ಮಾತು ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗಿಲ್ಲ. ನಾನು ಕೊಟ್ಟಿರುವ ಯಾವುದೇ ಮಾತು ಹಿಂಪಡೆಯೋದಿಲ್ಲ. ಅದನ್ನು ಗಂಭೀರವಾಗಿ ಪರಿಗಣಿಸುತ್ತೇನೆ ಎಂದು ತಿಳಿಸಿದರು.

ನಾನು ಈ ಜಿಲ್ಲೆಯ ಮಗ ಅಂತ ಭಾವಿಸುತ್ತೇನೆ. ನನಗೆ ಕ್ಷೇತ್ರದ ಜನರ ಪ್ರೀತಿ ವಾತ್ಸಲ್ಯ ದಕ್ಕಿದೆ. ನಾವೇನು ಇಲ್ಲಿ ಜನಿಸಿಲ್ಲದಿರಬಹುದು, ನಮ್ಮದು ಅತ್ಯಂತ ಭಾವನಾತ್ಮಕ ಸಂಬಂಧ. ರಾಮನಗರದ ಜಿಲ್ಲೆ ಜನರ ಜತೆ ಪ್ರಾಮಾಣಿಕವಾಗಿ ಹೆಜ್ಜೆ ಹಾಕುತ್ತೇನೆ. ಕುಮಾರಣ್ಣನ ಜತೆಗೂಡಿ ಪ್ರಾಮಾಣಿಕವಾಗಿ ಕೆಲಸ ಮಾಡ್ತೇನೆ. ಮಂಡ್ಯ ಮತ್ತು ರಾಮನಗರ ಜನತೆ ಶಕ್ತಿ ತುಂಬಿಸಿ ಕುಮಾರಣ್ಣ ಅವರನ್ನು ಕೇಂದ್ರದ ಮಂತ್ರಿ ಮಾಡಿದ್ದಾರೆ ಜನರು. ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ನಿಖಿಲ್ ಅವರು  ತಿಳಿಸಿದರು.