ಮನೆ ರಾಜ್ಯ ಅಚ್ಚ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ನಿಧನ

ಅಚ್ಚ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ನಿಧನ

0

ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರು ಗುರುವಾರ ರಾತ್ರಿ (ಜುಲೈ 12) ನಿಧನ ಹೊಂದಿದ್ದಾರೆ. ಅಪರ್ಣಾ ಅವರು ಕೆಲ ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಕಿರುತೆರೆ ಹಾಗೂ ಹಿರಿತೆರೆ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಅವರು ಇಹಲೋಕ ತ್ಯಜಿಸಿರುವುದು ಅವರ ಅಭಿಮಾನಿಗಳಿಗೆ ಸಾಕಷ್ಟು ನೋವು ತಂದಿದೆ.  

Join Our Whatsapp Group

ಅಪರ್ಣಾ ಹುಟ್ಟಿದ್ದು 1966ರಲ್ಲಿ. 1985ರಲ್ಲಿ ರಿಲೀಸ್ ಆದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಮಸಣದ ಹೂವು’ ಚಿತ್ರದ ಮೂಲಕ ಸಿನಿರಂಗಕ್ಕೆ ಅಪರ್ಣಾ ಕಾಲಿಟ್ಟರು. ಈ ಚಿತ್ರದಲ್ಲಿ ಅಂಬರೀಷ್ ಮೊದಲಾದವರು ನಟಿಸಿದ್ದರು. ಮೊದಲ ಸಿನಿಮಾದಲ್ಲೇ ಅಪರ್ಣಾಗೆ ಜನಪ್ರಿಯತೆ ಸಿಕ್ಕಿತು.

ಸಿನಿ ಜರ್ನಿ

ಮಸಣದ ಹೂವು (1985), ಸಂಗ್ರಾಮ (1987), ನಮ್ಮೂರ ರಾಜ (1988), ಸಾಹಸ ವೀರ (1988), ಮಾತೃ ವಾತ್ಸಲ್ಯ (1988), ಒಲವಿನ ಆಸರೆ (1989), ಇನ್‌ಸ್ಪೆಕ್ಟರ್ ವಿಕ್ರಮ್ (1989), ಒಂದಾಗಿ ಬಾಳು (1989), ಡಾಕ್ಟರ್ ಕೃಷ್ಣ (1989), ಒಂಟಿ ಸಲಗ (1989), ಚಕ್ರವರ್ತಿ (1990) ಸಿನಿಮಾಗಳಲ್ಲಿ ನಟಿಸಿದ್ದರು. ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ಈ ವರ್ಷ ರಿಲೀಸ್ ಆದ ‘ಗ್ರೇ ಗೇಮ್ಸ್’ ಚಿತ್ರದಲ್ಲಿ.

ನಿರೂಪಣೆ..

2003ರಲ್ಲಿ ಪ್ರಸಾರ ಆರಂಭಿಸಿದ ‘ಮೂಡಲ ಮನೆ’ ಧಾರಾವಾಹಿಯಲ್ಲಿ ಅಪರ್ಣಾ ಬಣ್ಣ ಹಚ್ಚಿದರು. ಆ ಬಳಿಕ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. 90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳ ನಿರೂಪಣೆಯನ್ನು ಅವರು ಮಾಡಿದರು. ಕಿರುತೆರೆಯ ಬೇಡಿಕೆಯ ನಿರೂಪಕಿ ಆಗಿದ್ದರು. ವಿವಿಧ ಭಾರತಿಯಲ್ಲಿ ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. 1998ರಲ್ಲಿ ನಡೆದ ದೀಪಾವಳಿ ಕಾರ್ಯಕ್ರಮ ಒಂದರಲ್ಲಿ ಸತತ ಎಂಟು ಗಂಟೆ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು.

ಅಪರ್ಣಾ ಅವರು ಬಿಗ್ ಬಾಸ್​ ಗೂ ಕಾಲಿಟ್ಟಿದ್ದರು. 2013ರಲ್ಲಿ ಪ್ರಸಾರ ಕಂಡ ‘ಬಿಗ್ ಬಾಸ್ ಕನ್ನಡ ಸೀಸನ್ 1’ರಲ್ಲಿ ಅವರು ಸ್ಪರ್ಧೆಯಾಗಿದ್ದರು. ಸೃಜನ್ ಲೋಕೇಶ್ ನಿರೂಪಣೆಯಲ್ಲಿ ಮೂಡಿ ಬಂದ ‘ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿ ಗಮನ ಸೆಳೆದಿದ್ದರು. ನಮ್ಮ ಮೆಟ್ರೋದಲ್ಲಿ ಬರುವ ‘ಮುಂದಿನ ನಿಲ್ದಾಣ..’ ಎನ್ನುವ ಧ್ವನಿ ಅಪರ್ಣಾ ಅವರದ್ದೇ.

2005ರಲ್ಲಿ ವಾಸ್ತುಶಿಲ್ಪಿ ಹಾಗೂ ಕವಿ ನಾಗರಾಜ ವಸ್ತಾರೆ ಅವರನ್ನು ತಮ್ಮ ಬಾಳ ಸಂಗಾತಿಯಾಗಿ ಅಪರ್ಣಾ ಸ್ವೀಕರಿಸಿದ್ದರು.

ಶ್ವಾಸಕೋಶದ ಕ್ಯಾನ್ಸರ್

ಅಪರ್ಣಾ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿತ್ತು. ಕಳೆದ ಎರಡು ವರ್ಷಗಳಿಂದ ಅವರು ಕ್ಯಾನ್ಸರ್ ವಿರುದ್ಧ ಹೋರಾಡುತ್ತಾ ಇದ್ದರು. ಕ್ಯಾನ್ಸರ್ ನಾಲ್ಕನೇ ಸ್ಟೇಜ್​ನಲ್ಲಿ ಇತ್ತು. ಕಿಮೋ ಥೆರೆಪಿ ಕೂಡ ಮಾಡಿಸಿದ್ದರು. ಇದೆ ಅಕ್ಟೋಬರ್​ಗೆ ಅಪರ್ಣಾಗೆ 58 ವರ್ಷ ಆಗುತ್ತಿತ್ತು.