ಮನೆ ಸ್ಥಳೀಯ ಮಕ್ಕಳಿಗೆ ಬೇಕಾದ ಸೌಲಭ್ಯಗಳನ್ನು ಪೂರೈಸುವುದು ನಮ್ಮ ಜವಾಬ್ದಾರಿ: ಮಧು ಬಂಗಾರಪ್ಪ

ಮಕ್ಕಳಿಗೆ ಬೇಕಾದ ಸೌಲಭ್ಯಗಳನ್ನು ಪೂರೈಸುವುದು ನಮ್ಮ ಜವಾಬ್ದಾರಿ: ಮಧು ಬಂಗಾರಪ್ಪ

0

ಮೈಸೂರು: ಮಕ್ಕಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಪೂರೈಸುವುದು ನನ್ನ ಜವಾಬ್ದಾರಿ ರಾಜ್ಯ ಸರ್ಕಾರ ಆ ಕರ್ತವ್ಯವನ್ನು ನನಗೆ ವಹಿಸಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಕಾಲ ಸಚಿವರಾದ ಮಧು ಬಂಗಾರಪ್ಪನವರು ತಿಳಿಸಿದರು.

ಇಂದು ನಗರದ ಜಗನ್ಮೋಹನ ಅರಮನೆಯಲ್ಲಿ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ – 2023ರ ಅಂಗವಾಗಿ ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲಾ ಮಕ್ಕಳಲ್ಲಿಯೂ ಪ್ರತಿಭೆ ಇದೆ. ಆದರೆ ಅವಕಾಶದ ಕೊರತೆ ಇರುವುದರಿಂದ ಕೆಲವೊಮ್ಮೆ ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಲಾಗುವುದಿಲ್ಲ. ಮಕ್ಕಳ ಅಭಿವೃದ್ಧಿಗೆ ಬೇಕಾದ ಕೆಲಸಗಳನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು. ಆವರಣದಲ್ಲಿರುವ ಮಕ್ಕಳ ವಸ್ತು ಪ್ರದರ್ಶನವನ್ನು ಗಮನಿಸಿದೆ, ಅತ್ಯಂತ ಆಕರ್ಷಣೆಯವಾದ ವಸ್ತು ಪ್ರದರ್ಶನದಲ್ಲಿ ಮಕ್ಕಳ ಪ್ರತಿಭೆ ಎದ್ದು ತೋರುತ್ತದೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಸಾಧನೆಗೈದ ಪ್ರತಿಭಾವಂತ ಮಕ್ಕಳ ಜೊತೆಯಲ್ಲಿ ಕುಳಿತಿರುವುದು ನನ್ನ ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಸಚಿವರಾದ ಹೆಚ್ ಸಿ ಮಹದೇವಪ್ಪನವರು ಮಾತನಾಡಿ, ಮಕ್ಕಳ ದಸರಾ ಭಾಷಣ ಮಾಡುವುದಕ್ಕಲ್ಲ. ಮಕ್ಕಳ ಪ್ರತಿಭೆ, ಅವರು ಸಂತಸ ಅನುಭವಿಸುವುದನ್ನು ಕಣ್ಣಾರೆ ನೋಡುವುದಕ್ಕಾಗಿ. ಇಲ್ಲಿರುವ ಪ್ರತಿಭಾನ್ವಿತ ಮಕ್ಕಳನ್ನು ನೋಡಿ ತಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಬೆಳೆಸಿಕೊಳ್ಳಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಾಮರಾಜ ಕ್ಷೇತ್ರದ ವಿಧಾನಸಭಾ ಶಾಸಕರಾದ ಹರೀಶ್ ಗೌಡ ರವರು ಮಾತನಾಡಿ, ಎಲ್ಲ ಮಕ್ಕಳಿಗೂ ದಸರಾ ಹಬ್ಬದ ಶುಭವನ್ನು ಹಾರೈಸಿದರು. ಇಂದಿನ ಮಕ್ಕಳ ಬೌದ್ಧಿಕ ಬೆಳವಣಿಗೆ ಹಾಗೂ ಅವರಲ್ಲಿರುವ ಪ್ರತಿಭೆ ನಮಗಿಂತ ಹೆಚ್ಚಿನದ್ದಾಗಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಎಲ್ಲ ಮಕ್ಕಳು ವೇದಿಕೆಯನ್ನು ಚೆನ್ನಾಗಿ ಬಳಸಿಕೊಳ್ಳಿ ಮತ್ತು ಸಂತಸಪಡಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್ ಮಾತನಾಡಿ, ದಸರಾ ಮಹೋತ್ಸವದಲ್ಲಿ ಮಕ್ಕಳ ದಸರಾ ವನ್ನು 2007 ಮಾಡಲಾಯಿತು. ಮಕ್ಕಳ ಸಂತೋಷವನ್ನು ಹೆಚ್ಚಿಸುವುದಕ್ಕಾಗಿ ಮೈಸೂರು ದಸರಾ ಮಹೋತ್ಸವದಲ್ಲೂ ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ದಸರಾ ವೇದಿಕೆಯು ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ ಎಂದರು.

ಸರಿಗಮಪ ಸೀಸನ್ 19ರ ದಿಯಾ ಹೆಗಡೆ ಪ್ರಗತಿ ಬಡಿಗೇರ್ ರಾಜ್ಯಮಟ್ಟದ ಸೋಲು ಡಾನ್ಸು ವಿಜೇತ ಗಂಗಾಧರ್ ಜಿಎಂ ಹಾಗೂ ಖೋ-ಖೋ ರಾಷ್ಟ್ರೀಯ ಕ್ರೀಡಾಪಟು ಮಾನಸ ಬಾಲ ಪ್ರತಿಭೆಗಳಿಗೆ ಸಚಿವರುಗಳು ಗೌರವ ಸಮರ್ಪಣೆ ಮಾಡಿ, ಚೆಕ್ ವಿತರಿಸಿದರು.

ಕಾರ್ಯಕ್ರಮದಲ್ಲಿ  ಉಪ ಮೇಯರ್ ಡಾ. ರೂಪ.ಜಿ, ಕಾರ್ಪೋರೇಟರ್ ಪರಿಮಳ ಭರತ್, ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯ ವಿಶೇಷಾಧಿಕಾರಿಗಳು ಹಾಗೂ ಹುಣಸೂರು ಉಪವಿಭಾಗಾಧಿಕಾರಿ ರುಚಿ ಬಿಂದಾಲ್, ಅಧ್ಯಕ್ಷರಾದ ಸುಧಾ ಮಹದೇವಯ್ಯ, ಸರಿಗಮಪ ಖ್ಯಾತಿಯ ಪ್ರಗತಿ ಬಡಿಗೇರ್, ದಿಯಾ ಹೆಗ್ಡೆ, ರಾಜ್ಯಮಟ್ಟದ ಸೋಲೋ ಡಾನ್ಸ್ ವಿಜೇತ ಗಂಗಾಧರ ಜಿ.ಎಂ, ಖೋ-ಖೋ ರಾಷ್ಟ್ರೀಯ ಕ್ರೀಡಾಪಟು ಮಾನಸ ಸೇರಿದಂತೆ ವಿವಿಧ ಶಾಲೆಯಿಂದ ಮಕ್ಕಳು ಭಾಗವಹಿಸಿದ್ದರು.