ಮನೆ ರಾಜಕೀಯ ಮನೆ ಮಗನನ್ನು ಗೆಲ್ಲಿಸಿ: ಸಿದ್ದರಾಮಯ್ಯ ಮನವಿ

ಮನೆ ಮಗನನ್ನು ಗೆಲ್ಲಿಸಿ: ಸಿದ್ದರಾಮಯ್ಯ ಮನವಿ

0

ಮೈಸೂರು: ಜಾತಿ ಮಾಡುವ ಬಿಜೆಪಿಯವರ ಮಾತುಗಳನ್ನು ಕೇಳಬೇಡಿ. ಮನೆಯ ಮಗನನ್ನು ಗೆಲ್ಲಿಸಿ ಎಂದು ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಜನರಲ್ಲಿ ಮನವಿ ಮಾಡಿದರು.

Join Our Whatsapp Group

ವರುಣ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ನಂಜನಗೂಡು ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಗುರುವಾರ ರೋಡ್ ಶೋ ಮೂಲಕ ಪ್ರಚಾರ ನಡೆಸಿ ಅವರು ಮಾತನಾಡಿದರು.

ಈ ಸಿದ್ದರಾಮಯ್ಯನನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿ ಮಾಡಿದವರು ನೀವು. ಈ ಬಾರಿಯೂ ಅವಕಾಶವಿದೆ. ದಯಮಾಡಿ ಎಲ್ಲ ಸಮಾಜದವರೂ ಒಟ್ಟಾಗಿ ನನ್ನನ್ನು ಬೆಂಬಲಿಸಿ ಎಂದು ಹೇಳಿದರು.

ಲಿಂಗಾಯತ ಸಮಾಜದವರು ಕ್ಷಮಿಸಬೇಕು. ಸಮಯದ ಅಭಾವ ಇರುವುದರಿಂದ ಎಲ್ಲ ಬೀದಿ, ದೇವಸ್ಥಾನಗಳಿಗೆ ಹೋಗಲಾಗುವುದಿಲ್ಲ. ಎರಡು ದಿನಗಳಷ್ಟೇ ನನಗೆ ಸಮಯ ಇದೆ. ಎಲ್ಲ ಕಡೆಗೂ ನಾನು ಪ್ರಚಾರಕ್ಕೆ ಹೋಗಬೇಕಾಗಿದೆ ಎಂದು ಹೇಳಿ ಕ್ಷಮೆ ಯಾಚಿಸಿದರು.

ಬಾದಾಮಿ ಬೇಡ ಎಂದಾಗ ಹೈಕಮಾಂಡ್ ನನಗೆ ವರುಣದಲ್ಲಿ ಸ್ಪರ್ಧಿಸಲು ಹೇಳಿದೆ.  ನೀವೆಲ್ಲರೂ ಆಶೀರ್ವಾದ ಮಾಡಿದರೆ ನನಗೆ ರಾಜಕೀಯವಾಗಿ ದೊಡ್ಡ ಶಕ್ತಿಯನ್ನು ಕೊಟ್ಟಂತೆ ಆಗುತ್ತದೆ ಎಂದರು.

ರಾಂಪುರ ಗ್ರಾಮವೂ ಸೇರಿದಂತೆ ಕ್ಷೇತ್ರದಲ್ಲಿ ಉಳಿದಿರುವ ಎಲ್ಲ ಕೆಲಸಗಳನ್ನು ಮಾಡಿಕೊಡುತ್ತೇನೆ. ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ಬೇರೆಯವರು ಬಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡಲಾಗುವುದಿಲ್ಲ. ಅಭಿವೃದ್ಧಿ ಹಾಗೂ ಜನರ ಹಿತ ಕಾಯುವ ದೃಷ್ಟಿಯಿಂದ ಕಾಂಗ್ರೆಸ್ ಬೆಂಬಲಿಸಬೇಕು. ಒಂದು ಲಕ್ಷ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಬೆಂಗಳೂರಿನಿಂದ ಬಂದು ಇಲ್ಲಿ ಸ್ಪರ್ಧಿಸಿರುವವರಿಗೆ (ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ) ರಾಂಪುರ, ಹದಿನಾರು, ತಾಂಡವಪುರ, ದೂರ ಎಲ್ಲಿದೆ ಎಂಬುದೇನೂ ಗೊತ್ತಿಲ್ಲ. ನೀವು ನಮ್ಮ ಜನ, ನಾನು ನಿಮ್ಮವನು. ನೀವು ನನ್ನನ್ನು ಗೆಲ್ಲಿಸಿ ರಕ್ಷಣೆ ಕೊಡಬೇಕು ಎಂದರು.

ಚಲನಚಿತ್ರ ನಟಿ ನಿಶ್ವಿಕಾ ನಾಯ್ಡು ಇದ್ದರು.