ಮನೆ ಕಾನೂನು ಎಲ್​ಐಸಿ ಐಪಿಒ: ಮಧ್ಯಂತರ ಪರಿಹಾರ ಅರ್ಜಿ ತಿರಸ್ಕರಿಸಿದ ಸುಪ್ರೀಂ

ಎಲ್​ಐಸಿ ಐಪಿಒ: ಮಧ್ಯಂತರ ಪರಿಹಾರ ಅರ್ಜಿ ತಿರಸ್ಕರಿಸಿದ ಸುಪ್ರೀಂ

0

ನವದೆಹಲಿ(New Delhi): ಭಾರತೀಯ ಜೀವ ವಿಮಾ ನಿಗಮ (ಎಲ್​ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ)ಗೆ ಸಂಬಂಧಿಸಿದಂತೆ ಮಧ್ಯಂತರ ಪರಿಹಾರ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಇದೇ ವೇಳೆ, ಹಣಕಾಸು ಕಾಯ್ದೆ-2021 ಮತ್ತು ಎಲ್‌ಐಸಿ ಕಾಯಿದೆ 1956ರ ಕೆಲವು ಸೆಕ್ಷನ್‌ಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸುವ ಅರ್ಜಿಗಳ ಮೇಲೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.

ಎಲ್​ಐಸಿ ಐಪಿಒ ವಿರುದ್ಧದ ರಿಟ್ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಬುಧವಾರ ಒಪ್ಪಿಗೆ ನೀಡಿತ್ತು. ರಿಟ್ ಅರ್ಜಿಯನ್ನು ಎಲ್​ಐಸಿಯಲ್ಲಿ ಪಾಲಿಸಿದಾರರಾದ ಮತ್ತು ಪೀಪಲ್​​ ಫಸ್ಟ್​ ಎಂಬ ಸರ್ಕಾರೇತರ ಸಂಸ್ಥೆಯ ಜಂಟಿ ಸಂಚಾಲಕ ರಾಜೇಂದ್ರ ದೇವ್ ಸಲ್ಲಿಸಿದ್ದರು.ಎಲ್​ಐಸಿ ಐಪಿಒ ಪ್ರಕ್ರಿಯೆ ಮುಗಿದಿದ್ದು, ಕೇಂದ್ರ ಸರ್ಕಾರ ಮತ್ತು ಎಲ್​ಐಸಿ ಸಂಸ್ಥೆಗಳು ಮಾರುಕಟ್ಟೆ ನಿಯಂತ್ರಣ ಸಂಸ್ಥೆಗಳಾದ ಸೆಬಿ, ಐಆರ್‌ಡಿಎಐ ಸೇರಿದಂತೆ ಹಲವಾರು ಸಂಸ್ಥೆಗಳಿಗೆ ಐಪಿಒ ಪ್ರಕ್ರಿಯೆಯನ್ನು ರದ್ದುಗೊಳಿಸಲು ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದರು.

ಏನಿದು ಮಧ್ಯಂತರ ಪರಿಹಾರ?: ಮಧ್ಯಂತರ ಪರಿಹಾರವೆಂದರೆ, ನ್ಯಾಯಾಲಯವು ಎಲ್​ಐಸಿ ಐಪಿಒ ಕುರಿತಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೆ ಅರ್ಜಿಗೆ ಸಹಾಯವಾಗಿ ನಿಲ್ಲುವುದಾಗಿದೆ. ಅರ್ಜಿಯ ವಿಚಾರಣೆಯಿಂದ ಹಿಡಿದು, ತೀರ್ಪು ಬರುವವರಿಗೆ ಅರ್ಜಿಗೆ ಸಹಕಾರಿಯಾಗಿರುವುದೇ ಮಧ್ಯಂತರ ಪರಿಹಾರ. ಈಗ ಎಲ್​ಐಸಿ ಐಪಿಒ ವಿಚಾರವಾಗಿ ಮಧ್ಯಂತರ ಪರಿಹಾರ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.