ಮನೆ ಕಾನೂನು ಸಾಗರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಹೈಕೋರ್ಟ್ ತಡೆ

ಸಾಗರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಹೈಕೋರ್ಟ್ ತಡೆ

0

ಸಾಗರ: ಸಾಗರ ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ಪಟ್ಟಿ ಘೋಷಣೆಯಾಗಿ ಚುನಾವಣೆಗೂ ದಿನಾಂಕ ನಿಗದಿಯಾಗಿದ್ದರ ನಡುವೆ ಕಾಂಗ್ರೆಸ್‌ನ ಹಿರಿಯ ಸದಸ್ಯೆ, ಮಾಜಿ ಅಧ್ಯಕ್ಷ ಎನ್.ಲಲಿತಮ್ಮ ಮೀಸಲಾತಿ ಪಟ್ಟಿಯಲ್ಲಿ ಆವರ್ತನ ಪದ್ಧತಿ ಪಾಲಿಸಿಲ್ಲ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಮಂಗಳವಾರ ಚುನಾವಣೆಗೆ ತಡೆಯಾಜ್ಞೆ ನೀಡಿದೆ.

Join Our Whatsapp Group

ಕಾಂಗ್ರೆಸ್ ಸದಸ್ಯೆಯ ಕ್ರಮದಿಂದ ಬಹುಮತ ಪಡೆದ ಬಿಜೆಪಿಗೆ ಬೇಸರವಾಗಿರುವುದರ ಜೊತೆಗೆ ಕಾಂಗ್ರೆಸ್‌ನ ತಾಲೂಕು ಘಟಕ ಕೂಡ ಅಸಮಾಧಾನಗೊಂಡ ಪರಿಸ್ಥಿತಿ ನಿರ್ಮಾಣವಾಗಿದೆ.

ತಡೆಯಾಜ್ಞೆ ಉಭಯ ಪಕ್ಷದ ಆಕಾಂಕ್ಷಿಗಳಿಗೂ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಮುಖ್ಯವಾಗಿ ಬಿಜೆಪಿ ಅವಧಿಯ ಆಡಳಿತ ವಿರೋಧಿ ನೀತಿಯನ್ನು ಇಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಬಹುಮತದ ಕನಸು ಕಂಡಿದ್ದ ಕೈ ಪಡೆಗೆ ತೀವ್ರ ಹಿನ್ನಡೆಯೆಂದೇ ಹೇಳಲಾಗುತ್ತಿದೆ.

ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೊದಲ ಅವಧಿಯಲ್ಲಿ ಘೋಷಣೆಯಾಗಿದ್ದ ಮೀಸಲಾತಿ ಪಟ್ಟಿಯೇ ಪುನರಾವರ್ತನೆಯಾಗಿದ್ದು, ಅಧ್ಯಕ್ಷರಾಗಲು ಬಹುಮತದ ಬಿಜೆಪಿ ಪಾಳೆಯದ ಮಹಿಳಾ ಆಕಾಂಕ್ಷಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಚುನಾವಣೆಗೆ ವಾರವಿರುವಾಗ ಲಲಿತಮ್ಮ ತಕರಾರು ಸಲ್ಲಿಸಿ, ಸಾಮಾಜಿಕ ನ್ಯಾಯದ ಅಡಿಯಲ್ಲಿ ಅಧಿಕಾರ ಸಿಗದ ಸಮುದಾಯಕ್ಕೂ ಪ್ರಾತಿನಿಧ್ಯ ಸಿಗಬೇಕು ಎನ್ನುವ ಸಂವಿಧಾನದ ಅಭಿಪ್ರಾಯ ಉಲ್ಲಂಘಿಸಲಾಗಿದೆ ಎಂದು ಉಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಲಲಿತಮ್ಮ, ಇದು ಕೇವಲ ನನ್ನೊಬ್ಬಳ ನಡೆಯಲ್ಲ. ಎಲ್ಲ ಸದಸ್ಯರ ಅಭಿಪ್ರಾಯ ಪಡೆದೇ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದೇನೆ. ಪಕ್ಷದಲ್ಲಿ ಕೆಲವರಿಗೆ ಸಂತೋಷವಾಗಿದೆ. ಶಾಸಕರಿಗೂ ಮಾಹಿತಿ ನೀಡಿದ್ದೇನೆ. ಸಮಾಜದ ಶೋಷಿತ ಸಮುದಾಯಗಳಿಗೂ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಧಿಕಾರ ಸಿಗಬೇಕೆನ್ನುವ ಉದ್ದೇಶ ಅಡಗಿದೆ. ಎಸ್‌ಸಿ ಮಹಿಳೆ, ಎಸ್‌ಟಿ ವರ್ಗದ ಪುರುಷ ಮಹಿಳೆಯರಲ್ಲಿ ಯಾರಿಗಾದರೂ ಅಧ್ಯಕ್ಷ ಸ್ಥಾನ ಕೊಡುವಂತೆ ಕೇಳಿದ್ದೇನೆ ಎಂದರು.

