ಮನೆ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎಲ್ಲೆಲ್ಲಿ ಶಕ್ತಿ ಇದೆಯೊ, ಅಲ್ಲೆಲ್ಲಾ ಗೆಲ್ಲಬೇಕು: ಬಿ.ಎಲ್.ಸಂತೋಷ್

ವಿಧಾನಸಭೆ ಚುನಾವಣೆಯಲ್ಲಿ ಎಲ್ಲೆಲ್ಲಿ ಶಕ್ತಿ ಇದೆಯೊ, ಅಲ್ಲೆಲ್ಲಾ ಗೆಲ್ಲಬೇಕು: ಬಿ.ಎಲ್.ಸಂತೋಷ್

0

ಶಿವಮೊಗ್ಗ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಶಿವಮೊಗ್ಗ ಮಾತ್ರವಲ್ಲ, ಎಲ್ಲೆಲ್ಲಿ ಶಕ್ತಿ ಇದೆಯೊ, ಅಲ್ಲೆಲ್ಲಾ ಗೆಲ್ಲಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.

Join Our Whatsapp Group

ನಗರದ ಪೇಸ್ ಪಿಯು ಕಾಲೇಜಿನಲ್ಲಿ ಬಿಜೆಪಿಯಿಂದ ಏಪ್ರಿಲ್ 30 ಆಯೋಜಿಸಿದ್ದ ವಿವಿಧ ಸಮಾಜಗಳ ಸಾಮರಸ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಬಾರಿಯ ವಿಧಾನಸಭೆ ಚುನಾವಣೆ ಫಲಿತಾಂಶದ ಕುರಿತು ಬಿಡುಗಡೆಯಾಗುತ್ತಿರುವ ಸರ್ವೆಗಳಿಂದ ನಮಗೆ ಆತಂಕವಿಲ್ಲ. ಗೆಲ್ಲುತ್ತೇವೆ ಎಂಬ ವಿಶ್ವಾಸವಿದ್ದರೂ ಪ್ರಚಾರ ಮಾಡುತ್ತಿದ್ದೇವೆ ಎಂದರು.

ಹಕ್ಕಿಪಿಕ್ಕಿ ಸಮುದಾಯದವರನ್ನು ಕರೆ ತರುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಕೇಂದ್ರ ಸರಕಾರ ‘ಆಪರೇಷನ್ ಕಾವೇರಿ’ ಮೂಲಕ ಹಕ್ಕಿಪಿಕ್ಕಿ ಸಮುದಾಯದ ಎಲ್ಲರನ್ನು ಸುರಕ್ಷಿತವಾಗಿ ವಾಪಸ್ ಕರೆ ತಂದಿದೆ. ಆದರೆ, ಸಿದ್ದರಾಮಯ್ಯ ಈ ಬಗ್ಗೆ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಲಿಲ್ಲಎಂದರು.

ದೇಶದ ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡುತ್ತಲೆ ಬಂದಿದ್ದೇವೆ. ಎಸ್ಸಿ ಸಮಾಜಕ್ಕೆ ಶೇ.2, ಎಸ್ಟಿಗೆ ಶೇ.4 ಮೀಸಲು ಹೆಚ್ಚಿಸಿದ್ದೇವೆ. ಒಟ್ಟು ಶೇ. 6 ಮೀಸಲು ಹೆಚ್ಚು ಮಾಡಿ, ದಕ್ಕಿಸಿಕೊಂಡಿದ್ದೇವೆ. ಒಳ ಮೀಸಲು ವಿಷಯದಲ್ಲಿ ನಮ್ಮ ವಿರುದ್ಧದ ಅಪಪ್ರಚಾರಗಳನ್ನು ಎದುರಿಸುತ್ತೇವೆ. ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ನೀಡುತ್ತಿದ್ದ ಮೀಸಲನ್ನು ಧೈರ್ಯದಿಂದ ತೆಗೆದು, ಲಿಂಗಾಯತ ಸಮಾಜಕ್ಕೆ ನೀಡಿದ್ದೇವೆ ಎಂದರು.

ಕೆಂಪೇಗೌಡ, ಟಿಪ್ಪು ದೇವನಹಳ್ಳಿಯಲ್ಲಿಯೇ ಹುಟ್ಟಿದ್ದರೂ ಕಾಂಗ್ರೆಸ್ನವರು ಕೆಂಪೇಗೌಡ ಜಯಂತಿ ಮಾಡದೆ ಟಿಪ್ಪು ಜಯಂತಿ ಮಾಡಿದರು. ಕೆಂಪೇಗೌಡರ ಜಯಂತಿ ಮಾಡಲು ಬಿಜೆಪಿ ಸರಕಾರ ಬರಬೇಕಾಯಿತು. ಕೇವಲ ತುಷ್ಟೀಕರಣಕ್ಕೆ, ಮತ ಬ್ಯಾಂಕ್ಗಾಗಿ ಕಾಂಗ್ರೆಸ್ ಈ ರೀತಿ ಮಾಡಿತು. ಆದರೆ ನಾವು ಎಲ್ಲ ಸಮಾಜಗಳನ್ನು ಸೇರಿಸಿಕೊಂಡು ಸುಂದರ ಸಮಾಜ ನಿರ್ಮಿಸಲು ಕೆಲಸ ಮಾಡುತ್ತೇವೆ ಎಂದರು.

