ಮುಂಬೈ(Mumbai): ಶಿವಸೇನಾ ನಾಯಕ ಮತ್ತು ಮಹಾರಾಷ್ಟ್ರ ಸಾರಿಗೆ ಸಚಿವ ಅನಿಲ್ ಡಿ. ಪರಬ್ ಅವರ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ಮುಂಜಾನೆ ದಾಳಿ ನಡೆಸಿದೆ.
ಏಕಕಾಲಕ್ಕೆ ಮುಂಬೈ, ರತ್ನಗಿರಿ, ಪುಣೆಯ ಅರ್ಧ ಡಜನ್ಗೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿರುವ ಇ ಡಿ ಅಧಿಕಾರಿಗಳು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಪರಬ್ ಅವರ ಅಧಿಕೃತ ಬಂಗಲೆಯ ಮೇಲೂ ದಾಳಿ ನಡೆದಿದೆ. ಪರಬ್ ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ. ಡಿ ಈ ದಾಳಿ ಕೈಗೊಂಡಿದೆ.
ಪರಬ್ ಅವರು ಕೇಂದ್ರ ತನಿಖಾ ಸಂಸ್ಥೆಗಳಿಗೆ ಗುರಿಯಾದ ಮಹಾ ವಿಕಾಸ್ ಅಘಾಡಿ ಸರ್ಕಾರದ ಎರಡನೇ ಸಚಿವ.ಫೆಬ್ರುವರಿಯಲ್ಲಿ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ, ಸಚಿವ ನವಾಬ್ ಮಲಿಕ್ ಕೂಡ ದಾಳಿಗೆ ಒಳಗಾಗಿದ್ದರು. ಸದ್ಯ ಅವರು ಜೈಲಿನಲ್ಲಿದ್ದಾರೆ.
ಈ ದಾಳಿಗಳ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರತಿಪಕ್ಷ ಬಿಜೆಪಿ ನಾಯಕ ಕಿರಿತ್ ಸೋಮಯ್ಯ, ಇದು ಕೇವಲ ಆರಂಭ. ಮುಂದಿನ ದಿನಗಳಲ್ಲಿ ಹಲವರ ಮೇಲೆ ಇಂಥದ್ಧೇ ಕ್ರಮಗಳು ಜರುಗಲಿವೆ ಎಂದು ಹೇಳಿದ್ದರು.