ಮನೆ ರಾಜ್ಯ ದಾಖಲೆಗಳ ನೋಂದಣಿಗೆ ಕಾವೇರಿ-2 ಜಾರಿ: ಕೃಷ್ಣ ಭೈರೇಗೌಡ

ದಾಖಲೆಗಳ ನೋಂದಣಿಗೆ ಕಾವೇರಿ-2 ಜಾರಿ: ಕೃಷ್ಣ ಭೈರೇಗೌಡ

0

ಬೆಂಗಳೂರು: ನೋಂದಣಿ ಇಲಾಖೆಯಲ್ಲಿ ಕೆಲವು ಬದಲಾವಣೆ ತರಲಾಗಿದೆ. ಏಪ್ರಿಲ್ ​ನಿಂದ ನೋಂದಣಿ ಪ್ರಕ್ರಿಯೆಯಲ್ಲಿ ಕಾವೇರಿ-2 ಅಳವಡಿಸಲಾಗಿದ್ದು, 251 ನೋಂದಣಿ ಕಚೇರಿಗಳಲ್ಲಿ ಇಂದು ಸಂಜೆಯೊಳಗೆ ಕಾವೇರಿ-2 ಜಾರಿಯಾಗಲಿದೆ ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

Join Our Whatsapp Group

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲಾ ದಾಖಲೆಗಳನ್ನು ಕಾವೇರಿ-2ನಲ್ಲೇ ಸಲ್ಲಿಕೆ ಮಾಡಬಹುದು. ಸಬ್ ರಿಜಿಸ್ಟ್ರಾರ್ ಕೂಡ ಆನ್ ​​ಲೈನ್ ​​ನಲ್ಲೇ ದಾಖಲೆ ಪರಿಶೀಲಿಸ್ತಾರೆ. ನೋಂದಣಿ ಶುಲ್ಕವನ್ನೂ ಆನ್​​ ಲೈನ್​​ ನಲ್ಲೇ ಸಲ್ಲಿಕೆ ಮಾಡಬಹುದು. ಇದರಿಂದ ರಾಜ್ಯ ಸರ್ಕಾರಕ್ಕೂ ಕೂಡ ರಿಜಿಸ್ಟ್ರೇಷನ್ ಬಗ್ಗೆ ಮಾಹಿತಿ ಸಿಗಲಿದೆ. ಅಲ್ಲದೇ ಜಮೀನು ಅಕ್ರಮಗಳನ್ನು ಕೂಡ ತಡೆಯಬಹುದು ಎಂದು ಹೇಳಿದರು.

ಯಾರದ್ದೋ ಜಮೀನನ್ನು ಇನ್ನಾರಿಗೋ ನೋಂದಣಿ ಮಾಡಲು ಆಗಲ್ಲ. ಆಡಳಿತ ಸುಧಾರಣೆ ಆಗಬೇಕು, ಜನರಿಗೆ ಸರ್ಕಾರದ ಜೊತೆಗೆ ಸಂಪರ್ಕ ಇದ್ದಾಗ ವಿಳಂಬ ಇಲ್ಲದೆ ಕೆಲಸ ಆಗಬೇಕು ಎಂಬುದು ಸರ್ಕಾರದ ಆಧ್ಯತೆ. ಜನರು ಹಾಗೂ ಸರ್ಕಾರದ ನಡುವೆ ರಿಜಿಸ್ಟ್ರೇಷನ್ ಅತ್ಯಂತ ಪ್ರಮುಖ ಭಾಗ. ನೊಂದಣಿ ಇಲಾಖೆಯಲ್ಲಿ ಬಹಳ ಅಸ್ತವ್ಯಸ್ತತೆ ಇದೆ. ರಿಜಿಸ್ಟ್ರೇಷನ್ ಸಂದರ್ಭದಲ್ಲಿ ಬಹಳಷ್ಟು ವಿಳಂಬ ಆಗುತ್ತಿದೆ. ಜನರು ಅವರ ಆಸ್ತಿ ಅವರು ಮಾರಾಟ ಮಾಡುವುದಕ್ಕೆ ಪಡಬಾರದ ಯಾತನೆ ಅನುಭವಿಸಿದ್ದಾರೆ. ಬಹಳ ವರ್ಷಗಳ ಸುಧಾರಣೆಯಿಂದ ಇದನ್ನು ಬಗೆಹರಿಸಲು ಕಾವೇರಿ-2 ಎಂಬ ಪದ್ದತಿ ತರಲಾಗಿದೆ. ಕಾವೇರಿ-೨ ವ್ಯವಸ್ಥೆ ಬಗ್ಗೆ ಅನುಕೂಲ-ಅನಾನುಕೂಲ ಎರಡೂ ಆಗುತ್ತಿದೆ ಎಂಬ ಮಾಹಿತಿ ಇದೆ ಎಂದರು.

