ಬೆಂಗಳೂರು: ರಾಜಧಾನಿಯಲ್ಲಿನ ಸಂಚಾರ ದಟ್ಟಣೆ ನಿವಾರಣೆಯ ಗುರಿಯೊಂದಿಗೆ ಕೈಗೆತ್ತಿಕೊಂಡಿರುವ ಉಪನಗರ ರೈಲು ಯೋಜನೆಯನ್ನು ಸುತ್ತಮುತ್ತಲಿನ ಮೈಸೂರು, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಮಾಗಡಿ, ಗೌರಿಬಿದನೂರು, ಬಂಗಾರಪೇಟೆಗೆ ವಿಸ್ತರಿಸಲು ಅನುಕೂಲವಾಗುವಂತೆ ಕಾರ್ಯಸಾಧ್ಯತಾ ವರದಿ ಕೈಗೆತ್ತಿಕೊಳ್ಳಲು ರೈಲ್ವೆ ಸಚಿವಾಲಯವು ಅನುಮತಿ ನೀಡಬೇಕೆಂದು ಕೋರಿ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆಯಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಉಪನಗರ ರೈಲು ಯೋಜನೆಯ ಪ್ರಗತಿ ಕುರಿತು ಸೋಮವಾರ ಇಲ್ಲಿ ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತದ (ಕೆ-ರೈಡ್) ಉನ್ನತ ಅಧಿಕಾರಿಗಳೊಂದಿಗೆ ಅವರು ಸೋಮವಾರ ಪರಿಶೀಲನಾ ಸಭೆ ನಡೆಸಿದರು.
ಈ ಬಗ್ಗೆ ಮಾತನಾಡಿದ ಅವರು, “ಹಂತ-1ರಲ್ಲಿ ಉಪನಗರ ರೈಲು ಯೋಜನೆ ಕಾಮಗಾರಿ (148.17 ಕಿ.ಮೀ.) ನಡೆಯುತ್ತಿದೆ. ಇದನ್ನು ಸುತ್ತಲಿನ ಹಲವು ನಗರಗಳಿಗೆ ವಿಸ್ತರಿಸುವ ಅಗತ್ಯವಿದೆ. ಈ ಸಂಬಂಧ ಜೂನ್ 6ರಂದು ಸಭೆ ನಡೆಸಲಾಗಿತ್ತು. ಕೆ-ರೈಡ್ ಈ ಪ್ರಸ್ತಾವನೆಗೆ ಅಂದು ತಾತ್ತ್ವಿಕ ಒಪ್ಪಿಗೆ ನೀಡಿತ್ತು. ಮುಂದಿನ ಹೆಜ್ಜೆಯಾಗಿ ಈಗ ನೈರುತ್ಯ ರೈಲ್ವೆಗೆ ಪತ್ರ ಬರೆಯಲಾಗಿದೆ” ಎಂದರು.
ಉಪನಗರ ರೈಲು ಯೋಜನೆಯ ಹಂತ-1ರ ಕಾಮಗಾರಿಗಳು ಅಬಾಧಿತವಾಗಿ ಮುಂದುವರಿದುಕೊಂಡು ಹೋಗಲಿವೆ. ಆದರೆ, ಹಂತ-2ನ್ನು 452 ಕಿ.ಮೀ.ಗಳಿಗೆ ವಿಸ್ತರಿಸಲು ಯೋಚಿಸಿದ್ದು, ಇದಕ್ಕೆ ಈಗಿನಿಂದಲೇ ಅಗತ್ಯ ಉಪಕ್ರಮಗಳನ್ನು ಕೈಗೊಳ್ಳುವ ಜರೂರಿದೆ. ನಿಯಮಗಳ ಪ್ರಕಾರ ರಾಜ್ಯ ಸರಕಾರದ ಸಂಸ್ಥೆಯು ಕಾರ್ಯಸಾಧ್ಯತಾ ವರದಿ ತಯಾರಿಸಲು ಸಾಧ್ಯವಿಲ್ಲ. ಇದನ್ನು ರೈಲ್ವೆ ಮಂಡಲಿಯೇ ಮಾಡಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಅವರು, ಉಪನಗರ ರೈಲು ಯೋಜನೆಯ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಇರುವ ಸಣ್ಣಪುಟ್ಟ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಬೇಕು. ರೈಲು ವ್ಯವಸ್ಥೆಗೆ ಬೇಕಾದ ಬೋಗಿಗಳ ತಯಾರಿಕೆಗೆ ಬಿಡ್ ಅಂತಿಮಗೊಳಿಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಯೋಜನೆಯ ಕಾಮಗಾರಿಯನ್ನೂ ಖುದ್ದಾಗಿ ಪರಿಶೀಲಿಸಲಾಗುವುದು ಎಂದು ವಿವರಿಸಿದರು.
