ಮನೆ ಸ್ಥಳೀಯ ಜನಾಕರ್ಷಿಸಲಿವೆ ವಿಶೇಷ ಮತಗಟ್ಟೆಗಳು

ಜನಾಕರ್ಷಿಸಲಿವೆ ವಿಶೇಷ ಮತಗಟ್ಟೆಗಳು

0

ಮೈಸೂರು: ಯುವ, ಸಖಿ, ವಿಶೇಷಚೇತನ, ಮಾದರಿ ಹಾಗೂ ವಿಷಯದಾರಿತ ಮತಗಟ್ಟೆಗಳು ಈ ಬಾರಿ ವಿವಿಧ ರೀತಿಯಲ್ಲಿ ಮತದಾರರ ಕೈ ಬೀಸಿ ಕರೆಯಲಿವೆ.

Join Our Whatsapp Group

ಜಿಲ್ಲಾ ಸ್ವೀಪ್ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ 11 ಕ್ಷೇತ್ರಗಳಲ್ಲಿ 2915 ಮತಗಟ್ಟೆಗಳ ಪೈಕಿ 99 ಮತಗಟ್ಟೆಗಳು ಈ ಬಾರಿ ನಾನಾ ರೀತಿಯಲ್ಲಿ ಕಂಗೊಳಿಸಲಿವೆ. 55 ಸಖಿ ಬೂತ್, 11 ವಿಶೇಷಚೇತನರ ಮತಗಟ್ಟೆ, 11 ಯುವ ಮತಗಟ್ಟೆ, 12 ಸಾಂಪ್ರಾದಾಯಿಕ ಮತಗಟ್ಟೆ ಮತ್ತು 10 ಮಾದರಿ ಮತಗಟ್ಟೆಗಳನ್ನು ರೂಪಿಸಲಾಗಿದೆ. ಒಂದೊಂದು ಮತಗಟ್ಟೆಗಳು ನಾನಾ ವಿಧಗಳಲ್ಲಿ ಜನಾಕರ್ಷಿಸಲಿವೆ.
2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಮತದಾರರನ್ನು ಸೆಳೆಯಲು ಮತಗಟ್ಟೆಗಳನ್ನು ಆಕರ್ಷಕ ರೀತಿಯಲ್ಲಿ ರೂಪಿಸಲಾಗುತ್ತಿದೆ.

ಮಹಿಳಾ ಮತದಾರರ ಸಂಖ್ಯೆ ಹೆಚ್ಚು ಇರುವ ಮತಗಟ್ಟೆಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಸಖೀ ಮತಗಟ್ಟೆ, ವಿಶೇಷಚೇತನ ಮತದಾರರ ಸಂಖ್ಯೆ ಹೆಚ್ಚು ಇರುವಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 1 ವಿಶೇಷಚೇತನ ಮತಗಟ್ಟೆ, ಹೆಚ್ಚು ಯುವ ಮತದಾರರನ್ನು ಹೊಂದಿರುವಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಯುವ ಮತದಾರರ ಮತಗಟ್ಟೆ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗಿ ಆಕರ್ಷಕವಾಗಿರುವ 1 ವಿಷಯಾಧಾರಿತ ಮತಗಟ್ಟೆ ಹಾಗೂ ಗಿರಿಜನ ಮತದಾರರ ಸಂಖ್ಯೆ ಹೆಚ್ಚು ಇರುವ ಹುಣಸೂರು 4, ಪಿರಿಯಾಪಟ್ಟಣ ಮತ್ತು ಹೆಚ್.ಡಿ.ಕೋಟೆ ತಾಲ್ಲೂಕುಗಳಲ್ಲಿ ತಲಾ 3 ರಂತೆ ಸಾಂಪ್ರಾದಾಯಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.

55 ಸಖಿ ಮತಗಟ್ಟೆ
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 5 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮತಗಟ್ಟೆಗಳನ್ನು ವಿವಿಧ ಬಣ್ಣ ಹಾಗೂ ಚಿತ್ತಾಕರ್ಷಕ ಗೋಡೆ ಬರಹಗಳ ಮೂಲಕ ಮಹಿಳೆಯ ಸಾಮರ್ಥ್ಯ, ಸಬಲೀಕರಣ ಮತ್ತು ಮತದಾನದ ಪ್ರಾಮುಖ್ಯತೆಗಳನ್ನು ತಿಳಿಸುತ್ತಾ ಮತದಾನ ಜಾಗೃತಿ ಸಂದೇಶಗಳನ್ನು ಬಿತ್ತರಿಸಲು ವಿಶೇಷವಾಗಿ ಮತಗಟ್ಟೆ ನಿರ್ಮಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಶೇ.50 ಕ್ಕಿಂತ ಹೆಚ್ಚಿರುವುದರಿಂದ ಈ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಮತಗಟ್ಟೆ ಅಧಿಕಾರಿಗಳು, ಪೋಲಿಸ್ ಸಿಬ್ಬಂದಿ ಮತ್ತು ಸ್ವಯಂ ಸೇವಕರು ಮಹಿಳೆಯರಾಗಿರುವುದು ವಿಶೇಷವಾಗಿರುತ್ತದೆ.

ಪಿರಿಯಾಪಟ್ಟಣದಲ್ಲಿ 5, ಕೆ.ಆರ್.ನಗರದಲ್ಲಿ 5, ಹುಣಸೂರಿನಲ್ಲಿ 5, ಹೆಚ್.ಡಿ.ಕೋಟೆಯಲ್ಲಿ 5, ನಂಜನಗೂಡಿನಲ್ಲಿ 5, ಟಿ.ನರಸೀಪುರದಲ್ಲಿ 5, ವರುಣಾ ಕ್ಷೇತ್ರದಲ್ಲಿ 5, ಚಾಮುಂಡೇಶ್ವರಿ ಕ್ಷೇತ್ರದಲ್ಲಿ 5, ಕೃಷ್ಣರಾಜ ಕ್ಷೇತ್ರದಲ್ಲಿ 5, ಚಾಮರಾಜ ಕ್ಷೇತ್ರದಲ್ಲಿ 5, ನರಸಿಂಹರಾಜ ಕ್ಷೇತ್ರದಲ್ಲಿ 5 ಸಖಿ ಮತಗಟ್ಟೆಗಳು ಮತಗಟ್ಟೆಗಳು ಜನರನ್ನು ಆಕರ್ಷಿಸಲಿವೆ. ಗುಲಾಬಿ ಬಣ್ಣದಲ್ಲಿ ಪ್ರಕೃತಿಯೊಂದಿಗೆ ಮಹಿಳೆಯ ಚಿತ್ರ ಬಿಡಿಸುವ ಮೂಲಕ ಮತದಾನ ಕುರಿತು ಜಾಗೃತಿ ಮೂಡಿಸಲಾಗುವುದು. ಮಾತ್ರವಲ್ಲದೇ ಮತದಾನದ ದಿನ ಸಖಿ ಮತಗಟ್ಟೆಯಲ್ಲಿ ಮಹಿಳಾ ಚುನಾವಣಾಧಿಕಾರಿಗಳೇ ಕಾರ್ಯನಿರ್ವಹಿಸುವುದು ವಿಶೇಷವಾಗಿದೆ.

ವಿಶ್ವಾಸ ತುಂಬುವ ವಿಶೇಷ ಚೇತನರ ಮತಗಟ್ಟೆ ವಿಶೇಷಚೇತನರು ಸಹ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಚುನಾವಣಾ ಆಯೋಗ ರ್ಯಾಂಪ್ ವ್ಯವಸ್ಥೆ, ವೀಲ್ ಚೇರ್, ಸಹಾಯಕರ ನಿಯೋಜನೆ, ಅಂಧ ಮತದಾರರಿಗೆ ಬೃೈಲ್ ಲಿಪಿಯಲ್ಲಿ ಸಿದ್ದಪಡಿಸಿರುವ ಮಾದರಿ ಮತಪತ್ರದ ಪ್ರದರ್ಶನ ಹಾಗೂ ಅದರ ವಿವರಣೆಯ ಆಡಿಯೋ ಮತಗಟ್ಟೆಗಳಲ್ಲಿ ಲಭ್ಯವಿರುತ್ತದೆ.

