ಮನೆ ರಾಜಕೀಯ ಯತೀಂದ್ರ ಬಗ್ಗೆ ಟೀಕಿಸಲು ಕುಮಾರಸ್ವಾಮಿ ಬಳಿ ಸೂಕ್ತ ದಾಖಲೆಗಳು ಇವೆಯಾ?: ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಯತೀಂದ್ರ ಬಗ್ಗೆ ಟೀಕಿಸಲು ಕುಮಾರಸ್ವಾಮಿ ಬಳಿ ಸೂಕ್ತ ದಾಖಲೆಗಳು ಇವೆಯಾ?: ಸಿಎಂ ಸಿದ್ದರಾಮಯ್ಯ ಪ್ರಶ್ನೆ

0

ಕೊಪ್ಪಳ: ಎಚ್.ಡಿ. ಕುಮಾರಸ್ವಾಮಿ ವಿದ್ಯುತ್ ಕದ್ದಿದ್ದಾರೆ. ದಂಡವನ್ನೂ ಕಟ್ಟಿದ್ದಾರೆ. ಅವರಿಗೆ ಇನ್ನೊಬ್ಬರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ. ಯತೀಂದ್ರ ಬಗ್ಗೆ ಟೀಕಿಸಲು ಕುಮಾರಸ್ವಾಮಿ ಬಳಿ ಸೂಕ್ತ ದಾಖಲೆಗಳು ಇವೆಯಾ?  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ವಿಜಯಪುರಕ್ಕೆ ತೆರಳುವ ಮುನ್ನ ಇಲ್ಲಿಗೆ ಸಮೀಪದ ಬಸಾಪುರ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇವರ ಅಧಿಕಾರದ ಕಾಲದಲ್ಲಿ ವರ್ಗಾವಣೆ ಆಗಿಲ್ಲವೇ? ಕುಮಾರಸ್ವಾಮಿ ಏನೇನು ಮಾಡಿದ್ದಾರೆ ಎಂದು ಜಗತ್ತಿಗೆ ಗೊತ್ತಿದೆ. ನನ್ನ ಮೇಲಿನ ದ್ವೇಷ ಹಾಗೂ ಅಸೂಯೆ ಕಾರಣಕ್ಕಾಗಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ದ ಹರಿಹಾಯ್ದ ಸಿಎಂ,  ಮೋದಿ ನುಡಿದಂತೆ ಎಂದೂ ನಡೆದುಕೊಂಡಿಲ್ಲ. ಇಷ್ಟು ದಿನ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದಾರೆ‌. ಈಗ ಬಿಜೆಪಿ ಅಧಿಕಾರ ಇರುವ ರಾಜ್ಯಗಳಲ್ಲಿ ಅದೇ ಮಾದರಿ ಜನಪ್ರಿಯ ಯೋಜನೆಗಳನ್ನು ಘೋಷಿಸುತ್ತಿದ್ದಾರೆ. ಇದು ನಮ್ಮ ಯೋಜನೆಗಳ ನಕಲು ಎಂದರು.

ಯಾರು ನಮ್ಮ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದರೋ, ಅವರೇ ಜಾರಿ ಮಾಡುವ ಮಾತಾಡುತ್ತಿದ್ದಾರೆ‌. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅನುಷ್ಠಾನ ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಸಚಿವರಾದ ಎಂ.ಬಿ. ಪಾಟೀಲ, ಕೆ.ಎನ್. ರಾಜಣ್ಣ, ಜಿಲ್ಲಾಧಿಕಾರಿ ನಲಿನ್ ಅತುಲ್ ಇದ್ದರು.