ಮನೆ ರಾಜ್ಯ ಮಾನವ ಸಂಪನ್ಮೂಲ‌ ಈ ದೇಶದ ಪ್ರಬಲ ಆಸ್ತಿ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ: ಸಚಿವ ಪ್ರಿಯಾಂಕ್ ಖರ್ಗೆ

ಮಾನವ ಸಂಪನ್ಮೂಲ‌ ಈ ದೇಶದ ಪ್ರಬಲ ಆಸ್ತಿ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ: ಸಚಿವ ಪ್ರಿಯಾಂಕ್ ಖರ್ಗೆ

0

ಕಲಬುರಗಿ: ಮಾನವ ಸಂಪನ್ಮೂಲ ಈ ದೇಶದ ಪ್ರಬಲ ಆಸ್ತಿಯಾಗಿದೆ. ಈ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಂಡರೆ ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ‌ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.

ಆದರ್ಶ ಶಿಕ್ಷಣ ಸಂಸ್ಥೆಯ ಪ್ರೊ. ಪಿ.ಎಸ್.ಚೌಧರಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಯ ಘಟಿಕೋತ್ಸವ ಕಾರ್ಯಕ್ರಮ‌ದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಗುಣಮಟ್ಟದ ಶಿಕ್ಷಣ ಹಾಗೂ ಕೌಶಲ್ಯ ತರಬೇತಿ ನೀಡುವ ಮೂಲಕ ಯುವಕರನ್ನು ಸಮರ್ಪಕ ಮಾನವ ಸಂಪನ್ಮೂಲವನ್ನಾಗಿ ಪರಿವರ್ತಿಸಬೇಕು. ಬಲಿಷ್ಠ ಸಮಾಜ‌ ನಿರ್ಮಾಣ ಮಾಡುವಲ್ಲಿ ಇದು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟ ಸಚಿವರು, ವಿದೇಶದಲ್ಲಿ ಭಾರತ ಸಂಪನ್ಮೂಲ ಅದರಲ್ಲೂ ಕರ್ನಾಟಕ ಕೌಶಲ್ಯ ತರಬೇತಿ ಹೊಂದಿದ ಮಾನವ ಸಂಪನ್ಮೂಲಕ್ಕೆ ಭಾರಿ ಬೇಡಿಕೆ ಇದೆ. ಇತ್ತೀಚಿಗೆ ಅಮೇರಿಕಾಕ್ಕೆ ತಾವು ಭೇಟಿ ನೀಡಿದಾಗ ಅಲ್ಲಿನ  ಉದ್ಯೆಮಿಗಳು ತಮಗೆ ರಾಜ್ಯದ ಕೌಶಲ್ಯ‌ ತರಬೇತುದಾರರನ್ನು ಒದಗಿಸಿ ಎನ್ನುವ ಬೇಡಿಕೆ ಇಟ್ಟಿದ್ದಾರೆ ಎಂದರು.

ಇದೀಗ ಅಪ್ ಸ್ಕಿಲ್ಲಿಂಗ್ ಗೆ ಹೆಚ್ಚು ಒತ್ತು‌ ನೀಡುತ್ತಿದೆ. ಐಟಿಐ ಮುಗಿಸಿದ ವಿದ್ಯಾರ್ಥಿಗಳು ರೀ ಸ್ಕಿಲ್ಲಿಂಗ್, ಅಪ್ ಸ್ಕಿಲ್ಲಿಂಗ್  ಆಗುವ ಮೂಲಕ ವಿದೇಶಕ್ಕೆ ಬೇಕಾಗುವ ತರಬೇತಿ ಹೊಂದಿದ ಯುವಕರನ್ನು ಒದಗಿಸಲು ಅನುಕೂಲವಾಗುತ್ತದೆ. ಬೆಂಗಳೂರಿನಲ್ಲಿ ಐ-ಫೋನ್ ತಯಾರಿಕ ಘಟಕ ಸ್ಥಾಪನೆ ಮಾಡುತ್ತಿದೆ. ಅದಕ್ಕೆ 48,000 ಜನ ತರಬೇತಿ ಹೊಂದಿದ‌ ಯುವಕರು ಬೇಕಾಗುತ್ತದೆ ಎಂದು ಕಂಪನಿ ಬೇಡಿಕೆ ಇಟ್ಟಿದೆ. ಒಂದು ಪ್ರಮುಖ ಅಂಶವೆಂದರೆ‌ ಈ ತರಹದ ಹೊಸ ಆವಿಷ್ಕಾರಗಳಿಗೆ ಚೀನಾ ನಮ್ಮ ದೇಶಕ್ಕಿಂತ ಮುಂದಿದೆ. ನಾವೂ ಕೂಡಾ ಈ ವಿಷಯದಲ್ಲಿ ಅವರಂತೆ ಆಧುನಿಕ ಜಗತ್ತಿಗೆ ಅನುಕೂಲವಾಗುವಂತ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲ ಉತ್ಪನ್ನ ಮಾಡಿದಾಗ ಮಾತ್ರ ಚೀನಾಗೆ ಸರಿಗಟ್ಟಬಹುದು ಎಂದರು.