ನಮ್ಮ ಪ್ರೋಗ್ರೆಸ್ ರಿಪೋರ್ಟ್ ನಿಮ್ಮ ಮುಂದೆ ಇಡುತ್ತಿದ್ದೇವೆ. ಇದಕ್ಕಾಗಿ ನಾವು ಯಾರಿಗೂ ಗ್ಯಾರಂಟಿ ಕಾರ್ಡ್ ಕೊಡುವ ಅವಶ್ಯಕತೆ ಇಲ್ಲ. ಜೆಡಿಎಸ್ನವರು ಅತಂತ್ರ ಸರಕಾರ ಬರಲಿ ಎಂದು ಬೇಡಿಕೊಳ್ಳಬಹುದು. ಅತಂತ್ರವಾದರೆ ನಮ್ಮ ಬೇಳೆ ಬೇಯುತ್ತದೆ ಎಂಬುದು ಅವರ ಭಾವನೆ ಎಂದರು.

ಉಂಡ ಮನೆಗೆ ದ್ರೋಹ ಬಗೆದವರು ಜೆಡಿಎಸ್ ಸೇರಿದ್ದಾರೆ. ಅವರೇ ಈ ಬಾರಿ ಅಭ್ಯರ್ಥಿಗಳಾಗಿದ್ದಾರೆ. ಸಮಾವೇಶದಲ್ಲಿ ನನ್ನ ಬದಲಾಗಿ ನಿಮಗೆ ಮಾರ್ಗದರ್ಶನ ಮಾಡಬೇಕಾದವರು ಜೆಡಿಎಸ್ ಸೇರಿದ್ದಾರೆ. ಬಿಜೆಪಿ ಬಿಟ್ಟು ಹೋದವರಲ್ಲಿ ಶಾಸಕ, ವಿಧಾನ ಪರಿಷತ್ ಸದಸ್ಯ, ರಾಜ್ಯಸಭೆ, ಲೋಕಸಭೆ ಸದಸ್ಯರಾದವರು ಇದ್ದಾರೆ. ಇವರಿಗೆ ಅಧಿಕಾರದ ದುರಾಸೆ. ಇವರನ್ನು ರಾಜಕೀಯವಾಗಿ ಉಳಿಸಬೇಕೆ ಎಂಬುದನ್ನು ತೀರ್ಮಾನಿಸುವ ಆಯ್ಕೆ ನಿಮ್ಮದು. ಇಂತಹವರಿಗೆ ಹೋಗುವ ಒಂದೊಂದು ಮತ ದೇಶದ ರಾಜಕೀಯವನ್ನು ಭ್ರಷ್ಟ ಮಾಡುತ್ತದೆ. ಇಂತಹ ಪಕ್ಷಗಳಿಗೆ ಮತ ನೀಡಿದರೆ ದ್ರೋಹ ಬಗೆದಂತೆ ಎಂದರು.

ಬಿಜೆಪಿಯಲ್ಲಿ ಅವಿಶ್ವಾಸ ನಿರ್ಮಾಣ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಅವಿಶ್ವಾಸ ಇರುವವರು ಪಕ್ಷ ಬಿಟ್ಟು ಹೋಗಿದ್ದಾರೆ. ಶಿವಮೊಗ್ಗ ನಗರದಲ್ಲಿ ದಾಖಲೆ ಮಟ್ಟದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಬೇಕು. ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಸರಕಾರಕ್ಕೆ ಜನ ಪೂರ್ಣ ಬಹುಮತ ನೀಡಲಿಲ್ಲ. ಆದರೆ, ನೀಡಿದ ಮತಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದೇವೆ. ಈ ಬಾರಿ ನಮ್ಮದು ಬರಿ ಗೆಲುವಲ್ಲ, ಸಂಪೂರ್ಣ ಬಹುಮತ ನಮ್ಮ ಗುರಿ. ಇದರ ಕಡೆಗೆ ಸಾಗಲು ಎಲ್ಲರೂ ಹೆಜ್ಜೆ ಹಾಕೋಣ ಎಂದರು.

ಸಮಾವೇಶದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಭಾರತಿ ಶೆಟ್ಟಿ, ಬಿಜೆಪಿ ನಗರ ಕ್ಷೇತ್ರದ ಅಭ್ಯರ್ಥಿ ಎಸ್.ಎನ್.ಚನ್ನಬಸಪ್ಪ, ಭಾನುಪ್ರಕಾಶ್ ಮತ್ತಿತರರಿದ್ದರು.