ಮನೆ ರಾಜ್ಯ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ಕಿಡಿಗೇಡಿಗಳ ವಿರುದ್ಧ ಪೊಲೀಸರಿಗೆ ಜೆಡಿಎಸ್ ದೂರು

ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ಕಿಡಿಗೇಡಿಗಳ ವಿರುದ್ಧ ಪೊಲೀಸರಿಗೆ ಜೆಡಿಎಸ್ ದೂರು

0

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಅಶ್ಲೀಲ, ಕೀಳು ಅಭಿರುಚಿಯ ಪೋಸ್ಟರ್ ಗಳನ್ನು ಬೆಂಗಳೂರು ನಗರದ ವಿವಿಧೆಡೆ ಗೋಡೆಗಳ ಮೇಲೆ ಅಂಟಿಸಿದ ಕಾಂಗ್ರೆಸ್ ಪಕ್ಷದ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಆಯುಕ್ತರಿಗೆ ಜೆಡಿಎಸ್ ಪಕ್ಷ ದೂರು ನೀಡಿದೆ.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ ಹಾಗೂ ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಅವರು ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ದಯಾನಂದ ಅವರಿಗೆ ದೂರು ನೀಡಿದರು.
ಪೋಸ್ಟರ್ ಅಂಟಿಸುವಲ್ಲಿ ಪ್ರಮುಖ ಪಾತ್ರಧಾರಿಯಾದ ಕಾಂಗ್ರೆಸ್ ಮುಖಂಡ ಎಸ್.ಮನೋಹರ್ ವಿರುದ್ದ ಪೊಲೀಸ್ ಕಮಿಷನರ್ ಗೆ ದೂರು ನೀಡಲಾಗಿದ್ದು, ಜತೆಗೆ; ಡಿ.ಎಸ್.ಕಾರ್ತಿಕ್ ಗೌಡ, ಹೆಚ್.ಡಿ.ದರ್ಶನ್ ಗೌಡ, ಅರ್ಜುನ್ ಡಿ.ಗೌಡ, ಸಂತೋಷ್ ಎಂಬುವವರ ವಿರುದ್ಧ ಆಯುಕ್ತರಿಗೆ ದೂರು, ನೀಡಿ ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ ಜೈಲಿಗೆ ಅಟ್ಟಬೇಕು ಎಂದು ಜೆಡಿಎಸ್ ಮುಖಂಡರು ಒತ್ತಾಯಿಸಿದರು.
ಎಸ್.ಮನೋಹರ್ ಹಿಂದಿನಿಂದಲೂ ಇದೇ ರೀತಿಯಲ್ಲಿ ಕೀಳು ಅಭಿರುಚಿಯ ಪೋಸ್ಟರ್ ಗಳನ್ನು ಅಂಟಿಸಿ ತೇಜೋವಧೆ ಮಾಡುವ ಚಾಳಿಯುಳ್ಳ ವ್ಯಕ್ತಿಯಾಗಿದ್ದು, ಆತನ ವಿರುದ್ಧ ಇಂಥಹ ಅನೇಕ ಆರೋಪಗಳು ಇವೆ ಎಂದು ಮುಖಂಡರು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿಕೊಟ್ಟರು.
ಮನವಿ ಸ್ವೀಕರಿಸಿದ ಆಯುಕ್ತರು, ಸೂಕ್ತ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ಮನವಿ ಪತ್ರ ನೀಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಪಕ್ಷದ ನಗರ ಘಟಕದ ಅಧ್ಯಕ್ಷ ರಮೇಶ್‌ ಗೌಡ; ಮನೋಹರ್ ಒಬ್ಬ ಒಬ್ಬ ಕೊಳಕು ಮನಃಸ್ಥಿತಿಯ ವ್ಯಕ್ತಿ. ಸಮಾಜಕ್ಕೆ ಇಂಥವರು ದೊಡ್ಡ ಬೆದರಿಕೆ. ಇಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಪೊಲೀಸ ಆಯುಕ್ತರಿಗೆ ಮನವಿ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಜೆಡಿಎಸ್ ಕಚೇರಿ, ಮತ್ತಿತರೆ ಭಾಗದಲ್ಲಿ ಕುಮಾರಸ್ವಾಮಿ ಅವರ ಬಗ್ಗೆ ಕೆಟ್ಟ ಪೋಸ್ಟರ್ ಗಳನ್ನು ಅಂಟಿಸಿದ್ದು ಈತನೇ. ಇವನ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. ಹಿಂದೆ ಸುನಿಲ್ ಕನಗೋಳ್ ಎಂಬಾತ ಸಿಎಂ ವಿರುದ್ಧ ಪೋಸ್ಟರ್ ಅಂಟಿಸಿದ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಆತನ ವಿರುದ್ಧವೂ ಕ್ರಮ ಆಗಬೇಕು ಎಂದು ಅವರು ಆಗ್ರಹಪಡಿಸಿದರು.

ಪೊಲೀಸರು ಈ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಎಲ್ಲಾ ಸಚಿವರ ಕಚೇರಿ ಮುಂದೆ ನಾವು ಕೂಡ ಪೋಸ್ಟರ್ ಗಳನ್ನು ಅಂಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದ ಅವರು; ಕಾಂಗ್ರೆಸ್ ಮತ್ತೆ ಇದೇ ಚಾಳಿ ಮುಂದುವರಿಸಿದರೆ ನಮ್ಮ ಪಕ್ಷ ಕೂಡ ಇದನ್ನೇ ಮಾಡುತ್ತದೆ ಎಂದರು.

ಹಿಂದಿರುವ ವ್ಯಕ್ತಿ ಯಾರು?:

ಬೆಂಗಳೂರಿನಲ್ಲಿ ಈ ಹಿಂದೆ ಗೋಡೆಗಳ ಮೇಲೆ ಕಾಣಿಸಿಕೊಂಡ ಕೀಳು ಅಭಿರುಚಿಯ ಪೋಸ್ಟರ್ ಗಳ ಹಿಂದೆ ಕಾಂಗ್ರೆಸ್ ಪಕ್ಷದ ಪ್ರಭಾವೀ ಒಬ್ಬರ ಮಿದುಳು ಕೆಲಸ ಮಾಡಿದೆ. ಮೊದಲು ಆ ಕಾಣದ ಕೈ ಯಾವುದು ಎಂದು ಪತ್ತೆ ಹಚ್ಚಿ ಕ್ರಮ ಜರುಗಿಸಿ ಎಂದು ಇದೇ ವೇಳೆ ಜೆಡಿಎಸ್ ಪಕ್ಷದ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಒತ್ತಾಯ ಮಾಡಿದರು.
ಗೋಡೆಗಳ ಮೇಲೆ ಯಾರೋ ಕಿಡಿಗೇಡಿಗಳು ಬಂದು ಪೋಸ್ಟರ್ ಅಂಟಿಸಿದರು ಎಂದು ಲಘುವಾಗಿ ಪರಿಗಣಿಸಬೇಡಿ. ಇದು ಬಹಳ ಸೂಕ್ಷ್ಮ ವಿಷಯ. ಇದರ ವಿರುದ್ಧ ಸೂಕ್ತ ಕ್ರಮ ವಹಿಸದಿದ್ದರೆ ಪೊಲೀಸರೇ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ ಎಂದು ರಂಗನಾಥ್ ಅವರು ಎಚ್ಚರಿಕೆ ನೀಡಿದರು.