ಈ ಯೋಜನೆಗೆ 177.22 ಎಕರೆ ಭೂಮಿ ಅಗತ್ಯವಿತ್ತು. ಈ ಪೈಕಿ ಈಗಾಗಲೇ 164 ಎಕರೆಯ ಸ್ವಾಧೀನ ಮುಗಿದಿದೆ. ಆದರೆ ಉಳಿದ 12.39 ಎಕರೆ ಭೂಮಿ ರಕ್ಷಣಾ ಇಲಾಖೆ ಮತ್ತು ಸರಕಾರದ್ದಾಗಿದ್ದು, ಸ್ವಲ್ಪ ಕಗ್ಗಂಟಾಗಿದೆ. ಕೆ-ರೈಡ್ ಅಧಿಕಾರಿಗಳು ಸಂಬಂಧಿಸಿದವರ ಜತೆ ಮಾತುಕತೆ ನಡೆಸಿ, ಇದನ್ನು ಬೇಗನೆ ಬಗೆಹರಿಸಬೇಕು. ಯೋಜನೆಯ ಭಾಗವಾಗಿ ಸೋಲದೇವನಹಳ್ಳಿ ಮತ್ತು ದೇವನಹಳ್ಳಿಯಲ್ಲಿ ಎರಡು ಡಿಪೋ ನಿರ್ಮಿಸಲಾಗುವುದು ಎಂದು ಸಚಿವರು ನುಡಿದರು.
ಸಭೆಯಲ್ಲಿ ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತ, ಕೆ- ರೈಡ್ ಯೋಜನಾ ನಿರ್ದೇಶಕ ರಾಜೇಂದ್ರಕುಮಾರ್ ಸಿಂಗ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಉಪನಗರ ರೈಲು ವಿಸ್ತರಣೆಯ ರೂಪುರೇಷೆ
ಸದ್ಯಕ್ಕೆ ಪ್ರಗತಿಯಲ್ಲಿರುವ 148 ಕಿ.ಮೀ. ವ್ಯಾಪ್ತಿಯ ಉಪನಗರ ರೈಲು ಯೋಜನೆಯಲ್ಲಿ ಒಟ್ಟು ನಾಲ್ಕು ಕಾರಿಡಾರ್ಗಳಿವೆ. ಇದು ಕ್ರಮವಾಗಿ ಬೆಂಗಳೂರು ನಗರ ರೈಲು ನಿಲ್ದಾಣದಿಂದ ದೇವನಹಳ್ಳಿ (41.4 ಕಿ.ಮೀ), ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ (25.01 ಕಿ.ಮೀ), ಕೆಂಗೇರಿಯಿಂದ ವೈಟ್ಫೀಲ್ಡ್ (35.32 ಕಿ.ಮೀ) ಮತ್ತು ಹೀಳಲಿಗೆಯಿಂದ ರಾಜಾನುಕುಂಟೆವರೆಗೆ (46.25 ಕಿ.ಮೀ) ಉದ್ದವಿದೆ.
ಇದನ್ನು ಎರಡನೇ ಹಂತದಲ್ಲಿ ದೇವನಹಳ್ಳಿಯಿಂದ ಕೋಲಾರ (107 ಕಿ.ಮೀ), ಚಿಕ್ಕಬಾಣಾವರದಿಂದ ಡಾಬಸ್ಪೇಟೆ ಮೂಲಕ ತುಮಕೂರು (55 ಕಿ.ಮೀ), ಚಿಕ್ಕಬಾಣಾವರದಿಂದ ಮಾಗಡಿ (45 ಕಿ.ಮೀ), ಕೆಂಗೇರಿಯಿಂದ ಮೈಸೂರು (125 ಕಿ.ಮೀ), ವೈಟ್ಫೀಲ್ಡ್ನಿಂದ ಬಂಗಾರಪೇಟೆ (45 ಕಿ.ಮೀ), ಹೀಳಲಿಗೆಯಿಂದ ತಮಿಳುನಾಡಿನ ಹೊಸೂರು (23 ಕಿ.ಮೀ) ಮತ್ತು ರಾಜಾನುಕುಂಟೆಯಿಂದ ದೊಡ್ಡಬಳ್ಳಾಪುರದ ಮಾರ್ಗವಾಗಿ ಗೌರಿಬಿದನೂರಿನವರೆಗೆ (52 ಕಿ.ಮೀ) ವಿಸ್ತರಿಸಬೇಕೆಂಬುದು ಸಚಿವ ಎಂ ಬಿ ಪಾಟೀಲ ಅವರ ಚಿಂತನೆಯಾಗಿದೆ.
ಇದರಿಂದಾಗಿ ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಂದು, ಇಲ್ಲಿರುವ ಉದ್ದಿಮೆಗಳಿಗೆ ಸುತ್ತಮುತ್ತಲ ನಗರ/ಪಟ್ಟಣಗಳಿಂದ ಉದ್ಯೋಗಿಗಳು ಸುಗಮವಾಗಿ ಬಂದು ಹೋಗಬಹುದು ಎನ್ನುವುದು ಅವರ ಆಶಯವಾಗಿದೆ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.