ಮನೆ ಕಾನೂನು ಮಂಡ್ಯ: ರೈಲಿನ ಶೌಚಾಲಯದಲ್ಲೇ ಸರ್ವೀಸ್ ರಿವಾಲ್ವಾರ್ ಬಿಟ್ಟು ಹೋಗಿದ್ದ ಕಾನ್‌ ಸ್ಟೆಬಲ್‌ ಅಮಾನತು

ಮಂಡ್ಯ: ರೈಲಿನ ಶೌಚಾಲಯದಲ್ಲೇ ಸರ್ವೀಸ್ ರಿವಾಲ್ವಾರ್ ಬಿಟ್ಟು ಹೋಗಿದ್ದ ಕಾನ್‌ ಸ್ಟೆಬಲ್‌ ಅಮಾನತು

0

ಮಂಡ್ಯ: ರೈಲಿನ ಶೌಚಾಲಯದಲ್ಲೇ ಸರ್ವೀಸ್ ರಿವಾಲ್ವಾರ್ ಬಿಟ್ಟು ಬಂದಿದ್ದ ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆಯ ಕಾನ್‌ ಸ್ಟೆಬಲ್‌ ನಾಗರಾಜು ಸೇವೆಯಿಂದ ಅಮಾನತುಗೊಂಡಿದ್ದಾರೆ.

ನಾಗರಾಜು ನಿವೃತ್ತ ವಿಶೇಷ ಸರ್ಕಾರಿ ಅಭಿಯೋಜಕರೊಬ್ಬರಿಗೆ ಗನ್‌ ಮ್ಯಾನ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಬೆಂಗಳೂರಿನಿಂದ ಮಂಡ್ಯಕ್ಕೆ ಭಾನುವಾರ ಮಧ್ಯಾಹ್ನ ಕಾಚಿಗುಡ ಎಕ್ಸ್‌ ಪ್ರೆಸ್‌ ರೈಲಿನಲ್ಲಿ ಪ್ರಯಾಣ ಮಾಡಿದ್ದರು. ಈ ವೇಳೆ ರೈಲಿನ ಒಳಗಿನ ಶೌಚಾಲಯಕ್ಕೆ ತೆರಳಿದ್ದು, ಸೊಂಟದ ಬೆಲ್ಟ್‌ ನಲ್ಲಿದ್ದ ರಿವಾಲ್ವರ್‌ ಅನ್ನು ತೆಗೆದು ಅಲ್ಲಿನ ವಾಶ್‌ ‌ಬೇಸಿನ್‌ ಮೇಲಿಟ್ಟಿದ್ದರು. ಶೌಚ ಮುಗಿಸಿದ ನಂತರ ರಿವಾಲ್ವರ್ ಅನ್ನು‌ ಶೌಚಾಲಯದಲ್ಲೇ ಬಿಟ್ಟು ಕೆಳಗೆ ಇಳಿದಿದ್ದರು.

ರೈಲುಗಾಡಿ ಮಂಡ್ಯ ರೈಲು ನಿಲ್ದಾಣಕ್ಕೆ ಬಂದ ನಂತರ ಶೌಚಾಲಯದಲ್ಲಿ ರಿವಾಲ್ದಾರ್ ಗಮನಿಸಿ ಪ್ರಯಾಣಿಕರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು. ರೈಲ್ವೆ ಪೊಲೀಸರು ತಪಾಸಣೆ ನಡೆಸಿ ರಿವಾಲ್ವರ್‌ ಅನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು. ರಿವಾಲ್ವಾರ್ ಮೇಲಿನ ಸಂಖ್ಯೆಯ ಆಧಾರದಲ್ಲಿ ತಪಾಸಣೆ ನಡೆಸಿದಾಗ ಇದು ಕಾನ್‌ ಸ್ಟೆಬಲ್‌ ನಾಗರಾಜು ಅವರಿಗೆ ನೀಡಿದ್ದು, ಅವರು ನಿವೃತ್ತ ವಿಶೇಷ ಸರ್ಕಾರಿ ಅಭಿಯೋಜಕರ ಅಂಗರಕ್ಷಕರಾಗಿರುವುದು ತಿಳಿದುಬಂದಿತು.

ಕರ್ತವ್ಯ ಲೋಪದ ಆರೋಪದ ಮೇಲೆ ನಾಗರಾಜು ಅವರನ್ನು ಸೇವೆಯಿಂದ ಅಮಾನತುಗೊಳಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್‌. ಯತೀಶ್‌ ತಿಳಿಸಿದರು.