ಮನೆ ಸ್ಥಳೀಯ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆಯಿಂದ ಕಾರ್ಯನಿರ್ವಹಿಸಿ: ಡಾ ಕೆ.ವಿ.ರಾಜೇಂದ್ರ

ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆಯಿಂದ ಕಾರ್ಯನಿರ್ವಹಿಸಿ: ಡಾ ಕೆ.ವಿ.ರಾಜೇಂದ್ರ

0

ಮೈಸೂರು: ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆಯಾಗಿ ಕ್ರಮ ಕೈಗೊಂಡು ಅಧಿಕಾರಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿಗಳಾದ   ಡಾ. ಕೆ.ವಿ.ರಾಜೇಂದ್ರ ಅವರು ಸೂಚಿಸಿದರು.

Join Our Whatsapp Group

ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಕೇಸ್ವಾನ್ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ  ಜಿಲ್ಲಾ ವಿಪತ್ತು ಪ್ರಾಧಿಕಾರ ಸಭೆ ನಡೆಸಿ ಮಾತನಾಡಿದರು.

ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ  ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ಎಲ್ಲಾ ತಹಶೀಲ್ದಾರ್ ಗಳು , ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು‌ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರತಿದಿನ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ನೀರಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮ ವಹಿಸಬೇಕು ಎಂದರು.

ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅನುದಾನದ ಕೊರತೆ ಇಲ್ಲ ಸಮರ್ಪಕ ಹಾಗೂ ಸಮನ್ವಯವಾಗಿ ಕಾರ್ಯನಿರ್ವಹಿಸಬೇಕು.  ಖಾಸಗಿ ಬೋರ್ ವೆಲ್ ಗಳಲ್ಲಿ ನೀರು ವೆಚ್ಚದ ಬಿಲ್ಲುಗಳನ್ನು ವಿಪತ್ತು ನಿರ್ವಹಣೆಯಡಿ ಪಾವತಿಸಲಾಗುವುದು. ಹಾಗಾಗಿ ಅವಶ್ಯಕತೆ ಇರುವಷ್ಟು ಹೆಚ್ಚು ಖಾಸಗಿ ಬೊರ್ವೇಲ್ ಗಳನ್ನು ಪಡೆದು ಜನರಿಗೆ ಕುಡಿಯುವ ನೀರಿನ ಪೂರೈಕೆ ಮಾಡಬೇಕು ಎಂದು ತಿಳಿಸಿದರು.

ಪ್ರಸ್ತುತ 26 ಸಮಸ್ಯಾತ್ಮಕ ಗ್ರಾಮಗಳಿಗೆ ಖಾಸಗಿ ಬೋರ್ವೆಲ್ ಗಳ ಮೂಲಕ ನೀರನ್ನು ಪೂರೈಕೆ ಮಾಡಲಾಗುತ್ತಿದ್ದು ಅಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ.  ಮುಂಬರುವ ದಿನಗಳಲ್ಲಿ ಮಳೆಯಾಗುವ ಸಾಧ್ಯತೆಗಳಿದ್ದು, ಒಂದುವೇಳೆ ಮಳೆಯಾಗದಿದ್ದರೆ ಸುಮಾರು 113 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸಲಿವೆ. ಇದಕ್ಕೆ ಮುಂಜಾಗ್ರತ ಕ್ರಮವಾಗಿ ಅಗತ್ಯವಿರುವಷ್ಟು ಖಾಸಗಿ ಬೊರ್ವೇಲ್ ಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಇದರಿಂದ ಬರವನ್ನು   ಪರಿಣಾಮಕಾರಿಯಾಗಿ  ನಿರ್ವಹಣೆ ಮಾಡಲು  ಅಧಿಕಾರಿಗಳು ಮುಂದಾಗಬೇಕುಎಂದರು.

ಬರಗಾಲದಲ್ಲಿ ಕೆರೆಗಳು ಪ್ರಮುಖ ಪಾತ್ರವಹಿಸಲಿದ್ದು, ಜಿಲ್ಲೆಯಾದ್ಯಂತ ಇರುವ ಕೆರೆಗಳ ಮಾಹಿತಿ ಹಾಗೂ ಹೂಳೆತ್ತುವ ಕೆಲಸ ಆಗಬೇಕು. ಅಲ್ಲದೆ ಒತ್ತುವರಿ ಆಗಿರುವ ಕೆರೆಗಳ ಪಟ್ಟಿಮಾಡಿ ಒತ್ತುವರಿಯೇ ಅಥವಾ ಇಲ್ಲವೇ ಎಂಬುದರ ಮಾಹಿತಿ ಪಡೆದು, ಒತ್ತುವರಿ ಆಗದೆ ಇರುವ ಕೆರೆಗಳಿಗೆ ಫೆನ್ಸ್ ಹಾಕಲಾಗಿದ್ದಿಯಾ ಹಾಗೂ ಇತರೆ  ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಕೆರೆಯಲ್ಲಿ ಹೂಳೆತ್ತುವ  ಮೂಲಕ ಸಿಗುವ ಮಣ್ಣು ಮೂಲಸೌಕರ್ಯ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ. ಹಾಗಾಗಿ ದೊಡ್ಡ ಮಟ್ಟದಲ್ಲಿ ಹೂಳೆತ್ತುವ  ಕೆರೆಗಳಿಂದ ಮಣ್ಣನ್ನು ಉಪಯೋಗಿಸಿಕೊಳ್ಳಬಹುದು ಇದನ್ನು ರೈತರು ಸಹ ಬಳಸಿಕೊಳ್ಳಬಹುದು ಎಂದು ಎಂದರು.

