ಮನೆ ಅಪರಾಧ ಬಾಲಕಿಯೊಂದಿಗೆ ಅನುಚಿತವಾಗಿ ವರ್ತನೆ ಆರೋಪ: ಯುವಕನ ಮೇಲೆ ಅಮಾನುಷ ಹಲ್ಲೆ

ಬಾಲಕಿಯೊಂದಿಗೆ ಅನುಚಿತವಾಗಿ ವರ್ತನೆ ಆರೋಪ: ಯುವಕನ ಮೇಲೆ ಅಮಾನುಷ ಹಲ್ಲೆ

0

ದಾವಣಗೆರೆ: ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಯುವಕನೊಬ್ಬನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ಮಂಗಳವಾರ ದಾವಣಗೆರೆ ಜಿಲ್ಲೆಯಲ್ಲಿ ವರದಿಯಾಗಿದೆ.

ಘಟನೆಯನ್ನು ಖಂಡಿಸಿರುವ ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ದಾಳಿಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ದಾವಣಗೆರೆ ನಗರದ ಜಾಲಿನಗರ ನಿವಾಸಿ ಶ್ರೀನಿವಾಸ್ ಎಂಬುವವರ ಮೇಲೆ ಭಾನುವಾರ ಸಂಜೆ ಗುಂಪೊಂದು ಹಲ್ಲೆ ನಡೆಸಿತ್ತು. ದಾಳಿಯ ನಂತರ ದಾಳಿಕೋರರು, ಅವರನ್ನು ನಂತರ ನಿರ್ಜನ ಪ್ರದೇಶದಲ್ಲಿ ಬಿಟ್ಟು ತೆರಳಿದ್ದರು.

ಪ್ರಜ್ಞೆ ಬಂದ ನಂತರ ಯುವಕ ಪೋಷಕರಿಗೆ ಕರೆ ಮಾಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ತಪ್ಪಿತಸ್ಥರ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಹಾಗೂ ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ.

ಇದೊಂದು ನೈತಿಕ ಪೊಲೀಸ್‌ಗಿರಿ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದು, ‘ಯುವಕನು ಅನುಚಿತವಾಗಿ ವರ್ತಿಸಿದ್ದರೆ, ಆತನನ್ನು ಪೊಲೀಸರಿಗೆ ಒಪ್ಪಿಸಬೇಕಾಗಿತ್ತು ಅಥವಾ ಆತನ ವಿರುದ್ಧ ದೂರು ದಾಖಲಿಸಬೇಕಾಗಿತ್ತು. ಬದಲಾಗಿ, ಗುಂಪು ಆತನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದೆ’ ಎಂದು ದೂರಿದರು.

‘ಹಲ್ಲೆಯ ನಂತರ, ಯುವಕನ ವಿರುದ್ಧವೇ ಪೊಲೀಸರಿಗೆ ದೂರು ನೀಡಲಾಗಿದೆ. ಇದೊಂದು ಷಡ್ಯಂತ್ರವಾಗಿದ್ದು, ದಾಳಿಕೋರರನ್ನು ಬಂಧಿಸಬೇಕು’ ಎಂದು ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಹಲ್ಲೆಗೊಳಗಾದ ಯುವಕನಿಗೆ ಇತ್ತೀಚೆಗಷ್ಟೇ ನಿಶ್ಚಿತಾರ್ಥವಾಗಿದ್ದು, ಶೀಘ್ರದಲ್ಲೇ ಮದುವೆ ನಡೆಯಲಿದೆ. ಆತನ ಮೇಲಿನ ಆರೋಪಗಳು ಆಧಾರರಹಿತ ಎಂದು ಪೋಷಕರು ತಿಳಿಸಿದ್ದಾರೆ.

ಸಂತ್ರಸ್ತನನ್ನು ಶಾದಿ ಮಹಲ್ ಪ್ರದೇಶಕ್ಕೆ ಎಳೆದೊಯ್ದು ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಯುವಕನ ಮೇಲಿನ ಹಲ್ಲೆಗೆ ಪೊಲೀಸರು ಇನ್ನೂ ಪ್ರತಿಕ್ರಿಯಿಸಿಲ್ಲ.

ಹಿಂದಿನ ಲೇಖನಜಾತಿಗಣತಿಗೆ ನಾನು ವಿರೋಧ ವ್ಯಕ್ತಪಡಿಸಿಲ್ಲ: ಡಿ.ಕೆ. ಶಿವಕುಮಾರ್  ಸ್ಪಷ್ಟನೆ
ಮುಂದಿನ ಲೇಖನಇಂದು ಭಾರತ-ದಕ್ಷಿಣ ಆಫ್ರಿಕಾ ದ್ವಿತೀಯ ಟಿ 20 ಪಂದ್ಯ