ಭಾಗಶಃ ಅಂಧತ್ವ ಹೊಂದಿರುವ ಮತದಾರರಿಗೆ ಮ್ಯಾಗ್ನಿಫೈಡ್ ಲೆನ್ಸ್ ಬಳಸಿ ಮತದಾನ ಮಾಡುವ ಸೌಲಭ್ಯ ದೊರಕುತ್ತದೆ. ಕಿವುಡ ಮತ್ತು ಮೂಗ ಮತದಾರರಿಗೆ ಸಂಜ್ಞೆ ಭಾಷೆ ಬಳಸಿ ಮತದಾನ ಮಾಡುವ ವಿಧಾನದ ಬಗ್ಗೆ ಸಹಾಯಕರು ಲಭ್ಯವಿರುತ್ತಾರೆ.
ವಿಶೇಷಚೇತನರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ 11 ಕ್ಷೇತ್ರಗಳಲ್ಲಿ 11 ವಿಶೇಷಚೇತನ ಸ್ನೇಹಿ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ವಿವಿಧ ಬಣ್ಣಗಳಿಂದ ಅವರಿಗೆ ತಿಳಿಯುವಂತೆ ವೀಲ್ ಚೇರ್, ಸನ್ನೆಯ ಚಿತ್ತಾರ ಹಾಗೂ ಮತದಾನ ಮಾಡುವ ಚಿತ್ರಗಳನ್ನು ಬರೆದು ಮತಗಟ್ಟೆಯನ್ನು ಅಲಂಕರಿಸಲಾಗಿದೆ.

ಪಿರಿಯಾಪಟ್ಟಣದ ಬೈಲುಕುಪ್ಪೆ ಸ.ಹಿ.ಪ್ರಾ.ಶಾಲೆ, ಕೆ.ಆರ್.ನಗರ ತಾಲ್ಲೂಕಿನ ಚಂದಗಾಲು ವ್ಯಾಪ್ತಿಯ ಸ.ಹಿ.ಪ್ರಾ ಶಾಲೆ, ಹುಣಸೂರು ಪಟ್ಟಣದಲ್ಲಿರುವ ಸರ್ಕಾರಿ ಬಾಲಕರ ಪಿಯು ಕಾಲೇಜು, ಹೆಚ್.ಡಿ.ಕೋಟೆಯ ಹೈರಿಗೆ ವ್ಯಾಪ್ತಿಯ ಸ.ಹಿ.ಪ್ರಾ ಶಾಲೆ, ನಂಜನಗೂಡಿನ ಚಿನ್ನಗುಂದಿ ಹುಂಡಿ ಸ.ಹಿ.ಪ್ರಾ.ಶಾಲೆ, ಟಿ.ನರಸೀಪುರ ತಾಲ್ಲೂಕಿನ ಸರ್ಕಾರಿ ಪಿಯು ಕಾಲೇಜು (ಪ್ರೌಢಶಾಲೆ ವಿಭಾಗ), ವರುಣಾ ಕ್ಷೇತ್ರದ ಕೆಂಪಸಿದ್ದನಹುಂಡಿ ಸ.ಹಿ.ಪ್ರಾ.ಶಾಲೆ, ಚಾಮುಂಡೇಶ್ವರಿ ಕ್ಷೇತ್ರದ ಶೆಟ್ಟಿನಾಯಕನಹಳ್ಳಿ ಸ.ಹಿ.ಪ್ರಾ ಶಾಲೆ, ಕೃಷ್ಣರಾಜ ಕ್ಷೇತ್ರದ ನಾಚನಹಳ್ಳಿ ಪಾಳ್ಯ ಜೆಎಸ್ ಎಸ್ ಪ್ರೌಢಶಾಲೆ, ಚಾಮರಾಜ ಕ್ಷೇತ್ರದ ಮೇಟಗಳ್ಳಿ ವ್ಯಾಪ್ತಿಯ ಜೆಎಸ್ ಎಸ್ ಪ್ರೌಢಶಾಲೆ ಮತ್ತು ನರಸಿಂಹರಾಜ ಕ್ಷೇತ್ರದ ಕೆಸರೆಯ ಪಿಯು ಕಾಲೇಜುಗಳಲ್ಲಿ ವಿಶೇಷಚೇತನರಿಗೆ ವಿಶೇಷ ಮತಗಟ್ಟೆ ತೆರೆದಿದ್ದು, ವಿಶೇಷ ಆಸಕ್ತಿ ವಹಿಸಿ ಅಲಂಕಾರ ಮಾಡಿರುವುದು, ಗ್ರಾಮಸ್ಥರು, ಮತದಾರರನ್ನು ತನ್ನತ್ತ ಸೆಳೆಯುತ್ತಿವೆ.

