ಮನೆ ರಾಜಕೀಯ ಸಂತೋಷ್ ಪಾಟೀಲ್ ಆತ್ಮಹತ್ಯೆ: ಬೆಂಗಳೂರಿನ ದೌಡಾಯಿಸಿದ ಕೆ.ಎಸ್.ಈಶ್ವರಪ್ಪ

ಸಂತೋಷ್ ಪಾಟೀಲ್ ಆತ್ಮಹತ್ಯೆ: ಬೆಂಗಳೂರಿನ ದೌಡಾಯಿಸಿದ ಕೆ.ಎಸ್.ಈಶ್ವರಪ್ಪ

0

ಮೈಸೂರು: ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಂತೋಷ್ ಗೆ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ  ಕೆ.ಎಸ್‌. ಈಶ್ವರಪ್ಪ ಬುಧವಾರ ಬೆಳಿಗ್ಗೆಯೇ ಮೈಸೂರಿನಿಂದ ಬೆಂಗಳೂರಿನತ್ತ ದೌಡಾಯಿಸುತ್ತಿದ್ದಾರೆ.

ಬಿಜೆಪಿಯ ವಿಭಾಗೀಯ ಮಟ್ಟದ ಸಭೆ ನಡೆಯುತ್ತಿರುವ ಲಲಿತ್‌ ಮಹಲ್‌ ಪ್ಯಾಲೇಸ್‌ನಲ್ಲಿ ಈಶ್ವರಪ್ಪ ಇದ್ದರು. ಮಂಗಳವಾರದಿಂದ ಬಿಜೆಪಿಯ ಹಲವು ನಾಯಕರು ಅಲ್ಲಿ ವಾಸ್ತವ್ಯ ಹೂಡಿದ್ದರು. ಬುಧವಾರ ಬೆಳಿಗ್ಗೆ ಉಪಾಹಾರ ಸೇವನೆ ಬಳಿಕ ಈಶ್ವರಪ್ಪ ಅವರಿಗೆ ಮೊಬೈಲ್‌ ಕರೆಯೊಂದು ಬಂದಿದೆ.

ಆ ಬಳಿಕ ಅವರು ದಿಢೀರನೆ ಕಾರಿನಲ್ಲಿ ಬೆಂಗಳೂರಿನತ್ತ ಹೊರಟಿದ್ದಾರೆ. ಮೊಬೈಲ್‌ ಕರೆ ಬರುತ್ತಿದ್ದಂತೆಯೇ ಹೋಟೆಲ್‌ನ ಪ್ರಾಂಗಣದಲ್ಲಿ ದೂರ ನಡೆದು ಹೋದ ಈಶ್ವರಪ್ಪ, ಹತ್ತು ನಿಮಿಷಗಳಿಗೂ ಹೆಚ್ಚು ಕಾಲ ಒಬ್ಬರೇ ನಿಂತು ಮಾತಾಡಿದರು. ನಂತರ ಮರಳಿ ಬಂದು ಕಾರು ಹತ್ತಿ ಬೆಂಗಳೂರಿನತ್ತ ಹೊರಟರು.

ಬಿಜೆಪಿಯ ವಿಭಾಗ ಮಟ್ಟದ ಸಭೆ ಬುಧವಾರ ಇಡೀ ದಿನ ನಡೆಯಬೇಕಿದೆ. ಆದರೆ, ದಿಢೀರನೆ ಈಶ್ವರಪ್ಪ ವಾಪಸಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಂತೋಷ್‌ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ನೇರವಾಗಿ ಸಚಿವರ ವಿರುದ್ಧ ಎಫ್‌ಐಆರ್‌ ದಾಖಲಾಗಿರುವುದರಿಂದ ಅವರು ರಾಜೀನಾಮೆ ನೀಡಬಹುದು ಮಾತು ಬಿಜೆಪಿಯೊಳಗೆ ಹರಿದಾಡುತ್ತಿದೆ.