ಈ ಕುರಿತು ಬೇಸರ ವ್ಯಕ್ತಪಡಿಸಿರುವ ಮಾಜಿ ಅಧ್ಯಕ್ಷೆ ಬಿಜೆಪಿಯ ಮಧುರಾ ಶಿವಾನಂದ, ನಗರಸಭೆಗೆ ಕಾಗದಪತ್ರ ಹಿಡಿದು ಬರುವ ಬಡ ಹಾಗೂ ತಳವರ್ಗದವರಿಗೂ ಕೆಲಸ ಮಾಡಿಸಿಕೊಡಲಾಗದ ಸ್ಥಿತಿಯಿದೆ. ಸದಸ್ಯರ ಮಾತಿಗೂ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ. ನ್ಯಾಯಾಲಯದ ತಡೆಯಾಜ್ಞೆಯಿಂದ ಬಡಜನರಿಗೆ ಮತ್ತೆ ತೊಂದರೆಯಾಗುತ್ತದೆ. ಲಲಿತಮ್ಮನವರಿಗೂ ಸ್ಪರ್ಧಿಸುವ ಅವಕಾಶವಿತ್ತು. ಉಳಿದ 14 ತಿಂಗಳು ಯಾರೇ ಅಧ್ಯಕ್ಷರಾದರೂ ಜನರ ಕೆಲಸಕ್ಕೆ ಅಡ್ಡಿಯಾಗುತ್ತಿರಲಿಲ್ಲ. ಜನಪ್ರತಿನಿಧಿಗಳ ಹಕ್ಕು ಕಿತ್ತುಕೊಳ್ಳುವ ಕೀಳು ಮನಸ್ಥಿತಿ ಇದರಲ್ಲಿದೆ ಎಂದಿದ್ದಾರೆ.

ನಗರಸಭೆ ಸದಸ್ಯ, ಕಾಂಗ್ರೆಸ್‌ನ ಸೈಯ್ಯದ್ ಜಾಕಿರ್ ಪ್ರತಿಕ್ರಿಯಿಸಿ, ಜನಪ್ರತಿನಿಧಿಗಳು ಅಧ್ಯಕ್ಷರಾದರೆ ನಗರದ ಅಭಿವೃದ್ಧಿ ಕಾರ್ಯ ಸುಸೂತ್ರವಾಗಿರುತ್ತದೆ. ಮುಂದಿನ 14 ತಿಂಗಳ ಅವಧಿಯಲ್ಲಾದರೂ ಜನರ ಕಷ್ಟಗಳಿಗೆ ಸ್ಪಂದಿಸಬಹುದು ಎಂದುಕೊಂಡಿದ್ದಕ್ಕೆ ಈಗ ತಂದಿರುವ ತಡೆಯಾಜ್ಞೆ ದೊಡ್ಡ ಹೊಡೆತ ನೀಡಿದೆ. ಯಾರೇ ಅಧ್ಯಕ್ಷರಾದರೂ ನಗರದ ಎಲ್ಲ ವಾರ್ಡಿನ ಕೆಲಸಕ್ಕೆ ತೊಂದರೆಯಾಗುತ್ತಿರಲಿಲ್ಲ ಎಂದು ಪ್ರತಿಪಾದಿಸುತ್ತಾರೆ.