ದೊಡ್ಡಬಳ್ಳಾಪುರದಲ್ಲಿ ಕಾವೇರಿ-1 ಇರುವಾಗ ಸರಾಸರಿ 65 ನೋಂದಣಿ ಆಗುತ್ತಿತ್ತು. ಕಾವೇರಿ-2 ಬಂದ ಮೇಲೆ ಸರಾಸರಿ 65 ನೋಂದಣಿ ಆಗಿದೆ. ಒಂದು ದಿನ 132 ಡಾಕ್ಯುಮೆಂಟ್ ಕೂಡ ರಿಜಿಸ್ಟ್ರೇಷನ್ ಆಗಿವೆ. ಸಿಸ್ಟಮ್​ನಲ್ಲಿ ಕೆಪ್ಯಾಸಿಟಿ ಇದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಎಂದು ತಿಳಿಸಿದರು.

ನೋಂದಣಿ ಪ್ರಕ್ರಿಯೆಯಿಂದ 2022 ಮೇ 1024 ಕೋಟಿ ರೂ. ಆದಾಯ ಬಂದಿತ್ತು. 2023 ರ ಮೇ ನಲ್ಲಿ 1357 ಕೋಟಿ ರೂ. ಆದಾಯ ಬಂದಿದೆ. ಕಳೆದ ಜೂನ್ ತಿಂಗಳಲ್ಲಿ 721 ಕೋಟಿ ರೂ. ಆದಾಯ ಬಂದಿತ್ತು. ಈ ಜೂನ್ ತಿಂಗಳಲ್ಲಿ 840 ಕೋಟಿ ರೂ. ಆದಾಯ ಬಂದಿದೆ ಎಂದು ತಿಳಿಸಿದ್ದಾರೆ.

ಗೈಡೆನ್ಸ್ ವ್ಯಾಲ್ಯೂ 2018 ರಿಂದ ಇದುವರೆಗೆ ರಿವೈಸ್ ಆಗಿಲ್ಲ. ಇದರಿಂದ ರೈತರಿಗೂ ಮಾರಾಟಗಾರರಿಗೂ ಅನ್ಯಾಯ ಆಗುತ್ತಿದೆ. ಗೈಡೆನ್ಸ್ ವ್ಯಾಲ್ಯೂ ರಿವಿಷನ್ ಬಗ್ಗೆ ಸದ್ಯದಲ್ಲೇ ತೀರ್ಮಾನ ತೆಗೆದುಕೊಳ್ತೇವೆ. ಮಾರ್ಕೆಟ್ ವ್ಯಾಲ್ಯೂಗೆ ತಕ್ಕಂತೆ ಗೈಡೆನ್ಸ್ ವ್ಯಾಲ್ಯೂ ಬದಲಾವಣೆ ಮಾಡುತ್ತೇವೆ. ಒಂದೇ ಸಲ ಹೆಚ್ಚಳ ಮಾಡಲು ಸಾಧ್ಯವಿಲ್ಲ. ನಾವಿನ್ನೂ ಕೂಡ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.