ಚಿಕ್ಕಬಳ್ಳಾಪುರ : ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಮನೆಯಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗಾಹುತಿಯಾಗಿ ನಗನಾಣ್ಯ ಸಹ ಸುಟ್ಟು ಕರಕಲಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಲ್ಲಿ ನಡೆದಿದೆ.
ಮುದ್ದೇನಹಳ್ಳಿ ಗ್ರಾಮದ ಶಿಕ್ಷಕ ಮಧುಸೂದನ್ ರೆಡ್ಡಿ ಎಂಬವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಮನೆಯೆಲ್ಲಿದ್ದ ಇಬ್ಬರು ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿದ ಪಾರಾಗಿ ಹೊರಗೆ ಒಡಿಬಂದಿದ್ದಾರೆ. ಶಿಕ್ಷಕ ಮಧುಸೂದನ್ ಶಾಲೆಗೆ ಹೋಗಿದ್ದು, ಪತ್ನಿ ಅನಿತಾ ನಂದಿನಿ ಬೂತ್ ಇಟ್ಟುಕೊಂಡು ಹಾಲಿನ ಕೇಂದ್ರಕ್ಕೆ ತೆರಳಿದ್ದರು. ಶಾಲೆಗೆ ರಜೆ ಇದ್ದ ಹಿನ್ನೆಲೆ ಮಕ್ಕಳು ಮಾತ್ರ ಮನೆಯಲ್ಲಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಮನೆ ಹೊತ್ತಿ ಉರಿಯಲಾರಂಭಿಸಿದೆ.
ಇದರಿಂದ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿ ಮನೆಯ ಬೀರುವಿನಲ್ಲಿದ್ದ 1 ಲಕ್ಷ ನಗದು ಹಾಗೂ ಸರಿಸುಮಾರು ಅರ್ಧ ಕೆಜಿ ಚಿನ್ನಾಭರಣಗಳು ಬೆಂಕಿಗೆ ಆಹುತಿಯಾಗಿವೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣಗಳು ನಾಶವಾಗಿ ಮನೆ ಮಾಲೀಕರು ಕಣ್ಣೀರು ಹಾಕುವಂತಾಗಿದೆ.
