ಕಳೆದ 15ತಿಂಗಳಿನಿಂದ ಜನಪ್ರತಿನಿಧಿಯಾಗಿದ್ದೂ ಚಿಕ್ಕಪುಟ್ಟ ವಿಚಾರಕ್ಕೂ ಅಧಿಕಾರಿಗಳೆದುರು ನಿಲ್ಲಬೇಕಾದ ಸ್ಥಿತಿಯಲ್ಲಿರುವ ಉಭಯ ಪಕ್ಷದ ಸದಸ್ಯರಿಗೆ ಇದು ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗಿದೆ.

ಮೀಸಲಾತಿ; ಗೊಂದಲಗಳ ಗೂಡು

ಸಾಗರ ನಗರಸಭೆಯ ಮೀಸಲಾತಿ ಕುರಿತಾಗಿ ವ್ಯಾಪಕ ಅಸಮಾಧಾನಗಳಿವೆ. ಕಳೆದ ಹದಿನೈದು ವರ್ಷದಿಂದ ಸಾಮಾನ್ಯ ಪುರುಷ ಹಾಗೂ ಬಿಸಿಎಂ ಎ ಪುರುಷ ಕೆಟಗೆರಿ ಇಲ್ಲಿಗೆ ಬಂದಿಲ್ಲ. ಬಿಸಿಎಂ ಬಿ ಪುರುಷ ಅಥವಾ ಮಹಿಳಾ ಕೆಟಗೆರಿ ಈವರೆಗೂ ಬಂದಿಲ್ಲ. ಶೇ. 50ರ ಮೀಸಲಾತಿ ಎಂದರೆ ಯಾವುದು ಎಂದು ಪ್ರಶ್ನಿಸುವಂತಾಗಿದೆ. ಮುಸ್ಲಿಮ್, ಕ್ರಿಶ್ಚಿಯನ್, ಲಿಂಗಾಯತ, ಒಕ್ಕಲಿಗ ಮೊದಲಾದ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ.

ಮೀಸಲಾತಿಯ ಅನ್ಯಾಯದ ಹೊರತಾಗಿ ಬಿಜೆಪಿಯೇ ಮತ್ತೊಮ್ಮೆ ಆಡಳಿತ ನಡೆಸಲಿ ಎಂದು ಹಲವು ಕಾಂಗ್ರೆಸ್ ಸದಸ್ಯರು ಬಯಸಿದ್ದರು. ಮೊದಲ ಅವಧಿಯಲ್ಲಿ ಬಿಜೆಪಿಯವರ ಕಳಪೆ ಅಧಿಕಾರದಿಂದ ಜನರೇ ಬೇಸತ್ತಿದ್ದಾರೆ. ಈಗ ಅವರಿಗೇ ಅಧಿಕಾರ ಕೊಟ್ಟು, ಅವರ ಜನವಿರೋಧಿ ನೀತಿಗಳನ್ನು ಎತ್ತಿತೋರಿಸೋಣ. 14 ತಿಂಗಳ ಬಳಿಕ ಬರುವ ಚುನಾವಣೆಯಲ್ಲೇ ಬಹುಮತದೊಂದಿಗೆ ಅಧಿಕಾರಕ್ಕೇರೋಣ ಎಂಬ ಆಶಯದಲ್ಲಿದ್ದ ಕಾಂಗ್ರೆಸ್ಸಿಗರಿಗೆ ಲಲಿತಮ್ಮ ನಡೆ ಮುಜುಗರ ತರಿಸಿದೆ. ಹೆಸರು ಹೇಳಲಿಚ್ಛಿಸದ ಸದಸ್ಯರು ಈ ಬಗ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ.