ಮನೆ ಅಪರಾಧ ಶಿವಮೊಗ್ಗ: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಶಿವಮೊಗ್ಗ: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

0

ಶಿವಮೊಗ್ಗ: ರಿಪ್ಪನ್‌ ಪೇಟೆ ಸಮೀಪದ ಅರಸಾಳು ಗ್ರಾ ಪಂ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿಯಾದ ಘಟನೆ ನಡೆದಿದೆ.

Join Our Whatsapp Group

ತಿಮ್ಮಪ್ಪ (58 ವ) ಮೃತ ವ್ಯಕ್ತಿ. ಇಂದು ಬೆಳಗ್ಗೆ ತಮ್ಮ ಮನೆ ಸಮೀಪದ ಕಾಡಿಗೆ ದರಗು (ದರಗೆಲೆ) ತರಲು ಹೋದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಆನೆ ದಾಳಿ ನಡೆಸುವ ವೇಳೆ ಮೃತ ತಿಮ್ಮಪ್ಪ ಕೂಗಿ ಕೊಂಡಿದ್ದು ಅಲ್ಲೇ ಸಮೀಪದಲ್ಲಿ ದರಗೆಲೆ ಗುಡಿಸುತ್ತಿದ್ದ ಮೂರ್ನಾಲ್ಕು ಮಹಿಳೆಯರು ಏನೆಂದು ನೋಡಿದಾಗ ತಿಮ್ಮಪ್ಪನನ್ನು ಆನೆ ತುಳಿದು ಸಾಯಿಸುತ್ತಿರುವುದು ಕಂಡುಬಂದಿದೆ. ಕೂಡಲೇ ಮನೆಯವರಿಗೆ ಮಾಹಿತಿ ತಿಳಿಸಿದ್ದಾರೆ. ಆನೆ ದಾಳಿಗೊಳಗಾಗಿ ಮೃತಪಟ್ಟ ತಿಮ್ಮಪ್ಪನ ದೇಹ ಸಂಪೂರ್ಣ ನಜ್ಜುಗುಜ್ಜಾಗಿದೆ.

ಕೂಲಿ ಕೆಲಸ ಮಾಡಿಕೊಂಡಿದ್ದ ಇವರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಸಂಖ್ಯೆಯ ಬಂಧು-ಬಳಗವನ್ನು ಅಗಲಿದ್ದಾರೆ.

ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಭಾರಿ ಸಂಖ್ಯೆಯಲ್ಲಿ ಜನ ಸಮೂಹ ಸೇರಿಕೊಂಡಿದೆ.

ರಿಪ್ಪನ್‌ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.