ಮನೆ ಕಾನೂನು ಮೈಸೂರು: ದೈಹಿಕ ಸಂಪರ್ಕಕ್ಕೆ ಒಪ್ಪದ ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ

ಮೈಸೂರು: ದೈಹಿಕ ಸಂಪರ್ಕಕ್ಕೆ ಒಪ್ಪದ ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ

0

ಮೈಸೂರು: ದೈಹಿಕ ಸಂಪರ್ಕಕ್ಕೆ ಸಹಕರಿಸದ ಪತ್ನಿಯ ರುಂಡ ಕತ್ತರಿಸಿ ಕೊಲೆಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪತಿಗೆ ಮೈಸೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿತು. ಮೈಸೂರು ತಾಲೂಕಿನ ಚಟ್ನಹಳ್ಳಿ ಗ್ರಾಮದ ಜವರಾಜು ಶಿಕ್ಷೆಗೆ ಗುರಿಯಾದ ಅಪರಾಧಿ.

Join Our Whatsapp Group

ಕೊಲೆ ಪ್ರಕರಣದ ವಿವರ: 30 ವರ್ಷಗಳ ಹಿಂದೆ ಲಲಿತಾದ್ರಿಪುರದ ಮಹಿಳೆಯನ್ನು ಜವರಾಜು ವಿವಾಹವಾಗಿದ್ದ. ಮದುವೆಯಾದಾಗಿನಿಂದಲೂ ಪತ್ನಿಯ ನಡತೆಯ ಬಗ್ಗೆಯೇ ಸಂಶಯ ಹೊಂದಿದ್ದ ಜವರಾಜು, ನಿತ್ಯ ಜಗಳವಾಡುತ್ತಿದ್ದನಂತೆ. ಇದರಿಂದ ನೊಂದ ಮಹಿಳೆ ತವರು ಮನೆ ಸೇರಿ ವಾಪಸ್ ಬಂದಿರಲಿಲ್ಲ. ಬಳಿಕ ಜವರಾಜು ಚಟ್ನಹಳ್ಳಿಯ ಪುಟ್ಟಮ್ಮ ಎಂಬವರನ್ನು ಎರಡನೇ ಮದುವೆಯಾಗಿದ್ದ. ಈ ವಿವಾಹದ ಬಳಿಕವೂ ಜವರಾಜ ತನ್ನ ಪತ್ನಿ ಮೇಲೆ ಹಲ್ಲೆ, ದೈಹಿಕ ಹಿಂಸೆ ನೀಡುತ್ತಿದ್ದ. ಇವರಿಗೆ ಓರ್ವ ಪುತ್ರಿ ಕೂಡ ಇದ್ದಾರೆ.

ಪತ್ನಿಯ ತಲೆ ಕತ್ತರಿಸಿದ್ದ ಪತಿ: 2022 ಜೂ.27ರಂದು ಜವರಾಜು ಪತ್ನಿಯನ್ನು ದೈಹಿಕ ಸಂಪರ್ಕಕ್ಕೆ ಸಹಕರಿಸುವಂತೆ ಬಲವಂತ ಮಾಡಿದ್ದಾನೆ. ಅದಕ್ಕೆ ಒಪ್ಪದೇ ಇದ್ದಾಗ ಕೋಪಗೊಂಡು ಮಲಗಿದ್ದ ಪತ್ನಿಯ ತಲೆಯನ್ನು ಮಚ್ಚಿನಿಂದ ಕತ್ತರಿಸಿ ಮಂಚದ ಮೇಲಿಟ್ಟು ಬೈಕ್‌ನಲ್ಲಿ ಪರಾರಿಯಾಗಿದ್ದ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ವರುಣಾ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿ ಆತನ ವಿರುದ್ದ ನ್ಯಾಯಾಲಯದಲ್ಲಿ ದೋಷರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಳವರ್, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆಯೊಂದಿಗೆ 15 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.

ಸರ್ಕಾರದ ಪರ ಸರಕಾರಿ ಅಭಿಯೋಜಕರಾದ ಬಿ.ಈ.ಯೋಗೇಶ್ವರ ವಾದ ಮಂಡಿಸಿದ್ದರು.