ಮನೆ ರಾಜಕೀಯ ರಾಜ್ಯದಲ್ಲಿ ಯಾವ ಸಚಿವರ ತಲೆದಂಡವೂ ಆಗಲ್ಲ: ಕೆ.ಹೆಚ್.ಮುನಿಯಪ್ಪ

ರಾಜ್ಯದಲ್ಲಿ ಯಾವ ಸಚಿವರ ತಲೆದಂಡವೂ ಆಗಲ್ಲ: ಕೆ.ಹೆಚ್.ಮುನಿಯಪ್ಪ

0

ಬೆಂಗಳೂರು: ರಾಜ್ಯದಲ್ಲಿ ಯಾವ ಸಚಿವರ ತಲೆದಂಡವೂ ಆಗಲ್ಲ. ಯಾಕೆಂದರೆ, ಕಾಂಗ್ರೆಸ್ ಪಕ್ಷದ ವೋಟ್ ಕಡಿಮೆಯಾಗಿಲ್ಲ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.

Join Our Whatsapp Group

ಸದಾಶಿವನಗರದಲ್ಲಿ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಅವರು ಮಾತನಾಡಿದರು.

ಬಿಜೆಪಿ-ದಳ ಒಂದಾಗಿದ್ದರಿಂದ ನಮಗೆ ಸೋಲಾಗಿದೆ. ಅದನ್ನು ನಾವು ಒಪ್ಪಿಕೊಳ್ಳಬೇಕಾಗಿದೆ. ಹಾಗಂತ ಕಾಂಗ್ರೆಸ್ ವೋಟ್ ಮೊದಲಿಗಿಂತ ಕಡಿಮೆಯಾಗಿಲ್ಲ. ಹಳೇ ಮೈಸೂರಲ್ಲಿ ಮೈತ್ರಿಯಿಂದ ನಮಗೆ ಸೋಲಾಗಿದೆ. ಕೋಲಾರದಲ್ಲಿ 1.5 ಲಕ್ಷ ವೋಟ್ ಜಾಸ್ತಿಯಾಗಿದೆ. ಗ್ಯಾರಂಟಿಗಳು ಕೆಲಸ ಮಾಡಿವೆ. ಎರಡು ಪಾರ್ಟಿ ಒಂದಾದಾಗ ಅನಾನುಕೂಲ ಆಗುತ್ತದೆ ಎಂದರು.

ಪಕ್ಷದಲ್ಲಿ ಹೈ ಪವರ್ ಕಮಿಟಿ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಈಗಾಗಲೇ ಹೇಳಿದ್ದೇನೆ. ಒಂದು ಕೋರ್ ಕಮಿಟಿ, ಹಿರಿಯರ ಕಮಿಟಿ ಇರಬೇಕು. ಅವರೆಲ್ಲರೂ ಸೇರಿ ತೀರ್ಮಾನ ಮಾಡಬೇಕು. ಆಗ ಕೆಲವು ವಿಚಾರದಲ್ಲಿ ಸಾಮಾಜಿಕ ನ್ಯಾಯ ಸಿಗುತ್ತದೆ. ಎಲೆಕ್ಷನ್ ಅನ್ನು ಕೇವಲ ಒಬ್ಬರಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು.

ನಾಯಕರ ಒಗ್ಗಟ್ಟಿನ ಕೊರತೆಯಿಂದಾಗಿ ನಾವು ಕೋಲಾರ ಕ್ಷೇತ್ರ ಗೆಲ್ಲುವಲ್ಲಿ ವಿಫಲರಾಗಿದ್ದೇವೆ. ಈ ವಿಚಾರವನ್ನು ನಾನು ಹಲವು ಬಾರಿ ಹೈಕಮಾಂಡ್ ನಾಯಕರು ಹಾಗೂ ರಾಜ್ಯ ನಾಯಕರ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಕೋಲಾರ ಜಿಲ್ಲೆಯಲ್ಲಿ ಶಾಸಕರ ಒಗ್ಗಟ್ಟಿನ ಕೊರತೆ ಹಾಗೂ ಶಾಸಕರ ಸ್ವಪ್ರತಿಷ್ಠೆಗಳ ಕಾರಣದಿಂದಾಗಿ ನಾವು ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದ್ದೇವೆ ಎಂದು ತಿಳಿಸಿದರು.

ಕೋಲಾರದಲ್ಲಿ ಈಗಲೂ ಕಾಲ ಮಿಂಚಿಲ್ಲ. ಮುಂಬರುವ ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಸ್ಥಾನಗಳನ್ನು ಗೆಲ್ಲಬೇಕಾದರೆ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಾನು ಮೊದಲಿನಿಂದಲೂ ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತಂದಿದ್ದು, ಅವರು ಸಮಸ್ಯೆ ಬಗೆಹರಿಸಿದ್ದರೆ ಅಲ್ಲಿ ಸೋಲಾಗುತ್ತಿರಲಿಲ್ಲ. ಅಲ್ಲಿನ ನಾಯಕರಿಗೆ ಈಗಲಾದರೂ ಬುದ್ಧಿಹೇಳಿ ಸಮಸ್ಯೆ ಸರಿಪಡಿಸಲಿ ಎಂದರು.