ತಾಲ್ಲೂಕುವಾರು ಸ್ಥಳೀಯ ರೈತ ಮುಖಂಡರ ಸಭೆ ಕರೆದು ಕುಡಿಯುವ ನೀರಿನ ಸಮಸ್ಯೆ ಹಾಗೂ  ಜಾನುವಾರುಗಳಿಗೆ ಮೇವಿನ ತೊಂದರೆ, ಗೋ ಶಾಲೆಗಳ ಅಗತ್ಯತೆಗಳ ಬಗ್ಗೆ ಅವರಿಂದ ದೂರು ಪಡೆದು ಅದನ್ನು ಬಗೆಹರಿಸಲು ಮುಂದಾಗಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಅನುಮತಿ ಇಲ್ಲದೆ ಖಾಸಗಿ ಬೋರ್ವೆಲ್ ಕೊರೆಸುತ್ತಿರುವುದು ಕಂಡುಬರುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಅಂತಹವರ ವಿರುದ್ಧ ಕಾನೂನು ರೀತಿಯಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಇದಲ್ಲದೆ ವಿಫಲ ಬೋರ್ವೆಲ್ ಗಳು ಮತ್ತು ಕನೆಕ್ಷನ್ ಕೊಡದೆ ಬಿಟ್ಟ ಬೋರ್ವೆಲ್ ಗಳನ್ನು ತಕ್ಷಣವೇ ಮುಚ್ಚಬೇಕು ಇಲ್ಲವಾದರೆ ಮುಂದೆ ಆಪಾಯ ಎದುರಾಗುತ್ತವೆ. ಹಾಗಾಗಿ ಇದನ್ನು ವೈಯಕ್ತಿಕವಾಗಿ ಪರಿಗಣಿಸಿ ಆದಷ್ಟು ಬೇಗ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸೂಚಿಸಿದರು.

ಸ್ಮಶಾನಗಳು, ಕೆರೆಗಳು, ಇತ್ಯಾದಿ ಸರ್ಕಾರಿ ಜಾಗದ ಮೇಲೆ ಗಮನ ಹರಿಸಿ, ಲ್ಯಾಂಡ್ ಬೀಟ್ ಸಿಸ್ಟಮ್ ಅನ್ನು ಸರಿಯಾದ ರೀತಿಯಲ್ಲಿ ಅಳವಡಿಸಿಕೊಂಡು ಅದರಲ್ಲಿ ಇರುವ ಸರ್ಕಾರಿ ಜಾಗವನ್ನು ಇತ್ಯಾದಿ ಅಗತ್ಯ ಕೆಲಸಗಳಿಗೆ, ಮನೆ ಇಲ್ಲದ ಬಡವರಿಗೆ ನೇರವಾಗುವಂತೆ ನೋಡಿಕೊಳ್ಳಬೇಕು ಎಂದರು.

 ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಜನರಿಗೆ ಕುಡಿಯುವ ನೀರಿನ ಬಗ್ಗೆ  ಪ್ರಸ್ತುತ ಎದುರಿಸುತ್ತಿರುವ ಬರಗಾಲದ ಬಗ್ಗೆ ಜನರಿಗೆ ಅರಿವು ಮೂಡಿಸಿ ಹೆಚ್ಚಾಗಿ ನೀರನ್ನು ಪೋಲು ಮಾಡದೆ, ಅಗತ್ಯಕ್ಕೆ ತಕ್ಕಂತೆ ಸೀಮಿತವಾಗಿ ಬಳಸುವಂತೆ ಜಾಗೃತಿಮೂಡಿಸಬೇಕು ಎಂದು ಸೂಚಿಸಿದರು.

 ಪ್ರಸ್ತುತ ಕಲರಾ ಪ್ರಕರಣವು ಕಂಡು ಬರುತ್ತಿದ್ದು, ಪೂರೈಕೆ ಆಗುವ ನೀರು ಶುದ್ಧವಾಗಿದೆಯೇ ಎಂದು ಅದರ ಗುಣಮಟ್ಟವನ್ನು ಪರೀಕ್ಷಿಸಿದ ನಂತರ ಸಾರ್ವಜನಿಕರಿಗೆ ನೀರನ್ನು ಒದಗಿಸಬೇಕು ಎಂದು ತಿಳಿಸಿದರು.

 ಇದೇ ತಿಂಗಳಿನಲ್ಲಿ  ಮಳೆ ಬರುವ ಸಾಧ್ಯತೆಗಳಿದ್ದು, ಅಲ್ಲಿಯವರೆಗೆ ಪಶುಗಳಿಗೆ ಮೇವು, ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೆ ರೈತರಿಗೆ ಈ ವಾತಾವರಣಕ್ಕೆ ತಕ್ಕಂತಹ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

 ಅತಿ ಹೆಚ್ಚು ಜನ ಸೇರುವ ಸ್ಥಳಗಳಾದಂತಹ ಮಾರುಕಟ್ಟೆ, ಹೋಟೆಲ್ ಗಳು ಹಾಗೂ ಇತ್ಯಾದಿ ಜನ ಸೇರುವ ಸ್ಥಳಗಳಲ್ಲಿ ಕುಡಿಯುವ ನೀರಿನ ಅರವಟಿಕೆಗಳನ್ನು ಸ್ಥಾಪಿಸುವುದರ ಮೂಲಕ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತವಾಗಿಸಬೇಕು ಎಂದರು.

ಬಿಸಿಲು ಹೆಚ್ಚಾಗಿರುವುದರಿಂದ ಲಿಕ್ವಿಡ್ ಆಹಾರವನ್ನು ಸೇವಿಸಬೇಕು.ಕಾಟನ್ ಬಟ್ಟೆಗಳನ್ನು ಧರಿಸುವಂತೆ ಜನರಿಗೆ ತಿಳಿಸಬೇಕು ಎಂದು ಸಲಹೆ ನೀಡಿದರು.

 ಜಿಲ್ಲೆಯಾದ್ಯಂತ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ಅವರು 1077 ಕಂಟ್ರೋಲ್ ರೂಮ್ ಗೆ ಕರೆ ಮಾಡಿ ದೂರನ್ನು ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.

 ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ. ಎಂ ಗಾಯಿತ್ರಿ ಅವರು ಮಾತನಾಡಿ ನೀರಿನಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಆರೋಗ್ಯ ಸಮಸ್ಯೆ ಕಂಡು ಬರುವುದರಿಂದ ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಿದ ನಂತರ ಜನರಿಗೆ ನೀರಿನ ಪೂರೈಕೆ ಮಾಡಬೇಕು. ಅಲ್ಲದೆ ಯಾವ ಮಟ್ಟದಲ್ಲಿ ಎಷ್ಟು ಪ್ರಮಾಣದಲ್ಲಿ ಸಾರ್ವಜನಿಕರಿಗೆ ನೀರಿನ ಪೂರೈಕೆ ಆಗುತ್ತಿದೆ ಎಂಬುದನ್ನು ನೋಡಿಕೊಂಡು, ಯಾವುದೇ ಕಾರಣಕ್ಕೂ ಪೂರೈಕೆ ಸಮಸ್ಯೆ ಆಗದಂತೆ ಎಚ್ಚರವಹಿಸಬೇಕು ಎಂದರು.

ಕಾಲರ ಪ್ರಕರಣ ಕಂಡು ಬಂದಿರುವ ಕಾರಣ ಪ್ರತಿ ಹಂತದಲ್ಲಿಯೂ ಎಚ್ಚರಿಕೆ ಬಹಳ ಮುಖ್ಯ. ಬೀದಿಬದಿ ಮಾರಾಟ ಮಾಡುವ ವ್ಯಾಪಾರಿಗಳು ಸುರಕ್ಷಿತ ಆಹಾರವನ್ನು ಮಾರಾಟ ಮಾಡುತ್ತಿದ್ದಾರೆ ಎಂಬುದನ್ನು ಪರೀಕ್ಷಿಸಬೇಕು. ಪ್ರತಿಯೊಬ್ಬರೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತಾರಾದ ಎನ್.ಎನ್ ಮಧು, ನಂಜನಗೂಡು, ಪಿರಿಯಾಪಟ್ಣ, ಮೈಸೂರು, ಎಚ್ ಡಿ ಕೋಟೆ, ಸರಗೂರು, ತಿ.ನರಸೀಪುರ, ಹುಣಸೂರು ಹಾಗೂ ಕೆ ಆರ್ ನಗರ ತಾಲೂಕಿನ ತಹಶೀಲ್ದಾರರು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.