ಮನೆ ಕಾನೂನು ಮತದಾರರಿಗೆ 1 ಲಕ್ಷ ಆಮಿಷ: ನೀತಿ ಸಂಹಿತೆ ಉಲ್ಲಂಘನೆ- ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ವಿರುದ್ಧ...

ಮತದಾರರಿಗೆ 1 ಲಕ್ಷ ಆಮಿಷ: ನೀತಿ ಸಂಹಿತೆ ಉಲ್ಲಂಘನೆ- ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ವಿರುದ್ಧ ದೂರು

0

ಬೆಂಗಳೂರು : ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ, ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ & ಸಹಚರರ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಮತದಾರರ ಆಧಾರ್ ಕಾರ್ಡ್ ಪಡೆದು1 ಲಕ್ಷ ರೂ, ಬಾಂಡ್ ನೀಡುವುದಾಗಿ ಆಮಿಷ ಒಡ್ಡುತ್ತಿರುವ ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಏಜೆಂಟ್ ಆಗಿರುವ ಗಜೇಂದ್ರ ಎಸ್ ರವರು ದೂರು ನೀಡಿದ್ದು, ಕಾಂಗ್ರೆಸ್ ನ ಈ ಕೃತ್ಯ ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ.

Join Our Whatsapp Group

ಈ ಕೃತ್ಯಕ್ಕೆ ಸಂಬಂಧಿಸಿದ ಫೋಟೋ ಗಳನ್ನು ದೂರಿನೊಂದಿಗೆ ಲಗತ್ತಿಸಿ, ” ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ರವರು, ಮತದಾರರ ಮೇಲೆ ಪ್ರಭಾವ ಬೀರಲು ಅವರ ಆಧಾರ್ ಕಾರ್ಡ್ ಗಳನ್ನು ಪಡೆದುಕೊಂಡು ಗ್ಯಾರಂಟಿ ಕಾರ್ಡ್ ನೀಡುತ್ತಿದ್ದು, ಚುನಾವಣೆ ಆದ ನಂತರ 1 ಲಕ್ಷ ರೂ, ಬಾಂಡ್ ಒದಗಿಸುವುದಾಗಿ ಆಮಿಷ ಒಡ್ಡುತ್ತಿರುವ ಕ್ರಮ ಮಾದರಿ ನೀತಿ ಸಂಹಿತೆ IPC 1860 & ಜನ ಪ್ರತಿನಿಧಿ ಕಾಯ್ದೆ 1951 ಅನ್ವಯ ಗಂಭೀರ ಅಪರಾಧವಾಗಿದೆ” ಎಂದು ತಿಳಿಸಿದ್ದಾರೆ.

ಮುಂದುವರೆದಂತೆ, ” ದಿನಾಂಕ 17.04.2024 ರಂದು ಕಾಂಗ್ರೆಸ್ ನ ಮಂಜುನಾಥ ರೆಡ್ಡಿ & ಇತರರು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ರವರ ಸೂಚನೆ ಅನ್ವಯ, ಬಿಟಿಎಂ ವಿಧಾನಸಭಾ ಕ್ಷೇತ್ರದ ಅರ್ಥಿಕವಾಗಿ ಹಿಂದುಳಿದ ಕುಟುಂಬಗಳ ಬಳಿ ತೆರಳಿ ಆಧಾರ್ ಕಾರ್ಡ್ & ಇತರ ದಾಖಲೆ ಒದಗಿಸಿದರೆ ಚುನಾವಣೆ ಮುಗಿದ ನಂತರ 1 ಲಕ್ಷ ರೂ, ಬಾಂಡ್ ಗ್ಯಾರಂಟಿ ಕಾರ್ಡ್ ನೀಡುವುದಾಗಿ ಮತದಾರರ ಮೇಲೆ ಪ್ರಭಾವ ಬೀರುವ ಮೂಲಕ ಕಾನೂನನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಈ ಕುರಿತಾಗಿ ಫೋಟೋ & ವಿಡಿಯೋ ದಾಖಲೆಗಳನ್ನು ಲಗತ್ತಿಸಲಾಗಿದೆ.

ಈ ರೀತಿಯ ಕೃತ್ಯಗಳು, ಮಾದರಿ ನೀತಿ ಸಂಹಿತೆಯ CLAUSE 2.(1) ರ ಸ್ಪಷ್ಟ ಉಲ್ಲಂಘನೆ ಯಾಗಿದ್ದು, ಮತಕ್ಕೋಸ್ಕರ ಆಮಿಷ ಒಡ್ಡುತ್ತಿರುವ ಕ್ರಮ IPC ಸೆಕ್ಷನ್ 123 ಯ ಉಲ್ಲಂಘನೆ ಕೂಡ ಆಗಿದೆ ” ಎಂದು ವಿವರಿಸಿದರು.

ಮತದಾನಕ್ಕೂ ಮುಂಚೆ ಈ ರೀತಿಯ ಸಹಿ ಮಾಡಿದ ಗ್ಯಾರಂಟಿ ಕೊಡುಗೆಗಳು, ಮತಕ್ಕಾಗಿ ಲಂಚ ವೆಂದು ಪರಿಗಣಿಸಿ, ಸಂಬಂಧಿಸಿದ ಕಾಂಗ್ರೆಸ್ ಅಭ್ಯರ್ಥಿ, ಏಜೆಂಟರು & ಸಹಚರರ ವಿರುದ್ಧ FIR ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಇದೇ ತಿಂಗಳ 13ರಂದು ಜಯನಗರದಲ್ಲಿ ಚುನಾವಣಾ ಆಯೋಗವು 1.34 ಕೋಟಿ ವಶಪಡಿಸಿಕೊಂಡ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ತೇಜಸ್ವೀ ಸೂರ್ಯ ರವರು, ಕಾಂಗ್ರೆಸ್ ಲಂಚ ನೀಡಿ ಚುನಾವಣಾ ಅಕ್ರಮಗಳನ್ನು ನಡೆಸುತ್ತಿದ್ದು, ದುಡ್ಡು ಸಾಗಿಸುತ್ತಿದ್ದ ವಾಹನಗಳು ಕಾಂಗ್ರೆಸ್ ನ ಮುಖಂಡರಿಗೆ ಸೇರಿದ್ದಾಗಿದೆ ಎಂದು ಆರೋಪಿಸಿದ್ದರು.