ಮನೆ ರಾಜ್ಯ ಸೆ.11 ರಂದು ಖಾಸಗಿ ಸಾರಿಗೆ ಪ್ರತಿಭಟನೆ: ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸಚಿವ ರಾಮಲಿಂಗಾರೆಡ್ಡಿ ಸೂಚನೆ

ಸೆ.11 ರಂದು ಖಾಸಗಿ ಸಾರಿಗೆ ಪ್ರತಿಭಟನೆ: ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸಚಿವ ರಾಮಲಿಂಗಾರೆಡ್ಡಿ ಸೂಚನೆ

0

ಬೆಂಗಳೂರು: ಸೆ. 11ಕ್ಕೆ ಖಾಸಗಿ ಸಾರಿಗೆ ವಾಹನ ಮಾಲೀಕರು ಹಾಗು ಚಾಲಕರು ಪ್ರತಿಭಟನೆ ನಡೆಸಲು ಮುಂದಾಗಿರುವ ಹಿನ್ನಲೆಯಲ್ಲಿ  ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಎಂಟಿಸಿ ಎಂಡಿ, ಕೆಎಸ್ ಆರ್ ​ಟಿಸಿ ಎಂಡಿ, ಸಾರಿಗೆ ಇಲಾಖೆಯ ಕಮೀಷನರ್ ಹಾಗೂ ‌ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ಪ್ರತಿಭಟನೆಯಿಂದಾಗುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅದಕ್ಕೆ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಖಡಕ್ ಸೂಚನೆಗಳನ್ನು ನೀಡಿದ್ದಾರೆ.

ಸೆಪ್ಟೆಂಬರ್ 11 ರಂದು ಜನ ಸಾಮಾನ್ಯರಿಗೆ, ಸ್ಕೂಲ್ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲು ಬಿಎಂಟಿಸಿ, ಕೆಎಸ್ ಆರ್​ ಟಿಸಿ ಎಂಡಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ಕೊಟ್ಟಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಆಟೋ, ಕ್ಯಾಬ್ ​ಗಳು ಸಂಚಾರ ಮಾಡ್ತಿದ್ದ ರೂಟ್ ​ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಎಂಟಿಸಿ ಬಸ್ ​ಗಳನ್ನು ರೋಡಿಗಿಳಿಸುವಂತೆ ಸೂಚನೆ ನೀಡಿದ್ದಾರೆ.

ಸೆ.11 ರಂದು ರಾಜಧಾನಿಯಲ್ಲಿ ಸ್ಕೂಲ್, ಕಾಲೇಜು ಮಕ್ಕಳಿಗೆ ಎಕ್ಸಾಂ, ಟೆಸ್ಟ್ ಏನಾದರೂ ಇದ್ದರೆ ಅಂತಹ ಸ್ಕೂಲ್ ಕಾಲೇಜಿಗೆ ಕೆಎಸ್​ ಆರ್​ ಟಿಸಿ ಬಸ್ಸುಗಳನ್ನು ನಿಯೋಜನೆ ಮಾಡಬೇಕು. ಇಂದು ಬೆಂಗಳೂರಿನ ಎಲ್ಲಾ ಸ್ಕೂಲ್, ಕಾಲೇಜುಗಳಿಂದ ಮಾಹಿತಿ ಪಡೆದುಕೊಂಡು ಆಯಾ ಸ್ಕೂಲ್, ಕಾಲೇಜುಗಳಿಗೆ ಕೆಎಸ್​ ಆರ್ ​ಟಿಸಿ, ಬಿಎಂಟಿಸಿ ಬಸ್​ ಗಳನ್ನು ಕಳಿಸಬೇಕು. ರೋಗಿಗಳಿಗೆ, ಮಹಿಳೆಯರಿಗೆ ಸಮಸ್ಯೆ ಆಗದ ರೀತಿಯಲ್ಲಿ ಆಸ್ಪತ್ರೆ, ಗಾರ್ಮೆಂಟ್ಸ್ ಬಳಿ ಹೆಚ್ಚಿನ ಬಸ್ ವ್ಯವಸ್ಥೆ ‌ಮಾಡಬೇಕೆಂದು ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ.

ಇತ್ತ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವ ಸಚಿವ, ಸೆಪ್ಟೆಂಬರ್ 10ರ ಭಾನುವಾರ ರಾತ್ರಿಯಿಂದಲೇ ಫಿಲ್ಡಿಗಿಳಿಯುವಂತೆ ಸೂಚಿಸಿದ್ದಾರೆ. ರಾತ್ರಿ ‌12 ರಿಂದ ಖಾಸಗಿ ‌ಸಾರಿಗೆ ಬಂದ್ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿಯಿಂದಲೇ ಕಾರ್ಯನಿರ್ವಹಿಸುವಂತೆ ಲಾ ಅಂಡ್ ಅರ್ಡರ್ ಮತ್ತು ಟ್ರಾಫಿಕ್ ಪೊಲೀಸರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಬಲವಂತವಾಗಿ ಯಾರು ಕೂಡ ಬಂದ್ ಮಾಡಿಸಲು ಮುಂದಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಕೆಲವೊಂದಷ್ಟು ಸಂಘಟನೆಗಳು ಬಂದ್​ ನಲ್ಲಿ ಭಾಗಿಯಾಗ್ತಿಲ್ಲ ಅಂತಹ ಸಂಘಟನೆಗಳ ಆಟೋ, ಕ್ಯಾಬ್, ಬಸ್ ಚಾಲಕರಿಗೆ ಅಂದು ಕೆಲಸ ಮಾಡಲು ಭದ್ರತೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.