ಸ್ಕಿಲ್ಲಿಂಗ್ ಇನ್ನೋವೇಷನ್ ಹಾಗೂ  ಇನ್ಕ್ಯೂಬೇಷನ್ ಸೆಂಟರ್ ನಿರ್ಮಾಣ ಮಾಡುವ ಆಲೋಚನೆ ಇದ್ದು ಕೌಶಲ್ಯಾಭಿವೃದ್ದಿ ಸಚಿವರಾದ ಶರಣಪ್ರಕಾಶ ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಅವರ ನೇತೃತ್ವದಲ್ಲಿ ಈಗಾಗಲೇ ಸ್ಕಿಲ್  ಅಡ್ವೈಸರಿ ಕಮಿಟಿ ಸ್ಥಾಪಿಸಲಾಗಿದೆ. ನಮ್ಮ ರಾಜ್ಯದಲ್ಲಿರುವ ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲ ಬಳಸಿಕೊಂಡು ಕರ್ನಾಟಕವನ್ನು  ‘ ಸ್ಕಿಲ್ ಕ್ಯಾಪಿಟಲ್ ‘ ಮಾಡುತ್ತೇವೆ ಎಂದು ಸಚಿವರು ಘೋಷಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ ಪಾಟೀಲ್ ಮಾತನಾಡಿ, ಕೆಲ ವರ್ಷಗಳ ಹಿಂದೆ ಕೈಗಾರಿಕ ತಯಾರಿಕೆಗೆ ಒತ್ತು ನೀಡಲಾಗುತ್ತಿತ್ತು. ಈಗ ತಾಂತ್ರಿಕತೆ ಹಾಗೂ ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಭಾರತದ  ಮಾನವ ಸಂಪನ್ಮೂಲಕ್ಕೆ ಹೆಚ್ಚು ಬೇಡಿಕೆ ಇದೆ. ಸ್ಲೋವಾಕಿಯಾ ದೇಶದವರು 2000 ಟ್ರೈನಿಡ್ ITI ಪದವಿದರ ಬೇಡಿಕೆ ಇಟ್ಟಿದ್ದಾರೆ. ತರಬೇತಿ ನೀಡಿ 200 ಅಭ್ಯರ್ಥಿಗಳನ್ನು ಕಳಿಸಲಾಗುತ್ತದೆ, ಅವರಲ್ಲಿ ಕಲಬುರಗಿ ಯಿಂದ 20 ವಿದ್ಯಾರ್ಥಿಗಳು ಸೇರಿದ್ದಾರೆ ಎಂದರು.

ಉತ್ಪಾದಕರು ಐಟಿಐ, ಡಿಪ್ಲೋಮ, ಹಾಗೂ ಇಂಜೀನಿಯರ್ ಪಾಸಾದವರಿಗೆ ತರಬೇತಿ ನೀಡಿ ಕೆಲಸ ಕೊಡಿಸುವುದು ಸರ್ಕಾರದ ಈಗಿನ ಆದ್ಯ ಕರ್ತವ್ಯವಾಗಿದೆ. ಸಂಪರ್ಕ ಸೇರಿದಂತೆ ಹೆಚ್ಚುವರಿ ತರಬೇತಿ ನೀಡುವುದಕ್ಕೆ ಒತ್ತು ನೀಡಲಾಗುತ್ತಿದೆ. ಈ ಬಗ್ಗೆ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಎಂ.ಸಿ.ಸುಧಾಕರ್ ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದೇವೆ.

ರಾಜ್ಯದಲ್ಲಿ 250 ಸರ್ಕಾರಿ ಐಟಿಐ ಕಾಲೇಜುಗಳು, 33 GTTC, KGDTI ಸಂಸ್ಥೆಗಳಿವೆ. ಇಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಹಾಗೂ ಕೌಶಲ್ಯ ತರಬೇತಿ ನೀಡಲಾಗುತ್ತಿದೆ.ಕಲಬುರಗಿ ಯಲ್ಲಿರುವ ಸರ್ಕಾರಿ ಐಟಿಐ ಕಾಲೇಜು ಸೇರಿದಂತೆ ಇತರೆ ತಾಂತ್ರಿಕ ಸಂಸ್ಥೆಗಳ ಅಭಿವೃದ್ದಿಗೆ ಒತ್ತು ನೀಡಲಾಗುತ್ತಿದೆ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದೆ ಎಂದರು.

ಕಲಬುರಗಿ ಜಿಲ್ಲೆಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿಯಾಗಿವೆ. ಜಿಮ್ಸ್, ಜಯದೇವ ಸಂಸ್ಥೆಯ ವಿಸ್ತರಣೆ, ಟ್ರಾಮಾ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ಜೊತೆಗೆ ತಾಯಿ ಮತ್ತು ಮಗು ಆಸ್ಪತ್ರೆ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ. ರಾಜ್ಯ ಸರ್ಕಾರದ ಐದನೆಯ ಗ್ಯಾರಂಟಿ ಯೋಜನೆ, ಯುವನಿಧಿ ಯನ್ನು ಜನೇವರಿ 12 ರಂದು ವಿವೇಕಾನಂದ ಜಯಂತಿಯ ದಿನದಂದು ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಇತರರಿಗೆ ಬೆಳ್ಳಿ ಪದಕ ಹಾಗೂ ಕಂಚಿನ ಪದಕ ನೀಡಿ ಗೌರವಿಸಲಾಯಿತು.

ವೇದಿಕೆಯ ಮೇಲೆ ಶಾಸಕರಾದ ಕನೀಜ್ ಫಾತೀಮಾ ಹಾಗೂ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ರವೀಂದ್ರನಾಥ ಬಾಳಿ, ವಿಜಯಕುಮಾರ ಕಲ್ಮಣಕರ್ ಸೇರಿದಂತೆ ಹಲವರಿದ್ದರು.