ಮನೆ ರಾಜ್ಯ ಜಿಂಕೆ, ಕಾಡುಕೋಣದ ಕೊಂಬು ವಶಕ್ಕೆ: ವ್ಯಕ್ತಿ ಬಂಧನಕ್ಕೆ ಮುಂದಾದ ಅರಣ್ಯಾಧಿಕಾರಿಗಳ ಕ್ರಮಕ್ಕೆ ಆರಗ ಜ್ಞಾನೇಂದ್ರ ಗರಂ

ಜಿಂಕೆ, ಕಾಡುಕೋಣದ ಕೊಂಬು ವಶಕ್ಕೆ: ವ್ಯಕ್ತಿ ಬಂಧನಕ್ಕೆ ಮುಂದಾದ ಅರಣ್ಯಾಧಿಕಾರಿಗಳ ಕ್ರಮಕ್ಕೆ ಆರಗ ಜ್ಞಾನೇಂದ್ರ ಗರಂ

0

ಶಿವಮೊಗ್ಗ: ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು ಇಂದು ತೀರ್ಥಹಳ್ಳಿ ತಾಲೂಕು ಹಣಗೆರೆ ಸಮೀಪದ ಬಸವನಗದ್ದೆ ಪ್ರಸನ್ನ ಎಂಬುವರ ಮನೆಯ ಮೇಲೆ ದಾಳಿ ನಡೆಸಿ ಜಿಂಕೆ ಹಾಗೂ ಕಾಡು ಕೋಣದ ಕೊಂಬುಗಳನ್ನು ವಶಕ್ಕೆ ಪಡೆದಿದ್ದಾರೆ.

ವನ್ಯಜೀವಿ ಕೊಂಬುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿರುವ ಆರೋಪದಡಿ ಪ್ರಸನ್ನ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಲು ಮುಂದಾದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅರಣ್ಯಾಧಿಕಾರಿಗಳ ಕ್ರಮವನ್ನು ವಿರೋಧಿಸಿದರು.

ಅಲ್ಲದೆ ಪ್ರಸನ್ನ ಅವರಿಗೆ ವಯಸ್ಸಾಗಿದೆ, ಅವರನ್ನು ಬಂಧಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಅರಣ್ಯ ಇಲಾಖೆಯ ಪಿಸಿಸಿಎಫ್ ಸೇರಿದಂತೆ ಮೇಲಾಧಿಕಾರಿಗಳ ಜೊತೆ ಆರಗ ಜ್ಞಾನೇಂದ್ರ ಮೊಬೈಲ್ ​ನಲ್ಲಿ ಮಾತನಾಡಿ, ಪ್ರಸನ್ನ ಅವರನ್ನು ಬಂಧಿಸದಂತೆ ಸೂಚಿಸಿದರು.

ಒಂದು ವೇಳೆ ಆತನನ್ನು ಬಂಧನ ಮಾಡಿದ್ರೆ, ಪ್ರತಿಭಟನೆ ನಡೆಸುವುದಾಗಿ ಹಾಗೂ ಅವರ ಜೊತೆ ತಮ್ಮನ್ನು ಕೂಡ ಬಂಧಿಸುವಂತೆ ಅಡ್ಡಿಪಡಿಸಿದರು.

ಬಂಧಿಸಲು ಬಂದಿದ್ದ ಎಸಿಎಫ್ ಅವರ ತಂಡ ಕಾಡುಕೋಣ ಹಾಗೂ ಜಿಂಕೆಯ ಕೊಂಬುಗಳನ್ನು ಮಾತ್ರ ವಶಕ್ಕೆ ಪಡೆದು ವಾಪಸ್​ ಹೋದರು.

ಪ್ರಸನ್ನ ಅವರ ಮನೆಯಲ್ಲಿ ಸಿಕ್ಕ ಪ್ರಾಣಿಗಳ ಕೊಂಬುಗಳು ನೂರಾರು ವರ್ಷದಷ್ಟು ಹಿಂದಿನವು. ಈ ಕುಟುಂಬ ಬೇಟೆಯಾಡುವುದಿಲ್ಲ. ಅವರು ಮನೆ ಬಳಿ ಬಂದ ಮಂಗಳನ್ನು ಬೆದರಿಸುತ್ತಾರೆ ಬಿಟ್ಟರೆ, ಬೇರೆ ಏನನ್ನು ಮಾಡುವುದಿಲ್ಲ‌. ಇಂತಹವರನ್ನು ಬಂಧಿಸಲು ಆಗಮಿಸಿದ್ದು ಖಂಡನೀಯವಾಗಿದೆ. ಅರಣ್ಯಾಧಿಕಾರಿಗಳು ತಮ್ಮ ಪ್ರಚಾರಕ್ಕೆ ಆಗಮಿಸಿದ್ದಾರೆ ಎಂದು ಆರಗ ಜ್ಞಾನೇಂದ್ರ ಆರೋಪಿಸಿದರು.