ಮನೆ ಅಪರಾಧ ಬೆಂಗಳೂರು: ಚಾಕುವಿನಿಂದ ಇರಿದು ಮಗನನ್ನೆ ಕೊಂದ ತಂದೆ

ಬೆಂಗಳೂರು: ಚಾಕುವಿನಿಂದ ಇರಿದು ಮಗನನ್ನೆ ಕೊಂದ ತಂದೆ

0

ಬೆಂಗಳೂರು: ತಂದೆಯೇ ಮಗನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಸೋಮವಾರ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದನಪಾಳ್ಯದಲ್ಲಿ ನಡೆದಿದೆ.

Join Our Whatsapp Group

ಅಂಜನ್ ಕುಮಾರ್ (27) ಹತ್ಯೆಯಾದ ದುರ್ದೈವಿಯಾಗಿದ್ದು, ಆತನ ತಂದೆ ವೆಂಕಟೇಶ್ (57) ನನ್ನು ಪೊಲೀಸರು ಬಂಧಿಸಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ವೆಂಕಟೇಶ್, ಮಗಳಿಗೆ ದ್ವಿಚಕ್ರ ವಾಹನ ಕೊಡಿಸಿದ್ದರು. ಭಾನುವಾರ ಸಂಜೆ ಸಹೋದರಿಯ ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಿದ್ದ ಅಂಜನ್, ಮನೆಗೆ ಬರುವಾಗ ಬೈಕ್​ ಅನ್ನು ಮರೆತು ಬಂದಿದ್ದ. ಸೋಮವಾರ ಬೆಳಗ್ಗೆ ಇದೇ ವಿಚಾರವಾಗಿ ವೆಂಕಟೇಶ್ ಪುತ್ರನನ್ನು ಪ್ರಶ್ನಿಸಿದ್ದರು.

ಈ ವೇಳೆ, ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಾಗ ಮಗ ಅಂಜನ್ ತಂದೆಯ ಮೇಲೆ ಹೆಲ್ಮೆಟ್​ನಿಂದ ಹಲ್ಲೆ ಮಾಡಿದ್ದ. ಇದರಿಂದ ಸಿಟ್ಟಿಗೆದ್ದ ವೆಂಕಟೇಶ್, ಅಡುಗೆ ಮನೆಯಲ್ಲಿದ್ದ ಚಾಕು ತಂದು ಮಗನ ಎದೆಗೆ ಇರಿದಿದ್ದರು. ಇರಿತದಿಂದ ತೀವ್ರ ರಕ್ತಸ್ರಾವವಾಗಿ ಅಂಜನ್ ಮೃತಪಟ್ಟಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ. ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡ ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರು, ಆರೋಪಿ ವೆಂಕಟೇಶನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.