ಮನೆ ಮನರಂಜನೆ ‘ಡೇರ್​​ ಡೆವಿಲ್​ ಮುಸ್ತಫಾ’ ಚಿತ್ರಕ್ಕೆ ತೆರಿಗೆ ವಿನಾಯಿತಿ: ಸಿಎಂ ಸಿದ್ದರಾಮಯ್ಯ ಆದೇಶ

‘ಡೇರ್​​ ಡೆವಿಲ್​ ಮುಸ್ತಫಾ’ ಚಿತ್ರಕ್ಕೆ ತೆರಿಗೆ ವಿನಾಯಿತಿ: ಸಿಎಂ ಸಿದ್ದರಾಮಯ್ಯ ಆದೇಶ

0

ಸಾಹಿತ್ಯ ಆಸಕ್ತರು ಹಾಗೂ ಸಿನಿಪ್ರಿಯರ ಗಮನ ಸೆಳೆದ ‘ಡೇರ್​​ಡೆವಿಲ್​ ಮುಸ್ತಫಾ’ ಸಿನಿಮಾಗೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದಾರೆ.

Join Our Whatsapp Group

ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕಥೆಯನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಚಿತ್ರ ನೋಡಿದ ಅನೇಕರು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಇತ್ತೀಚೆಗೆ 25 ದಿನಗಳನ್ನು ಪೂರೈಸಿದ ‘ಡೇರ್​​ಡೆವಿಲ್​ ಮುಸ್ತಫಾ’ ಚಿತ್ರ ಈಗ 50ನೇ ದಿನದತ್ತ ಮುನ್ನುಗ್ಗುತ್ತಿದೆ.

ಈ ಸಂದರ್ಭದಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಸಿಗುತ್ತಿರುವುದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ಶಶಾಂಕ್​ ಸೋಗಾಲ್​ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಶಿಶಿರ್​ ಬೈಕಾಡಿ, ಆದಿತ್ಯ ಆಶ್ರೀ, ಸುಪ್ರೀತ್​ ಭಾರದ್ವಾಜ್​, ಆಶಿತ್​ ಶ್ರೀವತ್ಸಾ, ಅಭಯ್​, ಮಂಡ್ಯ ರಮೇಶ್​, ಉಮೇಶ್​, ಪ್ರೇರಣಾ ಮುಂತಾದ ಕಲಾವಿದರು ‘ಡೇರ್​ ಡೆವಿಲ್​ ಮುಸ್ತಫಾ’ ಸಿನಿಮಾದಲ್ಲಿ ನಟಿಸಿದ್ದಾರೆ.

ಧರ್ಮ ಸಹಿಷ್ಣುತೆ, ಸಹಬಾಳ್ವೆ, ಸಮಭಾವದ ಪಾಠ ಹೇಳುವ ‘ಡೇರ್​​ಡೆವಿಲ್​ ಮುಸ್ತಫಾ’ ಸಿನಿಮಾವನ್ನು ಇನ್ನೂ ಹೆಚ್ಚಿನ ಮಂದಿಗೆ ತೋರಿಸುವ ಇಚ್ಛೆಯಿಂದ ತೆರಿಗೆ ವಿನಾಯಿತಿ ನೀಡಬೇಕೆಂದು ಸಿನಿಮಾದ ನಿರ್ದೇಶಕ ಶಶಾಂಕ್​ ಸೋಗಾಲ್​ ಹಾಗೂ ಸಿನಿಮಾವನ್ನು ವೀಕ್ಷಿಸಿ ಮೆಚ್ಚಿದ ಕೆಲ ಹಿರಿಯರು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಚಿಂತಕ ನಟರಾಜ್ ಹುಳಿಯಾರ್ ಹಾಗೂ ‘ಡೇರ್​ ಡೆವಿಲ್ ಮುಸ್ತಾಫಾ’ ಸಿನಿಮಾಗೆ ಚಿತ್ರಕತೆ ಬರೆದಿರುವ ಚಿಂತನ್ ಮುಂತಾದವರು ನಿರ್ದೇಶಕರ ಜೊತೆ ಸಿಎಂ ನಿವಾಸದ ಬಳಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೋಮು ಸಾಮರಸ್ಯ ಸಾರುವ ತಮ್ಮ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಕೋರಿಕೊಂಡಿದ್ದರೆ. ಈ ಮನವಿಗೆ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ.

‘ತೇಜಸ್ವಿಯವರ ಓದುಗರು, ಅಭಿಮಾನಿಗಳು, ತೇಜಸ್ವಿಯವರ ಕುಟುಂಬ ವರ್ಗ ಈ ಸಿನಿಮಾವನ್ನು ನೋಡಿ ಪ್ರಶಂಸಿಸುತ್ತಿದ್ದಾರೆ. ಕರ್ನಾಟಕ ರಾಜ್ಯವು ಸರ್ವಜನಾಂಗದ ಶಾಂತಿಯ ತೋಟವಾಗಲು ಇಂತಹ ಸಿನಿಮಾಗಳು ಜನರಿಗೆ ಹೆಚ್ಚುಹೆಚ್ಚು ತಲುಪಬೇಕು ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ತಾವು ಸಾಧ್ಯವಾದಲ್ಲಿ ಬಿಡುವು ಮಾಡಿಕೊಂಡು ಈ ಸಿನಿಮಾ ನೋಡಬೇಕೆಂದು ವಿನಂತಿಸಿಕೊಳ್ಳುತೇವೆ. ಇನ್ನಷ್ಟು ಜನರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಸಿನಿಮಾ ನೋಡಲು ಅನುಕೂಲವಾಗುವಂತೆ ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಬೇಕೆಂದು ಮನವಿ ಮಾಡುತ್ತೇವೆ’ ಎಂದು ಪತ್ರದಲ್ಲಿ ಬರೆಯಲಾಗಿತ್ತು.