ಮನೆ ರಾಜ್ಯ ಪುನೀತ್‌ ಗೆ ಮರಣೋತ್ತರ ‘ಬಸವಶ್ರೀ’ ಪ್ರಶಸ್ತಿ

ಪುನೀತ್‌ ಗೆ ಮರಣೋತ್ತರ ‘ಬಸವಶ್ರೀ’ ಪ್ರಶಸ್ತಿ

0

ಚಿತ್ರದುರ್ಗ (Chitradurga )- ಮುರುಘಾ ಮಠದ ಪ್ರತಿಷ್ಠಿತ ‘ಬಸವಶ್ರೀ’ ಪ್ರಶಸ್ತಿಯನ್ನು ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರವಾಗಿ ಪ್ರದಾನ ಮಾಡಲಾಯಿತು. ಪುನೀತ್ ಅವರ ಪತ್ನಿ ಅಶ್ವಿನಿ ಪ್ರಶಸ್ತಿ ಸ್ವೀಕರಿಸಿ ಭಾವುಕರಾದರು.

ಇಲ್ಲಿನ ಮುರುಘಾ ಮಠದ ಅನುಭವ ಮಂಟಪದಲ್ಲಿ ಬಸವ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು 2021ನೇ ಸಾಲಿನ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು 5 ಲಕ್ಷ ರೂ. ನಗದು ಹಾಗೂ ಫಲಕ ಒಳಗೊಂಡಿದೆ.

ಡಾ. ಶಿವಮೂರ್ತಿ ಮುರುಘಾ ಶರಣರು, ನಟ ಪುನೀತ್ ರಾಜ್‍ಕುಮಾರ್ ಕನ್ನಡದ ಕುವರ. ನಟನೆ ಮತ್ತು ವ್ಯಕ್ತಿತ್ವದ ಮೂಲಕ ಆಕಾಶದ ಎತ್ತರಕ್ಕೆ ಬೆಳೆದವರು. ರಾಜ್ ಕುಟುಂಬ ಇಡೀ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶರಣ ಮತ್ತು ಬಸವ ಸಂಸ್ಕೃತಿ ಲಿಂಗಾಯತರಿಗೆ ಸೀಮಿತವಲ್ಲ. ಇಡೀ ಮನುಕುಲಕ್ಕೆ ಸಂಬಂಧಿಸಿದ ಸಂಸ್ಕೃತಿ. ಬಸವಣ್ಣ ಕೇವಲ ಜಾತಿ ಉದ್ಧಾರಕರಾಗಿರಲಿಲ್ಲ, ಮನುಕುಲದ ಉದ್ಧಾರಕರಾಗಿದ್ದರು. ಬಸವಣ್ಣನವರು ಸಾವಿರಾರು ಜನರನ್ನು ಪರಿಚಯಿಸಿದ್ದಾರೆ. ಇಂದಿನ ವಿಧಾನಸಭೆ, ಲೋಕಸಭೆಯಲ್ಲಿಯೂ ಇಷ್ಟು ಜನರು ಇಲ್ಲ ಎಂದರು.

ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಪುನೀತ್‌ ಜೊತೆಗೆ ಹತ್ತಿರದ ಒಡನಾಟವಿತ್ತು. ಅವರಿಗೆ ಹೃದಯಾಘಾತವಾದ ಸುದ್ದಿಯನ್ನು ನಂಬಲು ಸಾಧ್ಯವಾಗಲಿಲ್ಲ. ಪುನೀತ್‌ ಹೆಸರಿನಲ್ಲಿಯೇ ಒಂದು ಶಕ್ತಿ ಇದೆ. ನಟನೆ, ಹಾಡುಗಾರಿಕೆ, ಸೇವಾ ಕಾರ್ಯದ ಮೂಲಕ ನಮ್ಮ ನಡುವೆ ಇನ್ನೂ ಉಳಿದಿದ್ದಾರೆ ಎಂದು ಸ್ಮರಿಸಿದರು.

ಹಲವೆಡೆ ಬಸವಣ್ಣನವರ ಜೊತೆಗೆ ಪುನೀತ್‌ ರಾಜ್‌ಕುಮಾರ್ ಭಾವಚಿತ್ರವಿಟ್ಟು ಪೂಜಿಸಲಾಗುತ್ತಿದೆ. ಜನರ ಹೃದಯದಲ್ಲಿ ಇಂತಹ ಸ್ಥಾನ ಪಡೆಯುವುದು ಸುಲಭವಲ್ಲ. ಅಷ್ಟು ಜನಾನುರಾಗಿ ಅಗಿ ಪುನೀತ್‌ ಬೆಳೆದ ಪರಿ ವಿಸ್ಮಯ. ಸರಳತೆ, ಆತ್ಮೀಯತೆ ಮರೆಯಲು ಸಾಧ್ಯವಿಲ್ಲ. ಅವರು ಮಾಡಿದ ಧಾನ–ಧರ್ಮ ಇಂದಿಗೂ ಕಾಪಾಡುತ್ತಿದೆ ಎಂದು ಹೇಳಿದರು.

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಂಗಳಾ ರಾಘವೇಂದ್ರ ರಾಜ್‌ಕುಮಾರ್‌, ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್, ಸಾಹಿತಿ ರಾಜಪ್ಪ ದಳವಾಯಿ, ಚಿತ್ರ ನಿರ್ಮಾಪಕ ಚಿನ್ನೇಗೌಡ ಮತ್ತಿತರರು ಉಪಸ್ಥಿತರಿದ್ದರು.