ಯುವ ಮತಗಟ್ಟೆಗಳು ಹೆಚ್ಚಿನ ಸಂಖ್ಯೆಯ ಯುವ ಮತದಾರರು ಇರುವ ಮತಗಟ್ಟೆಗಳನ್ನು ಯುವ ಮತಗಟ್ಟೆಗಳನ್ನಾಗಿ ತೆರೆಯಲಾಗಿದೆ.

ಪ್ರಜಾಪ್ರಭುತ್ವದ ಹಬ್ಬದಲ್ಲಿ ಮೊದಲ ಬಾರಿಗೆ ಮತದಾನ ಮಾಡುವ ನವ ಯುವ ಮತದಾರರನ್ನು ಸೆಳೆಯಲು ಮತಗಟ್ಟೆಗಳನ್ನು ಆಕರ್ಷಣೀಯವಾಗಿ ನಿರ್ಮಿಸಿ, ಮತಗಟ್ಟೆಯಲ್ಲಿ ಸೆಲ್ಫಿ ಬೂತ್ ಸ್ಥಾಪಿಸಲಾಗಿದೆ. ಮೊದಲ ಬಾರಿಗೆ ಮತದಾನ ಮಾಡಲು ಆಗಮಿಸುವವರನ್ನು ವಿವಿಧ ರೀತಿಯಲ್ಲಿ ಸ್ವಾಗತಿಸಿ ಅವರ ಮೊದಲ ಅನುಭವವನ್ನು ಅವಿಸ್ಮರಣೀಯನ್ನವನ್ನಾಗಿಸಲು ಜಿಲ್ಲಾಡಳಿತ ಸಜ್ಜಾಗಿದೆ.

ಪಿರಿಯಾಪಟ್ಟಣದ ಕಂಪಲಾಪುರದ ಸ.ಹಿ.ಪ್ರಾ.ಶಾಲೆ, ಕೆ.ಆರ್.ನಗರದ ಸಾಲಿಗ್ರಾಮದ ಪ್ರಿ ಮೆಟ್ರಿಕ್ ಹಾಸ್ಟೆಲ್, ಹುಣಸೂರಿನ ಹಳೇಬೀಡು ವ್ಯಾಪ್ತಿಯ ಸ.ಹಿ.ಪ್ರಾ ಶಾಲೆ, ಹೆಚ್.ಡಿ.ಕೋಟೆಯ ನಂಜನಾಯಕನಹಳ್ಳಿಯ ಸ.ಹಿ.ಪ್ರಾ ಶಾಲೆ, ನಂಜನಗೂಡಿನ ದೇವಿರಮ್ಮನಹಳ್ಳಿಯ ಸ.ಹಿ.ಪ್ರಾ.ಶಾಲೆ, ಟಿ.ನರಸೀಪುರದ ಕಲಿಯೂರು ವ್ಯಾಪ್ತಿಯ ಸ.ಹಿ.ಪ್ರಾ ಶಾಲೆ, ವರುಣಾ ಕ್ಷೇತ್ರದ ಲಲಿತಾದ್ರಿಪುರಂನ ಸ.ಹಿ.ಪ್ರಾ.ಶಾಲೆ, ಚಾಮುಂಡೇಶ್ವರಿ ಕ್ಷೇತ್ರ ಉದ್ಬೂರು ವ್ಯಾಪ್ತಿಯ ಸ.ಹಿ.ಪ್ರಾ.ಶಾಲೆ, ಕೃಷ್ಣರಾಜ ಕ್ಷೇತ್ರದ ಊಟಿ ರಸ್ತೆಯ ಜೆಎಸ್ ಎಸ್ ಕಾಲೇಜು, ಚಾಮರಾಜ ಕ್ಷೇತ್ರದ ಮಂಡಿಮೊಹಲ್ಲಾದ ವಿದ್ಯಾವರ್ದಕ ಕಾನೂನು ಕಾಲೇಜು, ನರಸಿಂಹರಾಜ ಕ್ಷೇತ್ರದ ಯರಗನಹಳ್ಳಿಯ ಮೌಲನಾ ಅಜಾದ್ ರೆಸಿಡೆನ್ಸಿಯಲ್ ಬಾಲಕಿಯರ ಶಾಲೆಯ ಮತಗಟ್ಟೆಗಳಲ್ಲಿ ಯುವ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ನಾನಾ ರೀತಿ ವಿಭಿನ್ನ ಪ್ರಯತ್ನ ನಡೆಸಿದೆ.
ಸಾಂಪ್ರಾದಾಯಿಕ ಮತಗಟ್ಟೆ: ಗಿರಿಜನ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಮತಗಟ್ಟೆಗಳನ್ನು ಸ್ಥಾಪಿಸಿ ಈ ಮತಗಟ್ಟೆಗಳನ್ನು ಸ್ಥಳೀಯರು ಬಳಕೆ ಮಾಡುವ ಸಾಮಗ್ರಿಗಳು ಹಾಗೂ ಪ್ರಾಕೃತಿಕವಾಗಿ ದೊರೆಯುವ ವಸ್ತುಗಳನ್ನು ಬಳಕೆ ಮಾಡಿಕೊಂಡು ಮತಗಟ್ಟೆಗಳನ್ನು ಸ್ಥಳೀಯರ ಸಂಪ್ರಾದಾಯ ಹಾಗೂ ಆಚರಣೆಗಳನ್ನು ಪ್ರತಿಬಿಂಬಿಸುವ ಪ್ರತಿಕೃತಿಗಳೊಂದಿಗೆ ಚಿತ್ತಾಕರ್ಷಕವಾಗಿ ಮನಸೆಳೆಯುವಂತೆ ಸಿಂಗರಿಸಿ, ಮತದಾರರನ್ನು ಮತದಾನಕ್ಕೆ ಪ್ರೇರೇಪಿಸುವ ಮೂಲಕ ಮತದಾರರನ್ನು ಕೈಬೀಸಿ ಕರೆಯುತ್ತಿದೆ.

ಪಿರಿಯಾಪಟ್ಟಣದ ಮುತ್ತೂರು ಕಾಲೋನಿಯ ಸ.ಹಿ.ಪ್ರಾ.ಶಾಲೆ, ಅಬ್ಬಲತ್ತಿಯ ಸರ್ಕಾರಿ ಗಿರಿಜನ ಆಶ್ರಮ ಶಾಲೆ ಮತ್ತು ರಾಣಿಗೇಟ್ನ ಸರ್ಕಾರಿ ಗಿರಿಜನ ಆಶ್ರಮ ಶಾಲೆ, ಹುಣಸೂರಿನ ಶೆಟ್ಟಿಹಳ್ಳಿಯ ಗಿರಿಜನ ಎಡಿಎಲ್ ಆಶ್ರಮ ಶಾಲೆ, ನಾಗಪುರ ಆಶ್ರಮ ಶಾಲೆ, ಉಮತ್ತೂರು ಗಿರಿಜನ ಆಶ್ರಮ ಶಾಲೆ ಮತ್ತು ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜು, ಹೆಚ್.ಡಿ.ಕೋಟೆಯ ಬಸವನಗಿರಿಯ ಸರ್ಕಾರಿ ಗಿರಿಜನ ಆಶ್ರಮ ಶಾಲೆ, ಪೆಂಜಹಳ್ಳಿ ಕಾಲೋನಿಯ ಸರ್ಕಾರಿ ಗಿರಿಜನ ಆಶ್ರಮ ಶಾಲೆ, ಭೀಮನಹಳ್ಳಿ ಸರ್ಕಾರಿ ಗಿರಿಜನ ಆಶ್ರಮ ಶಾಲೆಯಲ್ಲಿ ಸಾಂಪ್ರಾದಾಯಿಕ ಮತಗಟ್ಟೆಗಳು ಜನಾಕರ್ಷಿಸಲಿವೆ.

2024 ಲೋಕಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲಾಡಳಿತವು ಮೈಸೂರು ಲೋಕಸಭಾ ಕ್ಷೇತ್ರದ ಮತದಾನಕ್ಕೆ ಪೂರ್ಣಪ್ರಮಾಣದಲ್ಲಿ ಸಿದ್ದರಿದ್ದು, ಮತದಾರರ ಪಟ್ಟಿಯಲ್ಲಿ ನೊಂದಾಯಿಸಿರುವ ಎಲ್ಲಾ ಮತದಾರರು ತಪ್ಪದೇ 26 ನೇ ಏಪ್ರಿಲ್ 2024 ರ ಶುಕ್ರವಾರದಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ನಡೆಯುವ ಪ್ರಜಾಪ್ರಭುತ್ವದ ದೊಡ್ಡ ಹಬ್ಬವಾದ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಪ್ಪದೇ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿ ಸದೃಢ ದೇಶ ನಿರ್ಮಾಣ ಮಾಡಲು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಲು ಮನವಿ ಮಾಡಿದೆ.