ಮನೆ ಕಾನೂನು ಅಕ್ರಮ ಆಸ್ತಿಗಳಿಕೆ ಆರೋಪ: ಪಿಡಿಒ ಮತ್ತವರ ಪತ್ನಿ, ಅತ್ತೆ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಕಾರ

ಅಕ್ರಮ ಆಸ್ತಿಗಳಿಕೆ ಆರೋಪ: ಪಿಡಿಒ ಮತ್ತವರ ಪತ್ನಿ, ಅತ್ತೆ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಕಾರ

0

ಬೆಂಗಳೂರು: ಸೇವೆಗೆ ಸೇರಿದ ದಿನದಿಂದ ತಮ್ಮ ಸೇವಾವಧಿಯಲ್ಲಿ ಶೇ.488 ರಷ್ಟು ಅಕ್ರಮ ಆಸ್ತಿ ಗಳಿಸಿದ್ದ ಆರೋಪದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ವಿರುದ್ದ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾದ ಪ್ರಕರಣ ರದ್ದುಗೊಳಿಸುವಂತೆ ಕೋರಿ ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಮ ಪಂಚಾಯತ್ ಪಿಡಿಓ ಡಿ.ಎಂ.ಪದ್ಮನಾಭ ಮತ್ತು ಅವರ ಪತ್ನಿ ಮತ್ತು ಅತ್ತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

Join Our Whatsapp Group

ಅಲ್ಲದೇ, ಪ್ರಕರಣದಲ್ಲಿ ಗುರುತರವಾದ ಅಪರಾಧವಿದ್ದು, ತನಿಖೆಗೆ ಹಸ್ತಕ್ಷೇಪ ಮಾಡಬಾರದು. ಪ್ರಾರಂಭದಲ್ಲಿಯೇ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು, ಸಾಕ್ಷ್ಯಗಳ ತಿರುಚುವುದಕ್ಕೆ ಅವಕಾಶ ನೀಡಿದಂತಾಗಲಿದೆ ಎಂದು ಪೀಠ ಅಭಿಪ್ರಾಯ ಪಟ್ಟಿದೆ. ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದರೆ ಅರ್ಜಿದಾರರು ಶೇ.488 ರಷ್ಟು ಅಕ್ರಮ ಆಸ್ತಿ ಗಳಿಸಿರುವುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಆದ್ದರಿಂದ ಈ ಹಂತದಲ್ಲಿ ಪ್ರಕರಣ ರದ್ದುಪಡಿಸುವುದು ಸರಿಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಡಿ.ಎಂ ಪದ್ಮನಾಭ ಅವರು ಬೆಂಗಳೂರು ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಮದಲ್ಲಿ ಪಂಚಾಯತ್ ಅಭಿವೃದ್ಧಿ ಹುದ್ದೆಗೆ ಬಡ್ತಿ ಪಡೆದರು. ಬಳಿಕ 2023ರಲ್ಲಿ ಅರ್ಜಿದಾರರು ಅಕ್ರಮ ಆಸ್ತಿ ಗಳಿಸಿದ್ದಾರೆ ಎನ್ನುವ ಬಗ್ಗೆ ಶಂಕೆ ವ್ಯಕ್ತವಾಯಿತು. ಈ ವಿಚಾರವಾಗಿ ಅವರ ವಿರುದ್ಧ ಪ್ರಾಥಮಿಕ ತನಿಖೆ ನಡೆಸಲಾಯಿತು. ತದನಂತರ ಬೆಂಗಳೂರು ನಗರ ವಲಯ ಲೋಕಾಯುಕ್ತ ಅಧೀಕ್ಷರ ನಿರ್ದೇಶನದ ಮೇರೆಗೆ ಲೋಕಾಯುಕ್ತ ಪೊಲೀಸರು ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿದರು. ಇದನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀರು, ಅರ್ಜಿದಾರರ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ. ಅದಕ್ಕೂ ಮುನ್ನ ಅರ್ಜಿದಾರರನ್ನು ಪ್ರಾಥಮಿಕ ವಿಚಾರಣೆಗೊಳಪಡಿಸಬೇಕಿತ್ತು. ಹಾಗೆ ಮಾಡದೇ ದಾಖಲಿಸಿರುವ ಪ್ರಕರಣ ಕಾನೂನು ಬಾಹಿರ ಎಂದು ವಿವರಿಸಿದರು. ಅಲ್ಲದೆ, ಯಾವುದೇ ಸರ್ಕಾರಿ ನೌಕರಿ ಹೊಂದಿಲ್ಲದಿದ್ದರು ಪ್ರಕರಣ ಸಂಬಂಧ ಅರ್ಜಿದಾರರ ಪತ್ನಿ ಹಾಗೂ ಅತ್ತೆಯ ವಿರುದ್ಧವೂ ದೂರು ದಾಖಲಿಸಲಾಗಿದೆ. ಸುಖಾಸುಮ್ಮನೆ ಉದ್ದೇಶ ಪೂರ್ವಕವಾಗಿ ಆಸ್ತಿಗಳ ಮೌಲ್ಯವನ್ನು ಹೆಚ್ಚಿಸಲಾಗಿದೆ. ಇದೆಲ್ಲ ಪೂರ್ವ ನಿಯೋಜಿತವಾಗಿದ್ದು ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿದರು.

ಲೋಕಾಯುಕ್ತ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ಆರೋಪಗಳು ಗಂಭೀರ ಸ್ವರೂಪದಿಂದ ಕೂಡಿದೆ. ಮಾತ್ರವಲ್ಲದೇ ಪ್ರಕರಣ ಸಂಬಂಧ ಪೊಲೀಸರು ಸಲ್ಲಿಸಿದ ಮೂಲ ವರದಿ ಅನೇಕ ವಿಷಯಗಳನ್ನು ಬಹಿರಂಗಪಡಿಸುತ್ತದೆ. ದಾಖಲೆಗಳ ಅನುಸಾರ ಅರ್ಜಿದಾರರು ಆದಾಯಕ್ಕೂ ಮೀರಿ ಅಕ್ರಮವಾಗಿ ಆಸ್ತಿ ಗಳಿಸಿರುವುದು ಕಂಡುಬರುತ್ತಿದೆ. ಪ್ರಕರಣ ವಿಚಾರಣಾ ಹಂತದಲ್ಲಿದ್ದು, ಈ ಹಂತದಲ್ಲಿ ಪ್ರಕರಣವನ್ನು ರದ್ದುಗೊಳಿಸದಂತೆ ನ್ಯಾಯಪೀಠವನ್ನು ಮನವಿ ಮಾಡಿದರು.